ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ನಿಂದ 1900 ಮಂದಿಗೆ ವಿದ್ಯಾರ್ಥಿ ವೇತನ ವಿತರಣೆ
ಉಡುಪಿ, ಜು.14: ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಸಮಾಜದ ಪ್ರತಿಭಾವಂತ ಮತ್ತು ಆರ್ಥಿಕವಾಗಿ ಹಿಂದುಳಿದ 1900 ವಿದ್ಯಾರ್ಥಿಗಳಿಗೆ 2018-19ನೆ ಸಾಲಿನ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಶನಿವಾರ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಜರಗಿತು.
ಸಮಾರಂಭವನ್ನು ಉದ್ಘಾಟಿಸಿದ ಬ್ಯಾಂಕ್ ಆಫ್ ಬರೋಡ ಮಂಗಳೂರು ವಲಯದ ಮಹಾಪ್ರಬಂಧಕ ಎಂ.ಜೆ.ನಾಗರಾಜ್ ಮಾತನಾಡಿ, ವಿದ್ಯಾರ್ಥಿ ಗಳು ದಿನ ಪತ್ರಿಕೆಯನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳ ಜ್ಞಾನ ವೃದ್ಧಿ ಜೊತೆ ಭಾಷೆ ಮೇಲೆ ಹಿಡಿತ ಸಾಧಿಸಲು ಸಾಧ್ಯ ವಾಗುತ್ತದೆ ಎಂದರು.
ವಿದ್ಯಾರ್ಥಿಗಳು ಮುಂದೆ ತಮ್ಮ ಯಾವುದೇ ವೃತ್ತಿಯ ಜೊತೆ ಕಲೆ, ಸಂಗೀತ, ನಾಟಕಗದಳಂತ ಉತ್ತಮ ಪ್ರವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ತಮ್ಮ ಒತ್ತಡ ನಿರ್ವಹಣೆ ಮಾತ್ರವಲ್ಲದೆ ಸದಾ ಚಟುವಟಿಯಿಂದ ಇರಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ನ ಪ್ರವರ್ತಕ ಡಾ.ಜಿ.ಶಂಕರ್ ಮಾತನಾಡಿ, ಬ್ಯಾಂಕ್ ಆಫ್ ಬರೋಡಾ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಸಾಲ ಸೌಲಭ್ಯ ವನ್ನು ನೀಡುತ್ತಿದ್ದು, ಬಡ ಹಾಗೂ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳು ಯಾವುದೇ ಭದ್ರತೆ ಇಲ್ಲದೆ 7.50ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಪಡೆಯ ಬಹುದಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಮುಂದೆ ಈ ಯೋಜನೆಯ ಅರ್ಹ 500 ಮಂದಿ ಫಲಾನುಭವಿಗಳಿಗೆ ಇದೇ ಹಾಲ್ನಲ್ಲಿ ಸಾಲ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಳೆದ 17 ವರ್ಷಗಳಿಂದ ನಾವು ಅರ್ಹರಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಿ ಕೊಂಡು ಬರುತ್ತಿದ್ದೇವೆ. ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಮುಂದೆ ಸಮಾಜ ಇತರ ಬಡವರಿಗೆ ಸಹಾಯ ಮಾಡಬೇಕು. ವಿದ್ಯಾರ್ಥಿಗಳು ಮೊಬೈಲನ್ನು ಹೆಚ್ಚು ಬಳಸದೆ ಸಂಸ್ಕಾರಯುತವಾಗಿ ಸಮಾಜ, ಶಾಲೆ ಮತ್ತು ಹೆತ್ತವರಿಗೆ ಮಾದರಿಯಾಗಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಸೆಸೆಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪಲ್ಲವಿ(ಕನ್ನಡ ಮಾಧ್ಯಮ), ಎಂ.ಮನ್ವಿತ್ ಪ್ರಭು(ಆಂಗ್ಲ ಮಾಧ್ಯಮ) ಮತ್ತು ಪಿಯುಸಿ ಅತ್ಯಧಿಕ ಅಂಕ ಗಳಿಸಿದ ನಿವೇದಿತ(ಕಲಾ), ಪ್ರತೀಕ್ಷಾ ಪೈ(ವಾಣಿಜ್ಯ), ರಾಯೀಶ ಮತ್ತು ಸ್ವಾತಿ (ವಿಜ್ಞಾನ) ಅವರಿಗೆ ಪುರಸ್ಕಾರ ನೀಡಲಾಯಿತು.
ಕಿದಿಯೂರು ಶ್ಯಾಮಿಲಿ ಪದವಿ ಪೂರ್ವ ಕಾಲೇಜಿನ ಶುಭಶ್ರೀ ಎಸ್. ಶೆಣೈ, ಸುಮಂತ್ ಕೆ.ಎಸ್. ಅವರನ್ನು ಗೌರವಿಸಲಾಯಿತು. ಹಾವು ಹಿಡಿಯುವ ಕೃಷ್ಣ ಮೂರ್ತಿ ಹೆಬ್ಬಾರ್ ಅವರನ್ನು ಸನ್ಮಾನಿಸಲಾಯಿತು. ಅವಿಭಜಿತ ದ.ಕ. ಜಿಲ್ಲೆಯ ಹಿರಿಯ ಅಶಕ್ತ ಯಕ್ಷಗಾನ ಕಲಾವಿದರಿಗೆ ಸಹಾಯಧನವನ್ನು ವಿತರಿಸಲಾಯಿತು.
ಬ್ಯಾಂಕ್ ಆಫ್ ಬರೋಡ ಉಡುಪಿ ಪ್ರಾದೇಶಿಕ ಶಾಖೆಯ ಉಪ ಮಹಾ ಪ್ರಬಂಧಕ ರವೀಂದ್ರ ರೈ ವಿದ್ಯಾರ್ಥಿ ವೇತನವನ್ನು ವಿತರಿಸಿದರು. ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ವಿನಯ ಕರ್ಕೇರ ಉಪಸ್ಥಿತರಿದ್ದರು. ಟ್ರಸ್ಟ್ನ ಸದಸ್ಯ ಆನಂದ ಎಸ್.ಕೆ. ಸ್ವಾಗತಿಸಿದರು. ಶಿವರಾವ್ ಕೆ. ಕಾರ್ಯಕ್ರಮ ನಿರೂಪಿಸಿದರು.