​ಟೈಲರ್ ಅಸೋಸಿಯೇಶನ್‌ನಿಂದ ‘ಆಟಿದ ನೆನಪು’ ಕಾರ್ಯಕ್ರಮ

Update: 2019-07-21 17:08 GMT

ಮಂಗಳೂರು, ಜು.21: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ದ.ಕ. ಜಿಲ್ಲೆ ಮತ್ತು ಮಂಗಳೂರು ವಿಧಾನ ಕ್ಷೇತ್ರ ಸಮಿತಿಯ ವತಿಯಿಂದ ರವಿವಾರ ನಗರದ ಗೋರಿಗುಡ್ಡೆಯಲ್ಲಿರುವ ಟೈಲರ್ ಭವನದಲ್ಲಿ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಸ್ಮಾರ್ಟ್ ಕಾರ್ಡ್ ಬಿಡುಗಡೆ ಹಾಗೂ ಆಟಿದ ನೆನಪು ಕಾರ್ಯಕ್ರಮ ಜರುಗಿತು.

ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಕೆಎಸ್‌ಟಿಎ ರಾಜ್ಯಾಧ್ಯಕ್ಷ ಕೆ.ಎಸ್.ಆನಂದ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸ್ಮಾರ್ಟ್ ಕಾರ್ಡ್ ನೀಡುವ ಭರವಸೆ ದೊರೆತರೂ ನಾನಾ ಕಾರಣದಿಂದ ಅದಕ್ಕೆ ತಡೆ ಬಿದ್ದಿತ್ತು. ಇದೀಗ ಆ ಕಾರ್ಡ್ ಬಿಡುಗಡೆಯಾಗಿದೆ. ಸರಕಾರದಿಂದ ಇನ್ನಷ್ಟು ಸೌಲಭ್ಯ ಪಡೆಯಬೇಕಾದರೆ ಸಂಘಟಿತ ಹೋರಾಟ ಅಗತ್ಯ ಎಂದರು.

ಕೆಎಸ್‌ಟಿಎ ಪಕ್ಷಾತೀತ ಸಂಘಟನೆಯಾಗಿದ್ದು, ಜನರ ಮಾನ ಮುಚ್ಚುವ ಕೆಲಸ ಮಾಡುತ್ತಿದೆ. ನಮಗೂ ಸೌಲಭ್ಯ ಕೊಡಲು ಸರರ್ಕಾರ ಮುಂದಾಗಬೇಕು, ನಾವು ಸರಕಾರದೊಂದಿಗೆ ಭಿಕ್ಷೆ ಬೇಡುತ್ತಿಲ್ಲ, ಹಕ್ಕು ಕೇಳುತ್ತಿದ್ದೇವೆ. ಅದಕ್ಕಾಗಿ ಸಂಘಟಿತವಾಗಿ ಹೋರಾಟ ನಡೆಸುತ್ತೇವೆ ಎಂದು ಕೆ.ಎಸ್.ಆನಂದ ನುಡಿದರು.

ಸಾನಿಧ್ಯ ವಸತಿ ಶಾಲೆಯ ಆಡಳಿತಾಧಿಕಾರಿ ಡಾ.ವಸಂತ ಶೆಟ್ಟಿ ಮಾತನಾಡಿ, ಆಟಿಯ ದಿನಗಳಲ್ಲಿ ಅತಿಯಾದ ಬಿಸಿಲು ಇರುವುದರಿಂದ ಶರೀರದಲ್ಲಿ ಉಷ್ಣಾಂಶ ಹೆಚ್ಚಾಗುವುದನ್ನು ನಿಯಂತ್ರಿಸಲು ಗದ್ದೆಬದಿ ಬೆಳೆದ ಸೊಪ್ಪುಗಳನ್ನು ಸೇವಿಸಲಾಗುತ್ತಿತ್ತು. ಆದರೆ ಇಂದು ಕಾಲ ಬದಲಾಗಿದ್ದು ಆಟಿಯ ನೆನಪಿಗಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಆದರೆ ಪ್ರಚಾರಕ್ಕೆ ಯಾವುದೇ ಕೆಲಸ ಮಾಡಿದರೂ ಪ್ರಯೋಜನವಿಲ್ಲ ಎಂದರು.

ಮನಪಾ ಮಾಜಿ ಸದಸ್ಯ ಪ್ರವೀಣ್‌ಚಂದ್ರ ಆಳ್ವ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಚಾರ ಠಾಣೆಯ ಹೆಡ್‌ಕಾನ್ಸ್ಟೇಬಲ್ ಶಾಂತಪ್ಪಬಾಬು ಮತ್ತು ಮಹಿಳಾ ಕಾನ್ಸ್ಟೇಬಲ್ ಭಾಗ್ಯಶ್ರೀ ಅವರನ್ನು ಸನ್ಮಾನಿಸಲಾಯಿತು.

ಕೆಎಸ್‌ಟಿಎ ಮಂಗಳೂರು ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಕೇಶವ ಕೆ. ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬೆತ್ ತೌರ್ರೋ, ಜಿಲ್ಲಾಧ್ಯಕ್ಷ ಪ್ರಜ್ವಲ್ ಕುಮಾರ್, ರೇಡಿಯೋ ಸಾರಂಗ್ ಮುಖ್ಯ ಕಾರ್ಯನಿರ್ವಾಹಕ ಆರ್.ಜೆ. ಅಭಿಷೇಕ್ ಮುಖ್ಯ ಅತಿಥಿಯಾಗಿದ್ದರು. ಜಯಂತ್ ಉರ್ಲಾಂಡಿ ಸ್ವಾಗತಿಸಿದರು. ಪೂರ್ಣಿಮಾ ವಂದಿಸಿದರು. ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News