ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸುವಲ್ಲಿ ಪತ್ರಿಕಾ ರಂಗದಿಂದ ಶ್ರೇಷ್ಠ - ಸುಬ್ರಹ್ಮಣ್ಯ ನಟ್ಟೋಜ

Update: 2019-07-22 16:30 GMT

ಪುತ್ತೂರು: ಪತ್ರಿಕೋದ್ಯಮ ಕ್ಷೇತ್ರ ದೇಶ ಕಟ್ಟುವ ಒಂದು ಭಾಗವಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸುವಲ್ಲಿ ಪತ್ರಿಕಾ ರಂಗ ಶ್ರೇಷ್ಠ ಕೆಲಸವನ್ನು ಮಾಡುತ್ತಿದೆ ಎಂದು ಪುತ್ತೂರಿನ ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಅಭಿಪ್ರಾಯ ಪಟ್ಟರು.

ಅವರು ಬಪ್ಪಳಿಗೆ ಅಂಬಿಕಾ ವಸತಿಯುತ ಕಾಲೇಜಿನಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಗಳು ಪುತ್ತೂರು ಇದರ ಸಹಯೋಗದಲ್ಲಿ ನಡೆದ `ಪತ್ರಿಕಾ ದಿನಾಚರಣೆ' ಹಾಗೂ `ಪರಿಸರ ಪತ್ರಿಕೋದ್ಯಮ' ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಿಗೆ ಬಲ ಕೊಡುವ ಅಥವಾ ಅವುಗಳನ್ನು ತಿದ್ದುವ ಕೆಲಸವನ್ನು ಮಾಧ್ಯಮ ಮಾಡುತ್ತಿದೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಅಂಗವಾಗಿರುವ ಮಾಧ್ಯಮ ಜನರನ್ನು ಜಾಗೃತಿಗೊಳಿಸುತ್ತಿದೆ ಎಂದ ಅವರು ನಮ್ಮ ವಿದ್ಯಾಸಂಸ್ಥೆಯಲ್ಲಿ ಪತ್ರಿಕಾ ದಿನಾಚರಣೆ ಆಚರಣೆ ನಡೆಸಿರುವುದು ಖುಷಿ ನೀಡಿದೆ ಎಂದು ಹೇಳಿದರು.

`ಪರಿಸರ ಪತ್ರಿಕೋದ್ಯಮ' ಎನ್ನುವ ವಿಚಾರದಲ್ಲಿ ಉಪನ್ಯಾಸ ನೀಡಿದ ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕ ಡಾ|ನರೇಂದ್ರ ರೈ ದೇರ್ಲ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಮಾಧ್ಯಮ ಕ್ಷೇತ್ರಕ್ಕೆ ತನ್ನದೇ ಆದ ಘನತೆ ಮತ್ತು ಜವಾಬ್ದಾರಿಗಳಿವೆ, ಸ್ಥಳೀಯ ವಿಷಯಗಳಿಂದ ಹಿಡಿದು ಅಂತರ್ರಾಷ್ಟ್ರೀಯ ಮಟ್ಟದ ವಿಷಯಗಳನ್ನು ವರದಿ ಮಾಡುವ ಮಾಧ್ಯಮಗಳು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ. ಮಾಧ್ಯಮ ರಂಗ ಯಾವತ್ತೂ ಹಾಳಾಗಬಾರದು, ಮಾಧ್ಯಮ ಕ್ಷೇತ್ರ ಎಲ್ಲೋ ಒಂದು ಕಡೆ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆಯೇ ಎಂಬ ಸಂಶಯ ಇತ್ತೀಚಿನ ವರ್ಷಗಳಲ್ಲಿ ಜನರ ಮನಸ್ಸಲ್ಲಿ ಮೂಡುವಂತಾಗಿದೆ.

ಮಾಧ್ಯಮದೆಡೆಯಲ್ಲಿ ಭಿನ್ನಮತ ಇರಬೇಕು, ಏಕೆಂದರೆ ಒಂದು ಮಾಧ್ಯಮ ತಪ್ಪು ಮಾಡಿದ್ರೆ ಅದನ್ನು ಪ್ರಶ್ನಿಸುವವರೇ ಇಲ್ಲ ಎಂದಾಗುವ ಬದಲು ತಮ್ಮೊಳಗೇ ಭಿನ್ನಮತ ಇದ್ದರೆ ಮಾಧ್ಯಮಗಳ ತಪ್ಪನ್ನು ಎತ್ತಿ ಹಿಡಿಯುವ ಕೆಲಸ ಇನ್ನೊಂದು ಮಾಧ್ಯಮದಿಂದ ಆಗಲಿದೆ ಎಂದರು.

