15ನೇ ಯುವತಿಯ ಕೊಲೆ ಪ್ರಕರಣ: ಸರಣಿ ಹಂತಕ ಸೈನೈಡ್ ಮೋಹನ್‌ಗೆ ಜೀವನ ಪರ್ಯಂತ ಜೀವಾವಧಿ ಶಿಕ್ಷೆ

Update: 2019-07-18 14:17 GMT

ಮಂಗಳೂರು, ಜು.18: ಕಾಸರಗೋಡು ಪೈವಳಿಯ ಅವಿವಾಹಿತ ಯುವತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸೈನೈಡ್ ಮೋಹನ್‌ ಕುಮಾರ್‌ಗೆ ಜೀವನ ಪರ್ಯಂತ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಶಿಕ್ಷೆ ವಿವರ

ಮೋಹನ್‌ ಕುಮಾರ್ ಮೇಲಿನ ಆರೋಪ ಐಪಿಸಿ ಸೆಕ್ಷನ್ 302 (ಕೊಲೆ) ಅಪರಾಧಕ್ಕೆ ಜೀವನ ಪರ್ಯಂತ ಜೀವಾವಧಿ ಶಿಕ್ಷೆ ಹಾಗೂ 5,000 ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ ಒಂದು ವರ್ಷ ಸಾದಾ ಸಜೆ, ಸೆಕ್ಷನ್ 328 (ವಿಷ ಉಣಿಸಿದ್ದು) ಅಪರಾಧಕ್ಕೆ 10 ವರ್ಷ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ ಆರು ತಿಂಗಳು ಸಾದಾ ಸಜೆ, ಸೆಕ್ಷನ್ 392 (ಚಿನ್ನಾಭರಣ ಸುಲಿಗೆ) ಅಪರಾಧಕ್ಕೆ ಐದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ ಒಂದು ವರ್ಷ ಸಾದಾ ಸಜೆ, ಸೆಕ್ಷನ್ 394 (ಸುಲಿಗೆಗಾಗಿ ವಿಷ ಪ್ರಾಶನ) ಅಪರಾಧಕ್ಕೆ 10 ವರ್ಷ ಕಠಿಣ ಶಿಕ್ಷೆ, 5,000 ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ ಎರಡು ವರ್ಷಗಳ ಕಾಲ ಸಾದಾ ಜೈಲುಶಿಕ್ಷೆ, ಸೆಕ್ಷನ್ 417 (ವಂಚನೆ) ಅಪರಾಧಕ್ಕೆ ಒಂದು ವರ್ಷ ಸಾದಾ ಸಜೆ, ಸೆಕ್ಷನ್ 201 (ಸಾಕ್ಷಿನಾಶ) ಅಪರಾಧಕ್ಕೆ ಏಳು ವರ್ಷ ಕಠಿಣ ಶಿಕ್ಷೆ ಹಾಗೂ 5,000 ರೂ. ರೂ. ದಂಡ ವಿಧಿಸಿದ್ದು, ದಂಡ ತೆರಲು ತಪ್ಪಿದ್ದಲ್ಲಿ ಒಂದು ವರ್ಷ ಸಾದಾ ಜೈಲು ಶಿಕ್ಷೆ ಅನುಭವಿಸಲು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ

ಕಾಸರಗೋಡಿನ ಪೈವಳಿಕೆಯ 26 ವರ್ಷದ ಅವಿವಾಹಿತ ಯುವತಿಯೊಬ್ಬಳನ್ನು ಸೈನೈಡ್ ಕಿಲ್ಲರ್ ಮೋಹನ್‌ ಕುಮಾರ್, ಸುಧಾಕರ ಎಂದು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದ.

ಆಕೆಯನ್ನು ಚಿನ್ನಾಭರಣ ಧರಿಸಿ ಸ್ಟೇಟ್‌ಬ್ಯಾಂಕ್‌ಗೆ ಬರಲು ಹೇಳಿದ್ದ. ಅದರಂತೆ ಆಕೆ ಅತ್ತೆ ಪರಮೇಶ್ವರಿ ಜತೆ 2006 ಮಾರ್ಚ್ 20ರಂದು ಸ್ಟೇಟ್‌ಬ್ಯಾಂಕ್‌ಗೆ ಬಂದಿದ್ದರು. ಮಧ್ಯಾಹ್ನ ಅಲ್ಲಿನ ಹೊಟೇಲೊಂದರಲ್ಲಿ ಮೂರು ಮಂದಿ ಜತೆಗೆ ಊಟ ಮಾಡಿದ್ದರು. ಅತ್ತೆಯನ್ನು ಅವರ ಮನೆಗೆ ಕಳುಹಿಸಿ ಯುವತಿ ಮತ್ತು ಮೋಹನ್ ಮಡಿಕೇರಿಗೆ ತೆರಳಿದ್ದರು.

