ಉದ್ಯೋಗಕ್ಕಾಗಿ ಕುವೈತ್‌ ಗೆ ತೆರಳಿ ಸಂಕಷ್ಟ : ಮಂಗಳೂರಿನ 19 ಮಂದಿ ವಾಪಸ್

Update: 2019-07-17 16:45 GMT

ಮಂಗಳೂರು, ಜು.17: ಉದ್ಯೋಗಕ್ಕಾಗಿ ಕುವೈತ್‌ಗೆ ತೆರಳಿ ಸಂಕಷ್ಟಕ್ಕೀಡಾಗಿದ್ದ 58 ಕಾರ್ಮಿಕರ ಪೈಕಿ ಕರಾವಳಿಯ 19 ಸಂತ್ರಸ್ತರು ಬುಧವಾರ ರಾತ್ರಿ ಪ್ರಯಾಣ ಬೆಳೆಸಿದ್ದು, ಗುರುವಾರ (ಜು.18) ಬೆಳಗ್ಗೆ ಮಂಗಳೂರು ತಲುಪಲಿದ್ದಾರೆ.

ಪ್ರಥಮ ಹಂತದಲ್ಲಿ ಸ್ವದೇಶಕ್ಕೆ ಇಬ್ಬರು ಆಗಮಿಸಿದ್ದು, ದ್ವೀತಿಯ ಹಂತದಲ್ಲಿ ಆಂಧ್ರದ 15 ಮಂದಿ ಭಾರತೀಯರು ವಾಪಸಾಗಿದ್ದರು. ಈಗ ಮೂರನೇಯ ತಂಡದಲ್ಲಿ ಕರಾವಳಿಯ 19 ಮಂದಿ ಕುವೈತ್‌ನಿಂದ ಪ್ರಯಾಣ ಬೆಳೆಸಿದ್ದಾರೆ. ಬಳಿಕ ವಿವಿಧ ಹಂತಗಳಲ್ಲಿ ಸಂತ್ರಸ್ತರು ತಾಯ್ನಾಡಿಗೆ ವಾಪಸಾಗಲಿದ್ದಾರೆ. ಆದರೆ ಜಿಪಿ ಪತ್ರ ಹಾಗೂ ಟಿಕೆಟ್ ಸಿಗದೆ ಅತಂತ್ರ ಸ್ಥಿತಿಯಲ್ಲಿರುವ ಮತ್ತೆ 15 ಮಂದಿಯ ಬಿಡುಗಡೆ ಬಾಕಿಯಾಗಿದೆ.

ಶಾಸಕರ ನೆರವು: ಕರಾವಳಿ ಮೂಲಕ 19 ಸಂತ್ರಸ್ತರು ಕುವೈತ್‌ನ ವಿಮಾನ ನಿಲ್ದಾಣದಿಂದ ಜು.17ರಂದು ರಾತ್ರಿ ಪ್ರಯಾಣ ಬೆಳೆಸಲಿದ್ದಾರೆ. ಇವರು ಜು.18ರ ನಸುಕಿನ ಜಾವ 1 ಗಂಟೆಗೆ ಮುಂಬೈ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ. ಕರಾವಳಿಯ ಸಂತ್ರಸ್ತರಿಗೆ ಮಂಗಳೂರು ದಕ್ಷಿಣ ವಿಧಾನಸಭೆ ಶಾಸಕ ವೇದವ್ಯಾಸ ಕಾಮತ್ ಟಿಕೆಟ್‌ಗೆ ಹಣ ಭರಿಸಿದ್ದಾರೆ. ಅಲ್ಲದೆ, ಗುರುವಾರ ಬೆಳಗ್ಗೆ ಮುಂಬೈಗೆ ತಲುಪಿರುವ ಸಂತ್ರಸ್ತರನ್ನು ಮಂಗಳೂರಿಗೆ ಕರೆತರಲು ‘ಕೆನರಾ ಪಿಂಟೊ’ ಬಸ್‌ನ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ ಎಂದು ಅನಿವಾಸಿ ಭಾರತೀಯ ಇಂಜಿನಿಯರ್ ಮೋಹನ್‌ ದಾಸ್ ಕಾಮತ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಬೀಳ್ಕೊಡುಗೆ: ಕುವೈತ್‌ನಲ್ಲಿ ಸಂಕಷ್ಟಕ್ಕೀಡಾಗಿ ಭಾರತಕ್ಕೆ ಪ್ರಯಾಣ ಬೆಳೆಸುತ್ತಿರುವ ಕರಾವಳಿಯ 19 ಮಂದಿಗೆ ಕುವೈತ್ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ರಾತ್ರಿ ಅನಿವಾಸಿ ಭಾರತೀಯರು ಬೀಳ್ಕೊಟ್ಟರು. ಈ ಸಂದರ್ಭ ಭಾರತೀಯ ಪ್ರವಾಸಿ ಪರಿಷತ್‌ನ ರಾಜ್ ಭಂಡಾರಿ, ಅನಿವಾಸಿ ಭಾರತೀಯ ಇಂಜಿನಿಯರ್ ಮಂಜೇಶ್ವರ ಮೋಹನ್‌ದಾಸ್ ಕಾಮತ್, ಮಾಧವ ನಾಯ್ಕೊ, ವಿಜಯ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.

''ವಿದೇಶದಲ್ಲಿ ಸಂಕಷ್ಟಕ್ಕೀಡಾದ ಸಂತ್ರಸ್ತರಿಗೆ ಕರಾವಳಿಯ ಶಾಸಕ ವೇದವ್ಯಾಸ ಕಾಮತ್ ನೆರವು ನೀಡಿರುವುದು ನಿಜಕ್ಕೂ ಶ್ಲಾಘನೀಯ. ಶಾಸಕರ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ. ವಿದೇಶದಲ್ಲಿರುವ ಭಾರತೀಯ ರಾಯಭಾರಿಗಳ ಜತೆ ಭಾರತೀಯ ಜನಪ್ರತಿನಿಧಿಗಳು ಸಹಕಾರ ನೀಡಬೇಕು. ಭಾರತೀಯ ಸಂಸ್ಕೃತಿಯನ್ನು ಪಾಲಿಸುತ್ತಿರುವ ಭಾರತೀಯರಿಗೆ ನನ್ನ ಧನ್ಯವಾದಗಳು.''


- ಸಿಬಿ ಯು.ಎಸ್.
ಸೆಕೆಂಡ್ ಸೆಕ್ರೆಟರಿ, ಭಾರತೀಯ ರಾಯಭಾರಿ ಕಚೇರಿ, ಕುವೈತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News