ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕ ರಾಜೇಶ್ ನಾಯ್ಕ್ ಭೇಟಿ, ಪರಿಶಿಲನೆ
ಬಂಟ್ವಾಳ, ಜು. 2: ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು ಶುಕ್ರವಾರ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಇಲ್ಲಿನ ಬೇಡಿಕೆಯ ಕುರಿತು ಮಾಹಿತಿ ಪಡೆದುಕೊಂಡರು.
ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸದಾಶಿವ ಅವರು ಆಸ್ಪತ್ರೆಗೆ ತುರ್ತಾಗಿ ಅರಿವಳಿಕೆ ತಜ್ಞರ ಅಗತ್ಯವಿರುವುದನ್ನು ಶಾಸಕರ ಗಮನಕ್ಕೆ ತಂದರು. ಹಾಗೆಯೇ ಪ್ರಯೋಗಶಾಲೆಯಲ್ಲಿ ರಕ್ತಮಾದರಿ ಪರೀಕ್ಷೆಯ ತಜ್ಞರು, ಎಕ್ಸರೇ ತಜ್ಞರು, ನರ್ಸ್, ಸಿಬ್ಬಂದಿ ಹುದ್ದೆ ಖಾಲಿರುವುದನ್ನು ಶಾಸಕರ ಗಮನಕ್ಕೆ ತರಲಾಯಿತು. ತಾತ್ಕಾಲಿಕ ನೆಲೆಯಲ್ಲಿ ಕೆಲ ಸಮಯಗಳ ಕಾಲ ಇದ್ದಂತ ಅರಿವಳಿಕೆ ತಜ್ಞರು ಈಗ ಬಾರದಿದ್ದುರಿಂದ ಮತ್ತೆ ಸಮಸ್ಯೆ ಉಂಟಾಗುತ್ತಿದೆ ಎಂದು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಮಾಹಿತಿ ನೀಡಿದರು.
ತಾತ್ಕಾಲಿಕ ವೈದ್ಯರನ್ನು ಒದಗಿಸುವ ಭರವಸೆ
ಈ ಸಂದರ್ಭ ಉಪಸ್ಥಿತರಿದ್ದ ಎ.ಜೆ. ಸಮೂಹ ಸಂಸ್ಥೆಯ ಡಾ.ಪ್ರಶಾಂತ್ ಮಾರ್ಲ ಅವರು ಶಾಸಕ ರಾಜೇಶ್ ನಾಯ್ಕ್ ಅವರ ಕೋರಿಕೆಯಂತೆ ತಾತ್ಕಾಲಿಕ ನೆಲೆಯಲ್ಲಿ ಕೆಲ ವೈದ್ಯರನ್ನು ಹಾಗೂ ರಕ್ತ ಪರೀಕ್ಷೆ ತಜ್ಞರನ್ನು ಒದಗಿಸಿಕೊಡುವ ಮತ್ತು ವಾಷಿಂಗ್ಮೆಶಿನ್ ವ್ಯವಸ್ಥೆಯನ್ನು ಕಲ್ಪಿಸುವ ಭರವಸೆ ನೀಡಿದರು.
ಬಂಟ್ವಾಳ ಕ್ಷೇತ್ರದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆ ಮತ್ತು ಬೇಕಾದ ಸೌಲಭ್ಯಗಳ ಬಗ್ಗೆ ವಿವರವಾದ ಪಟ್ಟಿ ನೀಡುವಂತೆ ಶಾಸಕ ರಾಜೇಶ್ ನಾಯ್ಕ್ ತಾಲೂಕು ಆರೋಗ್ಯಧಿಕಾರಿ ಡಾ.ದೀಪಾ ಪ್ರಭುವಿಗೆ ಸೂಚಿಸಿದರು.
ತಾಲೂಕಿನಲ್ಲಿ ಡೆಂಗ್, ಮಲೇರಿಯಾದಂತ ಸಾಂಕ್ರಾಮಿಕ ರೋಗದ ಕುರಿತು ಶಾಸಕರು ಆರೋಗ್ಯಾಧಿಕಾರಿಯವರಿಂದ ಮಾಹಿತಿ ಪಡೆದು ಈ ಬಗ್ಗೆ ಜನರಿಗೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಅರಿವು ಮೂಡಿಸುವಂತೆಯು ನಿರ್ದೇಶಿಸಿದರು.
ಈಗಾಗಲೇ ದಿನವೊಂದಕ್ಕೆ ತಾಲೂಕಿನ ಮೂಲೆ, ಮೂಲೆಯಿಂದ ಸಾವಿರಾರು ರೋಗಿಗಳು ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಆಗಮಿಸುತ್ತಿದ್ದು, ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿದರೆ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಒತ್ತಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವ ಸಾಧ್ಯತೆ ಇದೆ. ವಾಮದಪದವು ಸಮುದಾಯ ಆರೋಗ್ಯಕೇಂದ್ರದಲ್ಲೂ ಸಕಲ ವ್ಯವಸ್ಥೆಯಿದ್ದರೂ, ಅಲ್ಲೂ ವೈದ್ಯರ ಕೊರತೆ ಎದುರಿಸಲಾಗುತ್ತಿದೆ ಎಂದು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ತಿಳಿಸಿದರು. ಪುಂಜಾಲಕಟ್ಟೆ ಪ್ರಾ.ಆ.ಕೇ.ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.