ಅಲ್ಲಿ ಲಾಡ್ಜ್‌ನಲ್ಲಿ ಆಕೆಯ ಮೇಲೆ ಅತ್ಯಾಚಾರ ಮಾಡಿ ಮರುದಿನ ದೇವಸ್ಥಾನಕ್ಕೆ ಹೋಗಲಿಕ್ಕಿದೆ ಎಂದು ಹೇಳಿ ಆಕೆಯ ಚಿನ್ನಾಭರಣ ತೆಗೆದಿಟ್ಟು ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಕರೆ ತಂದಿದ್ದ. ಅಲ್ಲಿ ಗರ್ಭ ನಿರೋಧಕ ಮಾತ್ರೆ ಎಂದು ನಂಬಿಸಿ ಸೈನೈಡ್ ನೀಡಿದ್ದ. ಮಹಿಳೆಯರ ಶೌಚಾಲಯಕ್ಕೆ ತೆರಳಿ ಅದನ್ನು ಸೇವಿಸಿದ್ದ ಯುವತಿ ಅಲ್ಲೇ ಮೃತಪಟ್ಟಿದ್ದರು. ಈತ ಆಕೆಯ ಚಿನ್ನಾಭರಣ ಸಹಿತ ಪರಾರಿಯಾಗಿದ್ದ.

ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮದುವೆಯಾಗಿ ಸುಖವಾಗಿರಬಹುದೆಂದು ನಂಬಿದ್ದ ಆಕೆಯ ಮನೆಯವರು ನಾಪತ್ತೆ ಪ್ರಕರಣ ದಾಖಲಿಸಿರಲಿಲ್ಲ. ಸೈನೈಡ್ ಮೋಹನ್ 2009 ಅ. 21ರಂದು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಆ ಸಂದರ್ಭ ವಿಚಾರಣೆ ವೇಳೆ ಪೈವಳಿಕೆಯ ಯುವತಿಯನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದ. ಬಳಿಕ ಮಂಜೇಶ್ವರ ಪೊಲೀಸ್ ಠಾಣೆಗೆ ಆತನನ್ನು ಕರೆದೊಯ್ದಿದ್ದರು. ಅಲ್ಲಿ ಯುವತಿಯ ಅತ್ತೆ ಪರಮೇಶ್ವರಿ ಆರೋಪಿಯನ್ನು ಗುರುತಿಸಿದ್ದರು.

ಈ ಪ್ರಕರಣದಲ್ಲಿ 41 ಸಾಕ್ಷಿದಾರರು, 50 ದಾಖಲಾತಿ ಹಾಗೂ 42 ಸಾಂದರ್ಭಿಕ ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿತ್ತು. ಆರೋಪಿ ಮೋಹನ್‌ ಕುಮಾರ್ ಯುವತಿಯ ಚಿನ್ನಾಭರಣ ದರೋಡೆಗೈದು ಮಾರಾಟ ಮಾಡಿದ್ದ ಮಳಿಗೆಯಿಂದ ಚಿನ್ನಾಭರಣವನ್ನು ವಾಪಸ್ ಪಡೆದು ಪೋಷಕರಿಗೆ ಒಪ್ಪಿಸಲಾಗಿದೆ. ಅಲ್ಲದೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಮೃತ ಯುವತಿಯ ತಂದೆ-ತಾಯಿ ಪರಿಹಾರ ಪಡೆದುಕೊಳ್ಳಲು ನ್ಯಾಯಾಧೀಶರಾದ ಸೈಯಿದುನ್ನೀಸಾ ಸೂಚನೆ ನೀಡಿದರು.

ಸರಕಾರದ ಪರವಾಗಿ ಜುಡಿತ್ ಒ.ಎಂ.ಕ್ರಾಸ್ತಾ ವಾದ ಮಂಡಿಸಿದ್ದರು.

ವೀಡಿಯೊ ಕಾನ್ಫರೆನ್ಸ್‌ನಲ್ಲಿ ಶಿಕ್ಷೆ ವಿವರ

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇರುವ ಆರೋಪಿ ಮೋಹನ ಕುಮಾರ್‌ಗೆ ಜಿಲ್ಲಾ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸೈಯೀದುನ್ನೀಸಾ ವೀಡಿಯೊ ಕಾನ್ಫರೆನ್ಸ್ ಮೂಲಕ ಶಿಕ್ಷೆಯ ವಿವರ ನೀಡಿದರು.

15 ಕೇಸುಗಳಲ್ಲಿ ಜೀವಾವಧಿ ಶಿಕ್ಷೆ

ಆರೋಪಿ ಮೋಹನ್ ಕುಮಾರ್ ವಿರುದ್ಧ 20 ಕೇಸುಗಳು ದಾಖಲಾಗಿದ್ದು, ಈ ಪೈಕಿ 15 ಕೇಸುಗಳಲ್ಲಿ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ. ಐದು ಕೇಸುಗಳು ವಜಾಗೊಂಡಿದ್ದು, ಇನ್ನು ಐದು ಕೇಸುಗಳು ವಿಚಾರಣೆಗೆ ಬಾಕಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News