ಡಿವೈಎಸ್ಪಿ ವೆಲೆಂಟೈನ್ ಡಿಸೋಜಾಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ಪ್ರದಾನ

Update: 2019-08-04 11:35 GMT

ಭಟ್ಕಳ: ಶಿಸ್ತು, ಸಂಯಮ ಹಾಗೂ ಉತ್ತಮ ಕರ್ತವ್ಯದ ಜವಾಬ್ದಾರಿ ಹೊತ್ತು ಕೆಲಸ ನಿರ್ವಹಿಸುವವರು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು. ಈ ನಿಟ್ಟಿನಲ್ಲಿ ದಿಟ್ಟ ನಿರ್ಧಾರಕ್ಕೆ ಹೆಸರುವಾಸಿಯಾಗಿರುವ ಭಟ್ಕಳ ಡಿ.ವೈ.ಎಸ್.ಪಿಯಾಗಿ ಕರ್ತವ್ಯ ನಿರ್ವಸುತ್ತಿರುವ ವೆಲೆಂಟೈನ್ ಡಿ'ಸೋಜಾರಿಗೆ ಪೊಲೀಸ್ ಇಲಾಖೆಯಲ್ಲಿನ ಶ್ಲಾಘನೀಯ ಸೇವೆಗಾಗಿ ರಾಷ್ಟ್ರಪತಿಗಳಿಂದ ನೀಡಲ್ಪಡುವ `ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪುರಸ್ಕಾರವನ್ನು ರಾಜಭವನದ ಗಾಜಿನಮನೆಯಲ್ಲಿ ಘನತೆವೆತ್ತ ರಾಜ್ಯಪಾಲ ವಜುಭಾಯ್ ವಾಲ್ ಹಾಗೂ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಎಡಿಜಿಪಿ ಡಾ.ಎಸ್.ಪರಶಿವಮೂರ್ತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಪೊಲೀಸ್ ಇಲಾಖೆಯಲ್ಲಿ ವಿಶೇಷ ಸೇವೆ ಸಲ್ಲಿಸಿದ ಭಟ್ಕಳ ಡಿವೈಎಸ್ಪಿ ವೇಲೆಂಟ್ಯನ್ ಡಿಸೋಜ ಸೇರಿದಂತೆ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಗಣರಾಜ್ಯೋತ್ಸವ ಅಂಗವಾಗಿ ನೀಡುವ "ರಾಷ್ಟ್ರಪತಿಗಳ" ಶ್ಲಾಘನೀಯ ಸೇವಾ ಪದಕವನ್ನು ಘೋಷಣೆ ಮಾಡಲಾಗಿತ್ತು. 

ಡಿವೈಎಸ್ಪಿ ವ್ಯಾಲೆಂಟ್ಯನ್ ಡಿಸೋಜ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನವರಾದ ಇವರು ಸದ್ಯ ಉಡುಪಿಯಲ್ಲಿ ವಾಸವಿದ್ದಾರೆ. 1994 ರಲ್ಲಿ ತಮ್ಮ ಪೊಲೀಸ ವೃತ್ತಿಯನ್ನು ಆರಂಭಿಸಿದ ಇವರು ಮೊದಲು ಸಬ್ ಇನ್‍ಸ್ಪೆಕ್ಟರ್ ಆಗಿ ಮಂಗಳೂರಿನಲ್ಲಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಕಾರ್ಯ ಆರಂಭಿಸಿದ್ದಾರೆ. ಕಳೆದ 2001 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪೋಲಿಸ ಠಾಣೆಗೆ ವರ್ಗಾವಣೆ ಆಗಿದ್ದರೆ ಈ ಸಮಯದಲ್ಲಿ ಹೊನ್ನಾವರ ಪೊಲೀಸ್ ಠಾಣೆ ಸಿಬ್ಬಂದಿಗಳಿಗೆ ವಸತಿ ಗೃಹದಲ್ಲಿ ಶೌಚಾಲಯದ ಕೊರತೆ ಕಾಡುತ್ತಿದ್ದ ಹಿನ್ನೆಲೆ ಬ್ರಿಟಿಷ್ ಕಾಲದ ಎರಡು ಶೌಚಾಲಯವನ್ನು ಪೊಲೀಸರು ಅತೀವ ತೊಂದರೆಯನ್ನು ಅನುಭವಿಸುತ್ತಿದ್ದು, ಇದನ್ನು ಕಂಡ ಇವರು ಹೊನ್ನಾವರದ ಗುತ್ತಿಗೆದಾರರಾದ ಅಡ್ವಿನ್ ಇವರನ್ನು ಸಹಾಯದಿಂದ ಹೊನ್ನಾವರದ 8 ಉತ್ತಮ ಶೌಚಾಲಯವನ್ನು ನಿರ್ಮಿಸಿ ಪೊಲೀಸರಷ್ಟೇ ಅಲ್ಲ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದರು.

