ಮಿಥುನ್ ರೈ ಕೀಳು ಮಟ್ಟದ ಹೇಳಿಕೆ ಜಿಲ್ಲೆಯ ಸಂಸ್ಕೃತಿ ಅಲ್ಲ: ಶಾಸಕ ಭರತ್ ಶೆಟ್ಟಿ

Update: 2019-07-17 12:47 GMT

ಸುರತ್ಕಲ್:   ಸುರತ್ಕಲ್ ಟೋಲ್ ಗೇಟ್ ಯುಪಿಎ ಅವಧಿಯಲ್ಲಿ ಪ್ರಾರಂಭವಾಗಿತ್ತು. ಈ ಸತ್ಯವನ್ನು ಮರೆಮಾಚಿ ಬಿಜೆಪಿಯ ಮೇಲೆ ಸುಳ್ಳು ಆರೋಪ ಹಾಕಿ ಜನರ ದಾರಿ ತಪ್ಪಿಸುವ ವಿಫಲ ಯತ್ನ ಮಾಡುವ ಭರದಲ್ಲಿ ಮಿಥುನ್ ರೈ ಕೊಟ್ಟಿರುವ ಹೇಳಿಕೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿ ಅಲ್ಲ. ಅದನ್ನು  ಅರ್ಥ ಮಾಡಿಕೊಂಡು ಹಿರಿಯ ಜನಪ್ರತಿನಿಧಿಯೊಬ್ಬರಿಗೆ ಮರ್ಯಾದೆ ಕೊಡುವುದನ್ನು ಕಲಿಯಲಿ  ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಹೇಳಿದ್ದಾರೆ.

ಮೂರು ಬಾರಿ ಗೆದ್ದಿರುವ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ತರುವಲ್ಲಿ ಯಶಸ್ವಿಯಾಗಿ ದ್ದಾರೆ. ಅವರು ಸುರತ್ಕಲ್ ಟೋಲ್ ಗೇಟ್ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರೊಂದಿಗೆ ಮಾತನಾಡಿದ್ದಾರೆ. ಪತ್ರ ವ್ಯವಹಾರ ಮಾಡಿದ್ದಾರೆ. ಅದನ್ನೆಲ್ಲ ಪ್ರಚಾರಕ್ಕಾಗಿ ಮಾಡಿಲ್ಲ. ಆದರೆ ಮಿಥುನ್ ರೈ ಅವರು ಸಂಸದರಿಗೆ ಚಪ್ಪಲಿಯಿಂದ ಹೊಡೆಯಬೇಕು ಎಂದು ಹೇಳುವ ಮೂಲಕ ಪ್ರಚಾರದಲ್ಲಿ ಇರಲು ಬಯಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ರಾಜ್ಯ, ರಾಷ್ಟ್ರದಲ್ಲಿ ಸಜ್ಜನಿಕೆಯ ರಾಜಕಾರಣದ ಶ್ರೇಷ್ಟ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ಆದರೆ ಮಿಥುನ್ ರೈ ಹೇಳಿಕೆ ಅವರದ್ದೇ ಪಕ್ಷದ ಮುಖಂಡರೂ ಕೂಡ ತಲೆತಗ್ಗಿಸುವಂತೆ ಮಾಡಿದೆ. ಮಿಥುನ್ ರೈ ಅವರ ಹೇಳಿಕೆ ನಮ್ಮ ಜಿಲ್ಲೆಯ ಒಗ್ಗಟ್ಟನ್ನು ಮುರಿಯುವ ಕೆಲಸವಾಗಿದೆ. ಯುಪಿಎ ಅವಧಿಯಲ್ಲಿ ಆರಂಭವಾದ ಸುರತ್ಕಲ್ ಟೋಲ್ ಗೇಟಿಗೆ  ಆಗಲೇ ವಿರೋಧವಾಗಿತ್ತು. ಪಾಲಿಕೆಯ ವ್ಯಾಪ್ತಿಯೊಳಗೆ ಟೋಲ್ ಗೇಟ್ ಇರಬಾರದು ಎನ್ನುವ ನಿಯಮದ ಬಗ್ಗೆ ಕಾಂಗ್ರೆಸ್ ಮುಖಂಡರಿಗೆ ಸ್ಥಳೀಯರು ಮನವರಿಕೆ ಮಾಡಿದ್ದರು. ಆದರೆ ಸ್ಥಳೀಯರಿಗೆ ಸುಂಕ ಇರುವುದಿಲ್ಲ ಎನ್ನುವ ಭರವಸೆ ನೀಡಿ ಯುಪಿಎ ಟೋಲ್ ಸಂಗ್ರಹ ಮಾಡಲು ಆರಂಭಿಸಿತ್ತು ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News