×
Ad

ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವರ ಅಂತ್ಯಕ್ರಿಯೆ: ಗಣ್ಯರಿಂದ ಅಂತಿಮ ನಮನ

Update: 2019-07-28 20:28 IST

ಬಂಟ್ವಾಳ, ಜು. 28: ಶನಿವಾರ ರಾತ್ರಿ ನಿಧನರಾದ ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವರ ಅಂತ್ಯಕ್ರಿಯೆ ರವಿವಾರ ಸಂಜೆ 4ಗಂಟೆಗೆ ಅವರ ಅಪೇಕ್ಷೆಯಂತೆ ಏರ್ಯ ಬೀಡು ಮನೆ ವಠಾರದ ಮಜಲು ಗದ್ದೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಸಹಸ್ರಾರು ಸಂಖ್ಯೆಯಲ್ಲಿ ಬೆಳಗ್ಗಿನಿಂದ ಸಂಜೆ ತನಕ ವಿವಿಧ ಕ್ಷೇತ್ರಗಳ ಗಣ್ಯರು, ಸಾಹಿತಿಗಳು, ಅವರ ಅಭಿಮಾನಿಗಳು, ಬಂಧು ಮಿತ್ರರು ಏರ್ಯಬೀಡು ಮನೆಗೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

ಬೆಳಿಗ್ಗೆ 9ಗಂಟೆಗೆ ಆಸ್ಪತ್ರೆಯಿಂದ ಅವರ ದೇಹವನ್ನು ಏರ್ಯರು ವಾಸ್ತವ್ಯವಿದ್ದ ಮನೆ ಸಾಕೇತಕ್ಕೆ ತರಲಾಯಿತು. ಅಲ್ಲಿ ಸುಮಾರು ಅರ್ಧಗಂಟೆ ಇಟ್ಟು ನಂತರ ಏರ್ಯ ಬೀಡು ಮೂಲ ಮನೆಗೆ ತಂದು ಆ ಬಳಿಕ ಬೀಡಿನ ಚಾವಡಿಯಲ್ಲಿ ಮೃತದೇಹವನ್ನು ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು.

ಗಣ್ಯರಿಂದ ಅಂತಿಮ ನಮನ:

ಶ್ರೀಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಯು.ಟಿ. ಖಾದರ್, ಜಾನಪದ ವಿವಿ ಮಾಜಿ ಕುಲಪತಿ ಡಾ. ಕೆ.ಚಿನ್ನಪ್ಪ ಗೌಡ, ಹಂಪಿ ವಿವಿ ವಿಶ್ರಾಂತ ಕುಲಪತಿ ಡಾ.ವಿವೇಕ ರೈ, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕರಾದ ಕೆ.ಪದ್ಮನಾಭ ಕೊಟ್ಟಾರಿ, ಎ.ರುಕ್ಮಯ ಪೂಜಾರಿ, ಜೆ.ಆರ್.ಲೋಬೊ, ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ ಆಳ್ವ, ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ವಿದ್ವಾಂಸ ಡಾ. ಪ್ರಭಾಕರ ಜೋಶಿ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ ಸಂಘ ಚಾಲಕ ಗೋಪಾಲ ಚೆಟ್ಟಿಯಾರ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶ್ಯಾಮರಾಯ ಆಚಾರ್ಯ, ನಿಟ್ಟೆ ವಿವಿಯ ಕುಲಪತಿ ಡಾ. ಎನ್. ವಿನಯ ಹೆಗ್ಡೆ, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಬಸ್ತಿ ವಾಮನ ಶೆಣೈ, ಲೇಖಕ ಸುರೇಂದ್ರ ರಾವ್, ಪ್ರೊ. ತುಕಾರಾಮ ಪೂಜಾರಿ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಕೃಷ್ಣಕುಮಾರ್ ಪೂಂಜ, ಸದಾನಂದ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಅಶ್ವಿನಿ ಕುಮಾರ್ ರೈ, ಶೆಡ್ಯೆ ಮಂಜುನಾಥ ಭಂಡಾರಿ, ದೀಪಿಕಾ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್, ಎಚ್.ಎನ್. ಹೆಬ್ಬಾರ್, ಸೀತಾರಾಮ್ ಭಟ್, ಬಾಬು ಗೌಡ, ಏರ್ಯ ಬಾಲಕೃಷ್ಣ ಹೆಗ್ಡೆ  ಸಹಿತ ಸ್ಥಳೀಯ ಜನ ಪ್ರತಿನಿಧಿಗಳು, ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಮುಖರು ಅಂತಿಮ ನಮನ ಸಲ್ಲಿಸಿದರು.

