ದ.ಕ. ಕ್ಷೇತ್ರದ ಸಂಸದರಿಗೆ ಚಪ್ಪಲಿಯಿಂದ ಹೊಡೆಯಿರಿ !

Update: 2019-07-16 15:50 GMT

ಮಂಗಳೂರು, ಜು.16: ಭಾರತೀಯ ಜನತಾ ಪಕ್ಷದವರಿಗೆ ನೈತಿಕತೆ ಇದ್ದರೆ ಬಿಜೆಪಿ, ಶಾಸಕರ ವಿರುದ್ಧ ಪ್ರತಿಭಟನೆ ಮಾಡಿ ಛೀಮಾರಿ ಹಾಕಬೇಕು. ಜತೆಗೆ, ಸಂಸದರಿಗೆ ಚಪ್ಪಲಿಯಿಂದ ಹೊಡೆಯಿರಿ ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಎನ್‌ಐಟಿಕೆ ಸಮೀಪದ ಸುರತ್ಕಲ್ ಟೋಲ್‌ಗೇಟ್ ವಿರುದ್ಧ ಟೋಲ್‌ಗೇಟ್ ವಿರೋಧಿ ಸಮಿತಿ ಮಂಗಳವಾರ ನಡೆಸುತ್ತಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಸ್ಥಳೀಯ ಖಾಸಗಿ ವಾಹನಗಳಿಗೆ ಸುಂಕ ವಿಧಿಸುತ್ತಿರುವುದನ್ನು ವಿರೋಧಿಸುತ್ತೇವೆ. ಕೂಳೂರಿನಿಂದ ಸುರತ್ಕಲ್‌ವರೆಗೆ ರಾಷ್ಟ್ರೀಯ ಹೆದ್ದಾರಿ ಹದಗೆಟ್ಟಿದೆ. ಸುಮಾರು ಆರು ತಿಂಗಳ ಮೊದಲು ಟೋಲ್‌ಗೇಟ್‌ನ ಬಗ್ಗೆ ಅಹೋರಾತ್ರಿ ಧರಣಿ ನಡೆಸಲಾಯಿತು. ಆದರೆ ಬಿಜೆಪಿಯವರು ಈಗ ಪ್ರತಿಭಟನೆಯ ನೆಪದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

11 ದಿನಗಳ ಕಾಲ ಟೋಲ್‌ಗೇಟ್ ವಿರುದ್ಧ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾಗ ಸಂಸದರು ಇದೇ ರಸ್ತೆಯಲ್ಲಿ ತೆರಳಿದ್ದರು. ಆದರೂ ನಮ್ಮ ಪ್ರತಿಭಟನೆಗೆ ಅವರು ಯಾವುದೇ ರೀತಿಯಲ್ಲಿ ಸ್ಪಂದನೆ ನೀಡಲಿಲ್ಲ. ಸಮಿತಿಯಿಂದ ಇಂದು ಟೋಲ್‌ಗೇಟ್ ಹೋರಾಟಕ್ಕೆ ಅಲ್ಪ ಪ್ರಮಾಣದ ಜಯಸಿಕ್ಕಿದೆ. ಬಿಜೆಪಿಯವರು ಕೇವಲ ರಾಜಕೀಯ ಲಾಭಕ್ಕಾಗಿ ಜನರ ಕಣ್ಣಿಗೆ ಕಟ್ಟುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹ ಮಾಡಬಾರದು. ಈ ಬಗ್ಗೆ ಟೋಲ್‌ಗೆ ಸಂಬಂಧಿಸಿದವರಿಗೆ ಸೂಚನೆ ನೀಡಲು ಜಿಲ್ಲಾ ಉಸ್ತುವಾರಿ ಸಚಿವರು ಸರಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆಯುವ ಮೂಲಕ ಒತ್ತಡ ಹಾಕಿದ್ದರು. ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿದಿದೆ ಎಂದು ಮಿಥುನ್ ರೈ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News