ಆ.4ರಂದು ಪೊಳಲಿ ಪ್ರಶಸ್ತಿ ಪ್ರದಾನ
ಉಡುಪಿ, ಆ.1: ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಇವರ ಸಹಯೋಗದಲ್ಲಿ ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್.ಆರ್. ಹೆಗ್ಡೆ (ಜಂಟಿಯಾಗಿ) ಹೆಸರಲ್ಲಿ ನೀಡಲಾಗುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆ.4ರ ಬೆಳಗ್ಗೆ 10:15ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಮಣಿಪಾಲ ಇದರ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ವಹಿಸಲಿದ್ದಾರೆ. ಪ್ರಶಸ್ತಿ ಪುರಸ್ಕೃತರ ಕುರಿತು ಬೆಳ್ತಂಗಡಿ ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಯದುಪತಿ ಗೌಡ ಅಭಿನಂದನಾ ಭಾಷಣ ಮಾಡಲಿದ್ದಾರೆ. ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ನಿಕೇತನ ಇವರು ‘ತುಳುನಾಡು ಮತ್ತು ಮಹಿಳೆ’ ಎನ್ನುವ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಕೇಂದ್ರದ ಪ್ರಕಟಣೆ ತಿಳಿಸಿದೆ.
ಪೊಳಲಿ ಪ್ರಶಸ್ತಿ ಸ್ವೀಕರಿಲಸಲಿರುವ ಡಾ. ಪುರುಷೋತ್ತಮ ಬಿಳಿಮಲೆ ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ, ಮಂಗಳೂರು ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಮೆಕೆಂಜಿ ಕೈಫಿಯತ್ತುಗಳು, ಲಿಂಗರಾಜನ ಹುಕುಂನಾಮೆ, ದಲಿತಜಗತ್ತು, ಬಂಡಾಯ ದಲಿತ ಸಾಹಿತ್ಯ, ಶಿಷ್ಟ ಪರಿಶಿಷ್ಟ, ಕರಾವಳಿ ಜಾನಪದ, ಕೂಡುಕಟ್ಟು, ಜನಸಂಸ್ಕತಿ, ಬಹುರೂಪ, ಮೆಲುದನಿ ಇವರ ಪ್ರಮುಖ ಕೃತಿಗಳು. ‘ಕನ್ನಡ ಕಥನಗಳು’, ‘ವಲಸೆ, ಸಂಘರ್ಷ ಮತ್ತು ಸಮನ್ವಯ’ ಇವರ ಅಪ್ರಕಟಿತ ಕೃತಿಗಳು. ಭಾರತೀಯ ಜಾನಪದವನ್ನು ಅಭ್ಯಸಿಸಿರುವ ಇವರು, ಭಾರತೀಯ ಸಂಸ್ಕತಿಯ ಅಧ್ಯಯನಕ್ಕೆ ಹೊಸ ವಿಸ್ತಾರ ತಂದು ಕೊಟ್ಟಿದ್ದಾರೆ. ಕವಿರಾಜಮಾರ್ಗ, ಗದಾಯುದ್ದಂ, ವಡ್ಡಾರಾಧನೆಗಳಂಥ ಕನ್ನಡದ ಮಹತ್ವದ ಅಭಿಜಾತ ಕೃತಿಗಳ ಇಂಗ್ಲಿಷ್ ಅವತರಣಿಕೆಗಳನ್ನು ತಮ್ಮ ಅಧ್ಯಯನ ಪೀಠದ ಮೂಲಕ ಪ್ರಕಟಿಸಿದ್ದಾರೆ.