ಡಿ ಗ್ರೂಪ್ ನೌಕರರ ಅಳಲು
ಇದೇ ವೇಳೆ ಗುತ್ತಿಗೆಯಾಧಾರದಲ್ಲಿ ದುಡಿಯುವ ಡಿಗ್ರೂಪ್ ನೌಕರರು ನಿಗದಿತ ಸಮಯದಲ್ಲಿ ವೇತನ ಪಾವತಿಯಾಗದ ಬಗ್ಗೆ ಶಾಸಕರಲ್ಲಿ ಅಲವತ್ತುಕೊಂಡರು. ಈ ಕುರಿತು ಈಗಾಗಲೇ ಸಂಬಂಧಪಟ್ಟವರಲ್ಲಿ ಚರ್ಚಿಸಲಾಗಿದೆ. ಎರಡು ತಿಂಗಳ ವೇತನ ಪಾವತಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕರು ತಿಳಿಸಿದರು.
ಸೆಕ್ಯೂರಿಟಿ ನೇಮಿಸುವಂತೆ ಒತ್ತಾಯ
ಹಾಗೆಯೇ ಆಸ್ಪತ್ರೆಗೆ ಹಗಲು ಮತ್ತು ರಾತ್ರಿ ವೇಳೆ ಸೆಕ್ಯೂರಿಟಿ ವ್ಯವಸ್ಥೆ ಕಲ್ಪಿಸುವಂತೆ ನೌಕರರು ಶಾಸಕರಲ್ಲಿ ಮನವಿ ಮಾಡಿದರು. ವೈದ್ಯಾಧಿಕಾರಿ ಡಾ.ಸದಾಶಿವ ಅವರು ಇದಕ್ಕೆ ಧ್ವನಿಗೂಡಿಸಿ ರಾತ್ರಿ ವೇಳೆ ಕೆಲವರು ಅಮಲು ಪದಾರ್ಥ ಸೇವಿಸಿ ಆಸ್ಪತ್ರೆಗೆ ಬಂದು ಅಸಭ್ಯವಾಗಿ ವರ್ತಿಸುತ್ತಿದ್ದು, ಪೊಲೀಸರೊಬ್ಬರನ್ನೇ ನೇಮಿಸುವಂತೆ ವಿನಂತಿಸಿದರು. ಆಸ್ಪತ್ರೆಯಲ್ಲೇ ಒಪಿ ತೆರೆದು ಹಗಲು, ರಾತ್ರಿ ಪೊಲೀಸ್ ಕಾನ್ಸಟೇಬಲ್ ಒಬ್ಬರನ್ನು ನಿಯುಕ್ತಿಗೊಳಿಸುವುದು ಸೂಕ್ತ ಎಂದು ಉಪಸ್ಥಿತರಿದ್ದ ಪುರಸಭಾ ಸದಸ್ಯ ಗೋವಿಂದ ಪ್ರಭು, ಮಾಜಿ ಸದಸ್ಯ ದೇವದಾಸ ಶೆಟ್ಟಿ ಸಲಹೆ ನೀಡಿದರು.
ಇದಕ್ಕೆ ತಕ್ಷಣ ಸ್ಪಂದಿಸಿದ ಶಾಸಕ ರಾಜೇಶ್ ನಾಯ್ಕ್ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಭದ್ರತೆಯ ದೃಷ್ಟಿಯಿಂದ ಆಸ್ಪತ್ರೆಗೆ ಪೂರ್ಣಕಾಲಿಕವಾಗಿ ಕಾನ್ಸ್ಟೇಬಲ್ರೊಬ್ಬರನ್ನು ನಿಯುಕ್ತಿಗೊಳಿಸಲು ಸೂಚಿಸಿದರು.
ಇದಕ್ಕೂ ಮೊದಲು ಆಸ್ಪತ್ರೆಯ ಪ್ರತಿ ವಿಭಾಗಕ್ಕು ಭೇಟಿ ನೀಡಿ ಪರಿಶೀಲಿಸಿದ ಶಾಸಕ ರಾಜೇಶ್ ನಾಯ್ಕ್, ಅಲ್ಲಿದ್ದ ವೈದ್ಯರು, ರೋಗಿಗಳೊಂದಿಗೆ ಮಾತನಾಡಿದರು. ಈ ಸಂದರ್ಭ ಪುರಸಭಾ ಸದಸ್ಯ ಹರಿಪ್ರಸಾದ್, ಸರಪಾಡಿ ಗ್ರಾಪಂ ಸದಸ್ಯ ಧನಂಜಯ ಶೆಟ್ಟಿ ಮೊದಲಾದವರಿದ್ದರು.