ಬಜಾಲ್ ಪಕ್ಕಲಡ್ಕ: ಡಿವೈಎಫ್‌ಐ ಯುವಜನ ಸಮ್ಮೇಳನ

Update: 2019-07-21 17:10 GMT

ಮಂಗಳೂರು, ಜು.21: ರಾಜ್ಯದ ರಾಜಕೀಯ ವಿದ್ಯಮಾನಗಳು ಪರಸ್ಪರ ಕೆಸರೆರೆಚಾಟಗಳನ್ನು ನೋಡಿದರೆ ಅಸಹ್ಯ ಉಂಟುಮಾಡುತ್ತಿದೆ. ರಾಜ್ಯದ ಜನತೆ ತಮ್ಮನ್ನು ಕಾಡುವ ಹಲವು ಗಂಭೀರ ಸಮಸ್ಯೆಗಳಿಗೆ ಒಳಗಾಗಿ ಪೇಚಾಡುತ್ತಿದ್ದಾರೆ. ಯುವಜನರು ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ನಿವೇಶನ ರಹಿತರು ಸ್ವಂತ ಸೂರಿಲ್ಲದೆ ಕಂಗಾಲಾಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡಿದೆ. ಈ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದ್ದ ಜನಪ್ರತಿನಿಧಿಗಳಿಗೆ ಅದ್ಯಾವುದರ ಬಗ್ಗೆಯೂ ಚಿಂತೆ ಇಲ್ಲ. ಅಧಿಕಾರದ ಆಸೆಗಾಗಿ ರೆಸಾರ್ಟ್ ರಾಜಕಾರಣ, ಶಾಸಕರುಗಳ ಖರೀದಿಯ ಕಿತ್ತಾಟದಲ್ಲೇ ಇರುವುದರಿಂದ ರಾಜ್ಯದ ಜನರು ಸಂಪೂರ್ಣವಾಗಿ ಕಂಗಾಲಾಗಿದ್ದಾರೆ ಎಂದು ಡಿವೈಎಫ್‌ಐ ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು ಹೇಳಿದ್ದಾರೆ.

ಬಜಾಲ್ ಪಕ್ಕಲಡ್ಕ ಡಿವೈಎಫ್‌ಐ ಘಟಕದ ವತಿಯಿಂದ ರವಿವಾರ ಬಜಾಲ್‌ನಲ್ಲಿ ನಡೆದ ಯುವಜನ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಿವೈಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ರಾಜ್ಯವನ್ನು ಕಾಡುವ ಸಮಸ್ಯೆ ದ.ಕ.ಜಿಲ್ಲೆಗೂ ಹೊರತಾಗಿಲ್ಲ. ನಿರುದ್ಯೋಗ ಇಂದು ತುಳುನಾಡಿನ ಯುವಜನರನ್ನು ಕೂಡ ನೇರವಾಗಿ ಬಾಧಿಸುತ್ತಿದೆ. ಉತ್ತಮ ಶಿಕ್ಷಣ ಪಡೆದ ಜಿಲ್ಲೆಯ ಯುವಜನರು ಈವತ್ತು ಉದ್ಯೋಗವನ್ನು ಅರಸಿ ವಿದೇಶಗಳಿಗೆ ವಲಸೆ ಹೋಗಿ ಅತಂತ್ರರಾಗಿದ್ದಾರೆ. ವಿದೇಶದಲ್ಲಿ ಸಮಸ್ಯೆಗೊಳಗಾದ ಕೆಲವೊಂದು ಯುವಜನರನ್ನು ಊರಿಗೆ ಮರಳಿಸಲು ಸಹಾಯ ಮಾಡಿರುವುದೋ ದೊಡ್ಡ ಸಾಧನೆ ಎಂದು ಬೀಗುವ ಜಿಲ್ಲೆಯ ಶಾಸಕರು, ಸಂಸದರು ಜಿಲ್ಲೆಯಲ್ಲಿ ಖಾಲಿ ಇರುವ ಸರಕಾರಿ ಉದ್ಯೋಗಗಳನ್ನು ಭರ್ತಿಗೊಳಿಸುವುದಕ್ಕಾಗಲಿ ಅಥವಾ ಜಿಲ್ಲೆಯ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ವಿಚಾರಗಳಿಗೆ ಈವರೆಗೂ ಸ್ಪಂದಿಸದಿರುವುದು ವಿಪರ್ಯಾಸ ಎಂದರು.

ಪ್ರಿತೇಶ್ ಬಜಾಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಿವೈಎಫ್‌ಐ ಜಿಲ್ಲಾ ಮುಖಂಡರಾದ ರಿಯಾಝ್ ಮೂಡುಬಿದಿರೆ, ಮಾಜಿ ಜಿಲ್ಲಾ ಮುಖಂಡ ದೀಪಕ್ ಬೊಲ್ಲ ಉಪಸ್ಥಿತರಿದ್ದರು. ಹರಿಹರನ್ ಸ್ವಾಗತಿಸಿದರು. ಪ್ರಕಾಶ್ ವಂದಿಸಿದರು. ಧೀರಜ್ ಪಕ್ಕಲಡ್ಕ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News