ಕಾಸರಗೋಡು: ಜ್ವರದಿಂದ ಬಳಲುತ್ತಿದ್ದ ಇಬ್ಬರು ಮಕ್ಕಳು ಮೃತ್ಯು

Update: 2019-07-24 17:30 GMT

ಕಾಸರಗೋಡು: ಜ್ವರದಿಂದ ಬಳಲುತ್ತಿದ್ದ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಬದಿಯಡ್ಕ ಸಮೀಪದ ಕನ್ಯಪ್ಪಾಡಿಯಲ್ಲಿ ನಡೆದಿದೆ.

ಕನ್ಯಾಪಾಡಿಯ ಸಿದ್ದಿಕ್ ಎಂಬವರ ಮಕ್ಕಳಾದ ಮೊಯ್ದಿನ್ ಸಿನಾಸ್ (ನಾಲ್ಕೂವರೆ ವರ್ಷ) ಮತ್ತು ಶಿಯಾರುತ್ತಲ್ ಮುನ್ ಜಹಾನ್ (8 ತಿಂಗಳು) ಮೃತರು. 

ಜ್ವರದಿಂದ ಬಳಲುತ್ತಿದ್ದ ಇಬ್ಬರು ಮಕ್ಕಳನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಿಯಾರುತ್ತಲ್ ಮುನ್ ಜಹಾನ್ ಮಂಗಳವಾರ ಸಂಜೆ ಹಾಗೂ ಸಿನಾಸ್ ಬುಧವಾರ ಬೆಳಗ್ಗೆ ಮೃತಪಟ್ಟರು ಎಂದು ತಿಳಿದುಬಂದಿದೆ. ತಾಯಿ ಅಸರುನ್ನಿಸಾ ಜ್ವರದ ಹಿನ್ನೆಲೆಯಲ್ಲಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಬ್ಬರು ಮಕ್ಕಳು ಜ್ವರದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದ್ದು, ಆರೋಗ್ಯ ಇಲಾಖೆ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದು, ಅಗತ್ಯ ಕ್ರಮ ತೆಗೆದುಕೊಂಡಿದೆ.

ತಂದೆ ಮತ್ತು ತಾಯಿಯ ರಕ್ತ ಮತ್ತು ಕಫದ  ಮಾದರಿಯನ್ನು ಪುಣೆಯಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದು, ವರದಿ ಬಂದ ಬಳಿಕ ಜ್ವರಕ್ಕೆ ಕಾರಣ ಖಚಿತವಾಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News