ಸೋಮೇಶ್ವರ ಬಟ್ಟಪ್ಪಾಡಿ: ದುರಸ್ತಿಯ ನಿರೀಕ್ಷೆಯಲ್ಲಿ ಕಾಲುಸಂಕ
ಮಂಗಳೂರು, ಜು.22: ಸೋಮೇಶ್ವರ ಪುರಸಭೆಗೊಳಪಟ್ಟ ಬಟ್ಟಪ್ಪಾಡಿ ಎಂಬಲ್ಲಿನ ಕಾಲು ಸೇತುವೆಯು ಕುಸಿಯುವ ಹಂತ ತಲುಪಿ ವರ್ಷವಾದರೂ ಕೂಡ ದುರಸ್ತಿಯ ಭಾಗ್ಯ ಕಾಣುತ್ತಿಲ್ಲ. ಇನ್ನೇನೋ ಈ ಬಾರಿಯ ಮಳೆಗೆ ಸಂಪೂರ್ಣವಾಗಿ ಕುಸಿದು ಬಿದ್ದರೆ ಸಾರ್ವಜನಿಕರು ಪರದಾಡಬೇಕಾದ ಪರಿಸ್ಥಿತಿ ಇದೆ.
ಕೆ.ಸಿ.ರೋಡುವಿನಿಂದ ಬಟ್ಟಪ್ಪಾಡಿಗೆ ಸಂಪರ್ಕಿಸುವ ಅತಿ ಕಾಲು ಸಂಕ ಇದಾಗಿದ್ದು, ದಿನಂಪ್ರತಿ ನೂರಾರು ಶಾಲಾ-ವಿದ್ಯಾರ್ಥಿಗಳು, ಸಾರ್ವಜನಿಕರು ಇದರ ಮುಖಾಂತರ ಸಂಚರಿಸುತ್ತಿದ್ದಾರೆ.
ಈ ಹಿಂದೆಯೇ ಸೋಮೇಶ್ವರ ಪುರಸಭೆಯ ಅಧಿಕಾರಿಗಳು ಹೊಸ ಸಂಕ ನಿರ್ಮಿಸುವುದಾಗಿ ಭರವಸೆ ನೀಡಿ ಸೇತುವೆಯ ತಡೆಬೇಲಿಯನ್ನು ಒಡೆದು ಹಾಕಿದ್ದಾರೆ. ಆ ಬಳಿಕ ಯಾವ ಪ್ರಗತಿಯೂ ಕಂಡಿಲ್ಲ. ಈ ಬಗ್ಗೆ ನಾಗರಿಕರು ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಕೂಡ ಪ್ರಯೋಜನ ಆಗಿಲ್ಲ. ಸಚಿವ ಯು.ಟಿ. ಖಾದರ್ಗೆ ಇಲ್ಲಿನ ವಸ್ತುಸ್ಥಿತಿಯ ಅರಿವಿದ್ದರೂ ಹೊಸ ಕಾಲು ಸಂಕದ ರಚನೆಗೆ ಆಸಕ್ತಿ ವಹಿಸಿಲ್ಲ ಎಂದು ಸ್ಥಳೀಯರು ಆಪಾದಿಸಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.