ಮಂಗಳೂರು: ಅಲೆಗಳ ಅಬ್ಬರಕ್ಕೆ ಸಿಲುಕಿದ ದೋಣಿ
ಮಂಗಳೂರು, ಆ.3: ನಗರದ ಹೊರವಲಯ ತಣ್ಣೀರುಬಾವಿ ಕಡಲತೀರ ಸಮೀಪ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿಯೊಂದು ಅಪಘಾತಕ್ಕೀಡಾಗಿದ್ದು, ದೋಣಿಯಲ್ಲಿದ್ದ ಒಂಬತ್ತು ಮೀನುಗಾರರನ್ನು ಸ್ಥಳೀಯ ಮೀನುಗಾರ ದೋಣಿಯವರು ರಕ್ಷಿಸಿದ್ದಾರೆ.
ಶಬ್ಬೀರ್, ನಾಸೀರ್, ರಿಯಾಝ್, ಆಶಿಕ್, ಲಕ್ಷ್ಮಣ್, ಎಲ್.ಆರ್.ರಾವ್, ಕೃಷ್ಣ, ಗುರು ಬೋಟ್ನಲ್ಲಿದ್ದ ರಕ್ಷಿಸಲ್ಪಟ್ಟ ಮೀನುಗಾರರು.
ಶನಿವಾರ ಬೆಳಗ್ಗೆ ಸಸಿಹಿತ್ಲು ಶಬೀರ್ ಮಾಲಕತ್ವದ ‘ಶಬ್ಬೀರ್’ ಹೆಸರಿನ ದೋಣಿಯು ತಣ್ಣೀರುಬಾವಿ ಕಡಲತೀರ ಸಮೀಪದ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿತ್ತು. ಈ ಸಂದರ್ಭ ಗಾಳಿ ಮತ್ತು ಸಮುದ್ರಗಳ ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿಯು ಮಗುಚಿ ಬಿದ್ದು ದೋಣಿಯಲ್ಲಿದ್ದ ಒಂಬತ್ತು ಮಂದಿ ನೀರಿಗೆ ಎಸೆಯಲ್ಪಟ್ಟು ಅಪಾಯ ಸ್ಥಿತಿಯಲ್ಲಿದ್ದರು.
ಇದನ್ನು ನೋಡಿದ ಪರಿಸರದಲ್ಲೇ ಇದ್ದ ‘ಸುವರ್ಣ ಕುಸುಮ’ ಹಾಗೂ ‘ಶ್ರೀರಾಮ’ ದೋಣಿಯವರು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಮುಳುಗಡೆ ದೋಣಿಯನ್ನು ಸ್ಥಳೀಯರ ಸಹಕಾರದಿಂದ ಸಮುದ್ರದ ದಡಕ್ಕೆ ಎಳೆದು ತಂದಿದ್ದಾರೆ.
ಕೊಚ್ಚಿ ಹೋದ ಬಲೆ
ಅಲೆಗಳ ಅಬ್ಬರಕ್ಕೆ ದೋಣಿ ಮಗುಚಿದ ವೇಳೆ ಇಂಜಿನ್ ಕಿತ್ತು ಸಮುದ್ರದ ಪಾಲಾಗಿತ್ತು. ಮೀನುಗಾರಿಕೆಯಲ್ಲಿ ತೊಡಗಿದ್ದ ವೇಳೆ ಮೀನುಗಳಿಗೆ ಗಾಳ ಹಾಕಿದ್ದ ಬಲೆ ಈ ವೇಳೆ ಕೊಚ್ಚಿ ಹೋಗಿದೆ. ದೋಣಿಯಲ್ಲಿದ್ದ ಮೀನುಗಾರರಿಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸ್ಥಳಕ್ಕೆ ಕರಾವಳಿ ಕಾವಲು ಪಡೆಯ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿದ್ದಾರೆ.