ಜುಲೈ ಕೊನೆಯೊಳಗೆ ಗ್ರಾಪಂಗಳಲ್ಲಿ ಕೆಡಿಪಿ ಸಭೆ ನಡೆಸಿ: ಸಿಂಧೂ ರೂಪೇಶ್

Update: 2019-07-16 14:45 GMT

ಉಡುಪಿ, ಜು.16: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳು ಜುಲೈ ತಿಂಗಳ ಕೊನೆಯೊಳಗೆ ಗ್ರಾಪಂ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಗಳನ್ನು ನಡೆಸಿ ವರದಿ ನೀಡುವಂತೆ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ. ರೂಪೇಶ್ ಸೂಚಿಸಿದ್ದಾರೆ.

ಮಂಗಳವಾರ, ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಗಾಪಂಗಳಲ್ಲಿ ತ್ರೈಮಾಸಿಕ ಕೆಡಿಪಿ ಸಭೆಗಳನ್ನು ನಡೆಸುವಂತೆ ಸರಕಾರದ ಸೂಚನೆಯಿದ್ದು, ಅದರಂತೆ ಈ ವರ್ಷದ ಮೊದಲ ಕೆಡಿಪಿ ಸಭೆಯನ್ನು ಜುಲೈ ತಿಂಗಳ ಅಂತ್ಯದೊಳಗೆ ನಡೆಸಿ ವರದಿ ನೀಡುವಂತೆ ಎಲ್ಲಾ ತಾಲೂಕುಗಳ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದ ಸಿಇಒ, ಗ್ರಾಪಂಗಳ ಕೆಡಿಪಿ ಸಭೆಯಲ್ಲಿ ಬಾಗವಹಿಸುವ ತಾಲೂಕು ಮಟ್ಟದ ಅಧಿಕಾರಿಗಳನ್ನು ನಿಯೋಜಿಸಿ, ಅವರ ಪಟ್ಟಿಯನ್ನು ಸಂಬಂಧಪಟ್ಟ ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ನೀಡುವಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಪಂ ಕೆಡಿಪಿ ಸಭೆಗೆ ನಿಯೋಜಿಸಿದ ಎಲ್ಲಾ ತಾಲೂಕು ಮಟ್ಟದ ಅಧಿಕಾರಿ ಗಳು ಕಡ್ಡಾಯವಾಗಿ ಸಭೆಗೆ ಹಾಜರಾಗಿ, ಅಲ್ಲಿನ ಸಮಸ್ಯೆಗಳ ನಿವಾರಣೆ ಬಗ್ಗೆ ಗಮನಹರಿಸುವಂತೆ ಸೂಚಿಸಿದ ಸಿಂಧೂ ಬಿ ರೂಪೇಶ್, ಅಕ್ಟೋಬರ್ ತಿಂಗಳಿ ನಿಂದ ತಿಂಗಳ ಮೊದಲನೇ ವಾರದಲ್ಲಿ ಗ್ರಾಪಂ ಕೆಡಿಪಿ ಸಭೆಗಳನ್ನು ಆಯೋಜಿ ಸುವಂತೆ ಎಲ್ಲಾ ತಾಲೂಕುಗಳ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ತೆರಿಗೆ ಸಂಗ್ರಹದಲ್ಲಿ ರಾಜ್ಯಕ್ಕೆ 2ನೇ ಸ್ಥಾನ: 2018-19ನೇ ಸಾಲಿನ ಗ್ರಾಪಂ ತೆರಿಗೆ ವಸೂಲಾತಿಯಲ್ಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ 2ನೇ ಸ್ಥಾನ ಪಡೆದಿದೆ. ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿರುವ ಮೊಬೈಲ್ ಟವರ್‌ಗಳ ತೆರಿಗೆಯನ್ನೂ ಸಹ ಸಂಗ್ರಹಿಸುವಂತೆ ಸಿಇಒ ಸೂಚಿಸಿದರು.

