ವಿದ್ಯಾರ್ಥಿ ಬಳಗ ಬಲಿಷ್ಠವಾದರೆ ದೇಶ ಸದೃಢ: ಮೊಹಮ್ಮದ್ ಮೊನು

Update: 2019-07-16 16:07 GMT

ಮಂಗಳೂರು, ಜು.16: ವಚನಕಾರರ ನೈತಿಕ ಅಂಶಗಳನ್ನು ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ವಿದ್ಯಾರ್ಥಿ ಬಳಗ ಬಲಿಷ್ಠವಾದರೆ ಮಾತ್ರ ನಮ್ಮ ದೇಶ ಸದೃಢಗೊಳ್ಳಲಿದೆ ಎಂದು ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೊನು ತಿಳಿಸಿದ್ದಾರೆ.

ನಗರದ ಬಲ್ಮಠದ ಸರಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನಲ್ಲಿ ದ.ಕ. ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಬಲ್ಮಠ ಸರಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನ ಪ್ರಾಂಶುಪಾಲ ಮ್ಯಾರಿಟನ್ ಜೆ. ಮಸ್ಕರೇನಸ್ ಮಾತನಾಡಿ, ಬಸವಣ್ಣ, ಹಡಪದ ಅಪ್ಪಣ್ಣ ಇಂತಹ ವಚನಕಾರರ ಜೀವನಚರಿತ್ರೆ ಪರಿಚಯವಾಗುವುದು ಅತೀಮುಖ್ಯವಾಗಿದೆ. ಪಠ್ಯದ ವಿಷಯಗಳ ಜೊತೆಗೆ ಶಿವಶರಣರ ಮೌಲ್ಯ ಗಳನ್ನು ವಿದ್ಯಾರ್ಥಿಗಳು ತಿಳಿದಿರಬೇಕು ಎಂದರು.

ಉಡುಪಿ ಎರ್ಮಾಳು ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಡಾ.ಜ್ಯೋತಿ ಚೇಳ್ಯಾರು ಮಾತನಾಡಿ, ಅಪ್ಪಣ್ಣನ ವಚನ ಚಿಂತನೆಯ ಪ್ರಾಮುಖ್ಯತೆ ಅಂದಿನ ಕಾಲಕ್ಕೆ ಸೀಮಿತವಾಗಿಲ್ಲದೆ ಪ್ರಸ್ತುತ ಕಾಲಮಾನಕ್ಕೂ ಅನ್ವಯಿಸುತ್ತದೆ. ಸಣ್ಣ ವಾಕ್ಯಗಳಿಂದ ವಚನಗಳನ್ನು ರಚಸಿ ತತ್ವ ನಿರೂಪಣೆಯನ್ನು ಸುಲಲಿತವಾಗಿ ತೋರಿ ಜನ ಸಾಮಾನ್ಯರಂತೆ ತಮ್ಮನ್ನು ಗುರುತಿಸಿಕೊಂಡಿದ್ದರು ಎಂದರು.

ವಚನ ಎಂಬುದು ಯಾವುದೇ ಜಾತಿ, ಧರ್ಮಗಳಿಗೆ ಮೀಸಲಾಗಿರುವುದಿಲ್ಲ. ಅಪ್ಪಣ್ಣನವರ ವಚನಗಳು ಕೇವಲ ಭಕ್ತಿಯುತವಾಗಿ ಮಾತ್ರವಲ್ಲದೆ, ಸಾಮಾಜಿಕ ಕಳಕಳಿಯ ವಚನಗಳಾಗಿ ಇಂದಿಗೂ ಕಾಣಿಸಿಕೊಳ್ಳುತ್ತಿವೆ. ಬದುಕಿನ ತಾತ್ವಿಕತೆ, ವ್ಯಕ್ತಿತ್ವದ ವಿಶೇಷತೆಯನ್ನು ಅವರ ವಚನಗಳಿಂದ ನಾವು ಅರಿತುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ರಾಜೇಶ್ ಜಿ., ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸ ಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News