ಸಂತಾಪ:
ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ರಾಜ್ಯ ಗೇರು ನಿಗಮದ ಮಾಜಿ ಅಧ್ಯಕ್ಷ ಬಿ.ಎಚ್.ಖಾದರ್, ಜೆಡಿಎಸ್‍ನ ಮುಖಂಡ ಪಿ.ಎ. ರಹೀಂ, ಸರಕಾರಿ ಶಾಲೆ ಉಳಿಸಿ ಸಮಿತಿಯ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ಸಹಿತ ಸಂತಾಪ ಸೂಚಿಸಿದ್ದಾರೆ.
ಏರ್ಯರ ನೆನಪು:
ಕೆಲ ತಿಂಗಳ ಹಿಂದಷ್ಟೇ ಬಂಟ್ವಾಳದ ಏರ್ಯಬೀಡಿನಲ್ಲಿ ದೈವನರ್ತಕರ ಸಮಾವೇಶವನ್ನು ಮಾಡಿದ್ದ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು, ಜಾನಪದ, ಸಾಹಿತ್ಯ, ಸಮಾಜಸೇವೆ, ಸಹಕಾರ, ಕೃಷಿ, ಸಂಶೋಧನೆ ಹೀಗೆ ವೈವಿಧ್ಯ ಕ್ಷೇತ್ರಗಳತ್ತ ಗಮನಹರಿಸಿದವರು. ಆಗಾಗ್ಗೆ ಏರ್ಯಬೀಡಿನಲ್ಲಿ ಚಿಂತಕರ ಚಾವಡಿ ಚರ್ಚೆ ನಡೆಸಿ ಸಮಾಜ ಸುಧಾರಣೆಯ ಒಳನೋಟ, ಆ ಕಾಲದಲ್ಲೇ ಶಿಕ್ಷಣದ ಮೂಲಕ ಸಮಾಜೋದ್ಧಾರ ಸಾಧ್ಯ ಎಂಬುದನ್ನು ನಿರೂಪಿಸಿದವರು.

ಧರ್ಮಸ್ಥಳ ಧರ್ಮಾಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಒಡನಾಡಿಯಾಗಿದ್ದ ಡಾ. ಏರ್ಯ ಅವರ ಸಾಧನೆಗಳ ಕುರಿತು 2017ರ ಡಿಸೆಂಬರ್ ತಿಂಗಳಲ್ಲಿ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ "ಡಾ. ಏರ್ಯ ಸಾಹಿತ್ಯ ಸಂಭ್ರಮ" ನಡೆದಿತ್ತು. ಈ ಸಂದರ್ಭ ಡಾ. ಏರ್ಯ ಅವರ ನೆನಪಿಗೆ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಲಾಗಿತ್ತು. ಡಾ. ಏರ್ಯರನ್ನು ಸನ್ಮಾನಿಸಲಾದ ಸಂದರ್ಭ ಅವರು ಭಾವುಕರಾಗಿದ್ದರು.

ಗಮನಾರ್ಹ ಅಂಶವೆಂದರೆ ಡಾ. ಏರ್ಯ ಬದುಕಿದ್ದ ವೇಳೆಯಲ್ಲೇ ಅವರ ಸಾಧನೆಗಳನ್ನು ಸಾರುವ ಸಾಹಿತ್ಯ ಸಂಭ್ರಮ ನಡೆದಿದ್ದು, ಧರ್ಮಸ್ಥಳ ಧರ್ಮಾಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಎಲ್ಲ ಜಾತಿ, ಧರ್ಮಗಳನ್ನು ಪ್ರೀತಿಸುವ ಡಾ. ಏರ್ಯ ಅವರ ವ್ಯಕ್ತಿತ್ವವನ್ನು ಶ್ಲಾಘಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News