ಅಪಹರಣಗೊಂಡಿದ್ದ ಮಗುವಿನ ಅರೆ ಬೆಂದ ಶವ ಪತ್ತೆ

Update: 2019-07-16 14:53 GMT

ಭೋಪಾಲ(ಮ.ಪ್ರ),ಜು.16: ರವಿವಾರ ಸಂಜೆ ನಗರದ ಹೊರವಲಯದಲ್ಲಿರುವ ಬೈರಗಡ ಚಿಚ್ಲಿ ಗ್ರಾಮದಿಂದ ಅಪಹರಣಗೊಂಡಿದ್ದ ಮೂರು ವರ್ಷ ಪ್ರಾಯದ ಮಗುವಿನ ಅರೆ ಬೆಂದ ಮೃತದೇಹವು ಮಂಗಳವಾರ ಮನೆಯಿಂದ ಕೆಲವೇ ಮೀಟರ್‌ಗಳ ದೂರದಲ್ಲಿ ಪತ್ತೆಯಾಗಿದೆ.

ಪತ್ತೆಯಾಗಿರುವ ಶವವು ತನ್ನ ಮಗ ವರುಣ್‌ದು ಎಂದು ತಂದೆ ನಿತಿನ್ ಮೀನಾ ಗುರುತಿಸಿದ್ದಾರೆ ಎಂದು ಡಿಐಜಿ ಇರ್ಷಾದ್ ವಲಿ ಅವರು ಸುದ್ದಿಗಾರರಿಗೆ ತಿಳಿಸಿದರು. ಬಟ್ಟೆಯಲ್ಲಿ ಸುತ್ತಲಾಗಿದ್ದ ಮಗುವಿನ ಶವವು ಗ್ರಾಮದಲ್ಲಿಯ ಪಾಳುಮನೆಯೊಂದರಲ್ಲಿ ಪತ್ತೆಯಾಗಿತ್ತು.

ಮಗು ನಾಪತ್ತೆಯಾಗಿರುವ ಬಗ್ಗೆ ಕೃಷಿಕರಾಗಿರುವ ಮೀನಾ ಪೊಲೀಸರಿಗೆ ದೂರು ಸಲ್ಲಿಸಿದ್ದು,ಶೋಧ ತಂಡವೊಂದನ್ನು ರಚಿಸಿದ್ದ ಪೊಲೀಸರು ಗ್ರಾಮದಲ್ಲಿ ಭಾರೀ ಸಂಖ್ಯೆಯಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿದ್ದರು.

ವರುಣ್ ಚಾಕ್ಲೇಟ್ ತರಲು ಸಮೀಪದ ಅಂಗಡಿಗೆ ತೆರಳುತ್ತಿದ್ದಾಗ ಆತನನ್ನು ಅಪಹರಿಸಲಾಗಿತ್ತು. ಅದೇ ದಿನ ಸಂಜೆ ಕಾರೊಂದು ಪರಾರಿಯಾಗುವ ಭರದಲ್ಲಿ ಅರಣ್ಯ ತನಿಖಾ ಠಾಣೆಗೆ ಢಿಕ್ಕಿ ಹೊಡೆದಿತ್ತು. ಅದೇ ವಾಹನದಲ್ಲಿ ಮಗುವನ್ನು ಅಪಹರಿಸಲಾಗಿತ್ತು ಎಂದು ಪೊಲೀಸರು ಶಂಕಿಸಿದ್ದರು. ಗ್ರಾಮಸ್ಥನೋರ್ವ ವರುಣ್‌ನನ್ನು ಅಪಹರಿಸಿರಬಹುದೆಂದು ಯಾರೊಬ್ಬರೂ ಊಹಿಸಿಯೂ ಇರಲಿಲ್ಲ ಎಂದು ಮಗುವಿನ ಅಜ್ಜ,ಫಾರೆಸ್ಟ್ ಗಾರ್ಡ್ ಆಗಿರುವ ನಾರಾಯಣ ಮೀನಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News