ಏರ್ಯ ಲಕ್ಷ್ಮಿನಾರಾಯಣ ಆಳ್ವ ಸಂಘಟನಾ ಚತುರ: ವಿವೇಕ್ ರೆ

Update: 2019-07-31 15:57 GMT

ಮಂಗಳೂರು, ಜು.31:ಹಿರಿಯ ಸಾಹಿತಿ ಏರ್ಯ ಲಕ್ಷ್ಮಿನಾರಾಯಣ ಆಳ್ವ ಸಂಘಟನಾ ಚತುರರಾಗಿದ್ದರು. ಅವರು ಒಂದು ಉದ್ದೇಶವನ್ನಿಟ್ಟುಕೊಂಡು ಸಂಸ್ಥೆ ಕಟ್ಟಿಕೊಂಡರೆ ಅದರಲ್ಲಿ ಯಶಸ್ಸು ಕಾಣುವವರೆಗೂ ವಿರಮಿಸುತ್ತಿರಲಿಲ್ಲ ಎಂದು ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ್ ರೈ ಹೇಳಿದರು.

ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಎಸ್‌ಡಿಎಂ ಉದ್ಯಮಾಡಳಿತ ಕಾಲೇಜಿನಲ್ಲಿ ಮಂಗಳವಾರ ನಡೆದ ಏರ್ಯ ಲಕ್ಷ್ಮಿನಾರಾಯಣ ಆಳ್ವ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪಂಜೆ ಮಂಗೇಶರಾಯ ಅವರ ಸ್ಮಾರಕ ಭವನ ಇನ್ನೂ ನಿರ್ಮಾಣವಾಗಿಲ್ಲ ಎಂಬ ನೋವು ಏರ್ಯರಿಗೆ ಇತ್ತು. 93 ವರ್ಷ ಪ್ರಾಯದ ಏರ್ಯ ತರುಣರನ್ನೂ ನಾಚಿಸುವ ಕೆಲಸ ಮಾಡುತ್ತಿದ್ದರು. ಅವರ ನೂರನೇ ವರ್ಷಕ್ಕೆ ನಾನೇ ಅಭಿನಂದನಾ ಭಾಷಣ ಮಾಡುತ್ತೇನೆ ಎಂದು ಹೇಳಿದ್ದೆ. ದುರಂತ ಅಂದರೆ ಇದೀಗ ಸಂತಾಪ ಭಾಷಣ ಮಾಡಬೇಕಿದೆ ಎಂದರು. 1969ರಲ್ಲಿ ನಾನು ಎಂ.ಎ. ವಿದ್ಯಾರ್ಥಿಯಾಗಿದ್ದಾಗ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ನಡೆದಿತ್ತು. ಆ ಸಮಯದಲ್ಲಿ ಏರ್ಯ ಅವರ ಸಂಘಟನ ಶಕ್ತಿಯನ್ನು ನಾನು ಕಂಡೆ. ಸಾಹಿತ್ಯ, ಜಾನಪದ ಕ್ಷೇತ್ರಕ್ಕೆ ನಾನು ಪದಾರ್ಪಣೆ ಮಾಡಲು ಏರ್ಯರೇ ಕಾರಣ. ನೀನು ಓದಬೇಕು, ತುಳು ಭಾಷಾ ಸಾಹಿತ್ಯದಲ್ಲಿ ಕೆಲಸ ಮಾಡಬೇಕು ಎಂಬುದಾಗಿ ನನ್ನಲ್ಲಿ ಆಗಾಗ ಹೇಳುತ್ತಿದ್ದರು ಎಂದು ಬಿ.ಎ.ವಿವೇಕ ರೈ ನೆನಪಿಸಿಕೊಂಡರು.

ಜಾತಿ ಸಂಘಟನೆಗಳು ಕೇವಲ ಒಂದು ಜಾತಿಗೆ ಸೀಮಿತವಾಗದೆ ಎಲ್ಲರೊಡನೆ ಸೇರಬೇಕು ಎಂಬ ಆಸೆ ಅವರಲ್ಲಿತ್ತು. ಜಾತಿಗಿಂತ ಶಿಕ್ಷಣ ಮುಖ್ಯ ಎಂದು ನಂಬಿದ್ದರು. ನಿರಂತರ ಪುಸ್ತಕ ಓದಿನಲ್ಲಿ ಇರುತ್ತಿದ್ದರು. ಕೆಲವೊಂದು ವಿಷಯದಲ್ಲಿ ಅಭಿಪ್ರಾಯ ನಿಲುವುಗಳು ಬೇರೆ ಇದ್ದರೂ ಮನುಷ್ಯ ಸಂಬಂಧ ಮುಖ್ಯ ಎಂದು ನಂಬಿದ್ದರು. ಅವರು ಭ್ರಷ್ಟತೆ, ಆಡಂಭರವಿಲ್ಲದ ಆದರ್ಶ ಗಾಂಧಿವಾದಿ ಎಂದು ವಿವೇಕ ರೈ ಬಣ್ಣಿಸಿದರು.

ಕಸಾಪ ಜಿಲ್ಲಾ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವೈದ್ಯ ಡಾ.ಶಾಂತಾರಾಮ ಶೆಟ್ಟಿ, ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪಗೌಡ, ಬ್ರಹ್ಮಕುಮಾರಿ ವಿಶ್ವೇಶ್ವರಿ,ಪ್ರಮುಖರಾದ ಡಾ.ಎಂ.ಪ್ರಭಾಕರ ಜೋಶಿ, ಕರ್ಣಾಟಕ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಅನಂತಕೃಷ್ಣ, ಬಸ್ತಿ ವಾಮನ ಶೆಣೈ, ಪ್ರೊ.ಸುರೇಂದ್ರ ರಾವ್, ಪ್ರೊ.ಎ.ವಿ.ನಾವಡ, ಸರಪಾಡಿ ಅಶೋಕ ಶೆಟ್ಟಿ, ಮಂಗಳೂರು ತಾಲೂಕು ಕಸಾಪ ಅಧ್ಯಕ್ಷೆ ಜಯಲಕ್ಷ್ಮಿ ಶೆಟ್ಟಿ, ಶಶಿಧರ ಹೆಗ್ಡೆ, ರವೀಂದ್ರ ಶೆಟ್ಟಿ ಉಳಿದೊಟ್ಟು, ಪ್ರಭಾಕರ ಶರ್ಮ, ಎಸ್‌ಡಿಎಂ ಉದ್ಯಮಾಡಳಿತ ಕಾಲೇಜಿನ ನಿವೃತ್ತ ನಿರ್ದೇಶಕ ಡಾ.ದೇವರಾಜ್, ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ತಾರಾನಾಥ್, ಉದ್ಯಮಾಡಳಿತ ಕಾಲೇಜಿನ ನಿರ್ದೇಶಕಿ ಡಾ.ಸೀಮಾ ಶೆಣೈ, ಪ್ರಾಂಶುಪಾಲೆ ಪ್ರೊ. ಅರುಣಾ ಕಾಮತ್, ಜಮಾಅತೆ ಇಸ್ಲಾಂ ಹಿಂದ್‌ನ ಅಬ್ದುಲ್ ಸಲಾಂ, ವಿ.ಜಿ.ಪಾಲ್, ಸುಧಾಕರ ರಾವ್ ಪೇಜಾವರ ಉಪಸ್ಥಿತರಿದ್ದರು. ಮಂಜುಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News