ಮಾಹಿತಿ ಹಕ್ಕು ಕಾಯ್ದೆ ತಿದ್ದುಪಡಿಗೆ ಕೇಜ್ರಿವಾಲ್ ವಿರೋಧ
Update: 2019-07-22 17:17 GMT
ಹೊಸದಿಲ್ಲಿ, ಜು.22: ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರುವ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್, ಇದರಿಂದ ಕೇಂದ್ರ ಹಾಗೂ ರಾಜ್ಯದಲ್ಲಿರುವ ಮಾಹಿತಿ ಆಯೋಗದ ಸ್ವಾತಂತ್ರ್ಯ ಮೊಟಕಾಗುತ್ತದೆ ಎಂದು ಹೇಳಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರುವ ನಿರ್ಧಾರ ಕೆಟ್ಟ ಉಪಕ್ರಮವಾಗಿದೆ ಎಂದವರು ಹೇಳಿದ್ದಾರೆ. ರಾಜಕೀಯ ಪ್ರವೇಶಿಸುವ ಮುನ್ನ ಕೇಜ್ರಿವಾಲ್, ಮಾಹಿತಿ ಹಕ್ಕು ಕಾಯ್ದೆಯ ಜಾರಿಗಾಗಿ ಸಕ್ರಿಯ ಹೋರಾಟ ನಡೆಸಿದ್ದರು.
ಮಾಹಿತಿ ಹಕ್ಕು ಕಾಯ್ದೆ ತಿದ್ದುಪಡಿ ಮಸೂದೆಯನ್ನು ಶುಕ್ರವಾರ ಕೇಂದ್ರ ಸರಕಾರ ಲೋಕಸಭೆಯಲ್ಲಿ ಮಂಡಿಸಿತ್ತು. ಮಾಹಿತಿ ಆಯೋಗದ ಸಿಬ್ಬಂದಿಗಳ ವೇತನ, ಅವಧಿ ಹಾಗೂ ಇತರ ವಿಷಯಗಳನ್ನು ನಿಗದಿಗೊಳಿಸುವ ಅಧಿಕಾರವನ್ನು ಸರಕಾರಕ್ಕೆ ನೀಡುವ ಉದ್ದೇಶದಿಂದ ತಿದ್ದುಪಡಿಯನ್ನು ಪ್ರಸ್ತಾವಿಸಲಾಗಿದೆ. ಕೇಂದ್ರ ಸರಕಾರದ ನಿರ್ಧಾರಕ್ಕೆ ಮಾಹಿತಿ ಹಕ್ಕು ಕಾರ್ಯಕರ್ತರು ತೀವ್ರ ವಿರೋಧ ಸೂಚಿಸಿದ್ದಾರೆ.