ಪರಿಸರದ ಬಗ್ಗೆ ಕಾಳಜಿ ವಹಿಸಿ ಪ್ರಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಜಾಗೃತಿ ಮೂಡಿಸದೇ ಹೋದಲ್ಲಿ ದೇಶಕ್ಕೆ ಅಪಾಯ ಕಾದಿದೆ. ಇಂದಿನ ವಿಚಾರಗಳ ಬಗ್ಗೆ ಮಾತ್ರ ಆಲೋಚಿಸುವ ನಾವು ಭವಿಷ್ಯದ ತಲೆಮಾರಿನ ಬಗ್ಗೆಯೂ ಗಂಭೀರವಾಗಿ ಚಿಂತಿಸಬೇಕಿದೆ, ಶುದ್ದ ಗಾಳಿ, ನೀರು ಮುಂದಕ್ಕೆ ಸಿಗಬಹುದೇ ಎಂಬ ಆತಂಕ ಉಂಟಾಗಿದೆ, ಮಾಧ್ಯಮಗಳು ಟಿಆರ್‍ಪಿ ವಿಚಾರಕ್ಕೆ ಮಾತ್ರ ಪೈಪೋಟಿ ನೀಡದೆ ಹಳ್ಳಿಯ ರೈತರ ಬಗ್ಗೆ ಹಾಗೂ ಕೃಷಿ ಚಟುವಟಿಕೆಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಕಾರ್ಯ ನಿರ್ವಹಿಸಬೇಕಾಗಿರುವುದು ಕಾಲದ ಅನಿವಾರ್ಯತೆಯಾಗಿದೆ ಎಂದು ಹೇಳಿದರು.

ಸುದ್ದಿ ಬಿಡುಗಡೆ ಪತ್ರಿಕೆಯ ಸಿ.ಇ.ಒ ಸೃಜನ್ ಊರುಬೈಲು ಮಾತನಾಡಿ ಸಾಮಾಜಿಕ ತಾಣಗಳ ಅಬ್ಬರದ ಮಧ್ಯೆ ಪತ್ರಿಕಾ ಮಾಧ್ಯಮಗಳು ನಿಂತು ಹೋಗುತ್ತವೆಯೋ ಎಂಬ ಬಗ್ಗೆ ಅನೇಕರು ಪ್ರಶ್ನೆ ಹಾಕುತ್ತಾರೆ, ವಾಸ್ತವದಲ್ಲಿ ಸೋಶಿಯಲ್ ಮೀಡಿಯಾಗಳ ಬರಹಕ್ಕೆ ಮೂಲಗಳಾಗಲೀ, ಅದಕ್ಕೆ ಹೊಣೆಗಾರರಾಗಲೀ ಇರುವುದಿಲ್ಲ, ಪತ್ರಿಕೆಗೆ ಮೂಲ ಇದೆ, ಜವಾಬ್ದಾರಿ ವಹಿಸಿರುವವರೂ ಇರುತ್ತಾರೆ ಹಾಗಾಗಿ ಸಾಮಾಜಿಕ ತಾಣಗಳ ಹಾವಳಿಯ ಮಧ್ಯೆ ಪತ್ರಿಕೆ ತನ್ನ ಮೌಲ್ಯವನ್ನು ಯಾವತ್ತೂ ಕಳೆದುಕೊಳ್ಳುವುದಿಲ್ಲ ಎಂದು ಹೇಳಿದರು.

ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್, ವಕೀಲ ಆರ್ವಾರ ದಿನಕರ ರೈ ಶುಭ ಹಾರೈಸಿದರು. ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಸದಾಶಿವ ಶೆಟ್ಟಿ ಮಾರಂಗ ಅಧ್ಯಕ್ಷತೆ ವಹಿಸಿದ್ದರು. 

ಸ್ವಾಗತಿಸಿದ ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ ಸ್ಥಾಪಕಾಧ್ಯಕ್ಷ ಉಮೇಶ್ ಮಿತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಪಾರ ವಂದಿಸಿದರು.  ವಿದ್ಯಾರ್ಥಿನಿ ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News