ಬಂಟ್ವಾಳ: ಬಸ್ ನಲ್ಲಿ ಹೃದಯಾಘಾತ; ಬೆಳಗಾವಿ ಮೂಲದ ವ್ಯಕ್ತಿ ಮೃತ್ಯು

Update: 2019-07-23 17:00 GMT

ಬಂಟ್ವಾಳ, ಜು. 23: ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಬೆಳಗಾವಿ ಮೂಲದ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಬಂಟ್ವಾಳ ಹೆದ್ದಾರಿಯಲ್ಲಿ ನಡೆದಿದೆ.

ಮೃತರನ್ನು ಬೆಳಗಾವಿ ಅಥಣಿಯ ಮಂಜುನಾಥ ಭಟ್ (75) ಎಂದು ಗುರುತಿಸಲಾಗಿದೆ.

ಅವರು ಮೈಸೂರಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್‍ನಲ್ಲಿ ಈ ಘಟನೆ ನಡೆದಿದ್ದು, ದಾರಿ ಮಧ್ಯೆ ಹೃದಯಾಘಾತದಿಂದ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.

ಬಸ್‍ನ ನಿರ್ವಾಹಕನ ಸೂಚನೆಯಂತೆ ಬಸ್ ಅನ್ನು ಬಿ.ಸಿ.ರೋಡಿನಲ್ಲಿ ನಿಲ್ಲಿಸಲಾಗಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್, ನಗರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.

ಮೃತರು ಮೈಸೂರಿನಿಂದ ಒಬ್ಬರೇ ಬಸ್‍ಗೆ ಹತ್ತಿದ್ದು, ಕಿವಿಗೆ ಇಯರ್‍ಫೋನ್ ಇಟ್ಟುಕೊಂಡಿದ್ದರು. ಇವರ ಮೊಬೈಲ್ ಫೋನ್ ಕೆಳಗೆ ಬಿದ್ದಾಗ ಅನುಮಾನಗೊಂಡ ಪಕ್ಕದ ಸಹ ಪ್ರಯಾಣಿಕನೋರ್ವ ಈ ಬಗ್ಗೆ ಬಸ್ ನಿರ್ವಾಹಕನಿಗೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News