ಗ್ರಾಪಂಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಪ್ರಾರಂಭಿಸಲು ಜಿಲ್ಲೆಗೆ 40 ಗುರಿ ನೀಡಿದ್ದು, ಈಗಾಗಲೇ 10 ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ. ಘಟಕ ಪ್ರಾರಂಭಿ ಸಲು ಗ್ರಾಪಂಗಳು ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಿಳಿಸಿದ ಸಿಇಓ, ಗ್ರಾಪಂ ವ್ಯಾಪ್ತಿಯ ಜನನಿಬಿಡ ಪ್ರದೇಶದಲ್ಲಿ ಸಮುದಾಯ ಶೌಚಾಲಯ ಅಗತ್ಯವಿರುವ ಪಂಚಾಯತ್‌ಗಳು ಪ್ರಸ್ತಾವನೆ ಸಲ್ಲಿಸುವಂತೆಯೂ ಹೇಳಿದರು.

ಗ್ರಾಪಂಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಪ್ರಾರಂಭಿಸಲು ಜಿಲ್ಲೆಗೆ 40 ಗುರಿ ನೀಡಿದ್ದು, ಈಗಾಗಲೇ 10 ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ. ಘಟಕ ಪ್ರಾರಂಭಿ ಸಲು ಗ್ರಾಪಂಗಳು ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಿಳಿಸಿದ ಸಿಇಓ, ಗ್ರಾಪಂ ವ್ಯಾಪ್ತಿಯ ಜನನಿಬಿಡ ಪ್ರದೇಶದಲ್ಲಿ ಸಮುದಾಯ ಶೌಚಾಲಯ ಅಗತ್ಯವಿರುವ ಪಂಚಾಯತ್‌ಗಳು ಪ್ರಸ್ತಾವನೆ ಸಲ್ಲಿಸುವಂತೆಯೂ ಹೇಳಿದರು. ಅಲೆವೂರು ಗ್ರಾಮಪಂಚಾಯತ್ ಕಟ್ಟಡ ಕಾಮಗಾರಿ ಗಾಗಿ 45 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಕೂಡಲೇ ಕಾಮಗಾರಿ ಕೈಗೊಳ್ಳುವಂತೆ ಜಿಪಂ ಅಧ್ಯಕ್ಷ ದಿನಕರ ಬಾಬು ಸೂಚಿಸಿದರು.

ಜಿಲ್ಲೆಯಲ್ಲಿ ಶೇ.99.8ರಷ್ಟು ಪಠ್ಯಪುಸ್ತಕ ಪೂರೈಕೆಯಾಗಿದ್ದು, ಸಮವಸ್ತ್ರ ವಿತರಣೆ ಬಾಕಿ ಇದೆ. ಶೂ ಮತ್ತು ಸಾಕ್ಸ್ ವಿತರಣೆ ಕುರಿತಂತೆ ಎಸ್‌ಡಿಎಂಸಿಗಳ ಮೂಲಕ ಅವುಗಳನ್ನು ಖರೀದಿಸುವಂತೆ ಆದೇಶವಿದ್ದು, ಅನುದಾನ ಬಿಡುಗಡೆಯಾಗಿಲ್ಲ ಎಂದು ಡಿಡಿಪಿಐ ಶೇಷಶಯನ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಜುಲೈ ತಿಂಗಳ ಮಳೆಯ ಪ್ರಮಾಣದಲ್ಲಿ ಸುಧಾರಣೆಯಾಗಿದ್ದು, ಶೇ.50ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಪಿಎಂ ಕಿಸಾನ್ ಯೋಜನೆ ಯಡಿ ಜಿಲ್ಲೆಯಲ್ಲಿ 1,26,600 ರೈತರು ನೊಂದಣಿಯಾಗಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಮಾಹಿತಿ ನೀಡಿದರು.

ಸಾಮಾಜಿಕ ಅರಣ್ಯ ಇಲಾಖೆಯಿಂದ ಸಾರ್ವಜನಿಕರಿಗೆ 3.7 ಲಕ್ಷ ಸಸಿ ವಿತರಣೆ ಗುರಿ ಇದ್ದು, ಇದುವರೆಗೆ 1.69 ಲಕ್ಷ ಸಸಿ ವಿತರಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. 

ಸ್ವಚ್ಛ ಮೇವ ಜಯತೇ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ವಿದ್ಯಾರ್ಥಿ ಗಳಿಗೆ ಆಯೋಜಿಸಿದ್ದ ಪ್ರಬಂದ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಭೆಯಲ್ಲಿ ಬಹುಮಾನ ವಿತರಿಸಲಾಯಿತು.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಬು ಶೆಟ್ಟಿ, ಉದಯ ಕೋಟ್ಯಾನ್, ಜಿಪಂ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News