ಸೆ. 29, 2001ರಲ್ಲಿ ಭಟ್ಕಳದ ಶಹರಾ ಠಾಣೆಗೆ ವರ್ಗಾವಣೆಯಾಗಿದ್ದ ವ್ಯಾಲೆಂಟೈನ್ ಡಿಸೋಜಾ ಇಲ್ಲಿಯೂ ಗುರುತು ಮಾಡುವಂತಹ ಕೆಲಸ ಮಾಡಿದ್ದಾರೆ. ತಾವು ಮುತುವರ್ಜಿ ವಹಿಸಿ ಭಟ್ಕಳ ಶಹರಾ ಠಾಣೆಯ ಪಕ್ಕದಲ್ಲಿ ಇರುವ ಮೈದಾನದಲ್ಲಿ ಗಣೇಶ ಮೂರ್ತಿಯನ್ನು ಕುಡಿಸಲು ಸಭಾಭವನವನ್ನು ನಿರ್ಮಾಣ ಮಾಡಿದ್ದಾರೆ. ವಿಶೇಷವೆಂದರೆ ಈಗಲೂ ಇದೇ ಸಭಾಭವನದಲ್ಲಿ ಚೌತಿಯ ಗಣೇಶ ಪ್ರತಿಷ್ಠಾಪನೆ ಕಾರ್ಯ ನಡೆಯುತ್ತಿದೆ. ಬಡ್ತಿ ಪಡೆದ ನಂತರವೂ ವ್ಯಾಲೆಂಟೈನ್ ಅವರು ತಮ್ಮ ಜನಪರ ಕೆಲಸವನ್ನು ಮುಂದುವರಿಸಿದರು. ಸಿ ಎಸ್ಪಿ ಉಡುಪಿ ಬಂಟ್ವಾಳ ವೃತ್ತ, ಡಿ.ಸಿ.ಆರ್.ಬಿ ಚಿಕ್ಕಮಗಳೂರು ಕುಂದಾಪುರ ವೃತ್ತ ಪಣಂಬೂರು ಕಾರ್ಕಳ ವೃತ್ತ, ಸಿಸಿಬಿ ಬೆಂಗಳೂರಿನಲ್ಲಿ, ವೃತ್ತ ನಿರೀಕ್ಷಕರಾಗಿ ಇವರು ಸೇವೆ ಸಲ್ಲಿಸಿದ್ದಾರೆ.

ದೇಹದಾಢ್ಯ ಪಟು: ಇವರು ಓರ್ವ ಅಂತಾರಾಷ್ಟ್ರೀಯ ದೇಹದಾಡ್ಯ ಪಟುವಾಗಿರುವುದು ಇಲ್ಲಿನ ಕ್ರೀಡಾ ಪ್ರೇಮಿಗಳಿಗೆ ಹೆಮ್ಮೆ ಎನಿಸಿದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಸತತ ಮೂರು ಬಾರಿ ಬಂಗಾರದ ಪದಕ ಗೆದ್ದು ಎಲ್ಲರ ಗಮನ ಸೆಳೆದಿದ್ದಾರೆ. 1987ರ ಶ್ರೀದುರ್ಗಾ ಅವಾರ್ಡ್, 1988ರಲ್ಲಿ ಶ್ರೀ ಶಿವಪ್ಪ ನಾಯ್ಕ್ ಅವಾರ್ಡ್, 1988ರಲ್ಲಿ ಶ್ರೀ ಪುಲಕೇಶಿ ಅವಾರ್ಡ್, 1988-1990 ರ ಅವಧಿಯಲ್ಲಿ ಸತತ ಮೂರು ಬಾರಿ ಓಪನ್ ಸ್ಟೇಟ್ ಗೋಲ್ಡ್ ಮೆಡಲ್, 1991 ರಲ್ಲಿ ಭಾರತ್ ಕಿಶೋರ್ ಆಲ್ ಇಂಡಿಯಾ ಲೆವೆಲ್ ಸ್ಪರ್ಧೆಯಲ್ಲಿ ಜೂನಿಯರ್ ಮಿಸ್ಟರ್ ಇಂಡಿಯಾ, 2008 ಪೊಲೀಸ್ ಇಲಾಖೆ ಸೇವೆಗಾಗಿ ಉಡುಪಿ ಜಿಲ್ಲೆಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2009 ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ, 2015  ರಲ್ಲಿ ಫಿಲಿಫೈನ್ಸ್ ನಲ್ಲಿ ನಡೆದ ದೇಹದಾಡ್ಯ ಸ್ಪರ್ಧೆಯ ಮಿಸ್ಟರ್ ಏಷ್ಯಾ ಸ್ಪರ್ಧೆಯಲ್ಲಿ ಸ್ಪರ್ಧಿಸಿ ವಿಶ್ವ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದರು. 2016ರಲ್ಲಿ ಮಲೆನಾಡ ಕ್ರೀಡಾರತ್ನ, 2017ರಲ್ಲಿ ಉಡುಪಿ ಪೇಜಾವರ ಶ್ರೀಗಳಿಂದ ಉಪಾಧ್ಯಾಯ ಸನ್ಮಾನ ಪ್ರಶಸ್ತಿ ಪಡೆದ ಇವರು 2017 ನವೆಂಬರ್ 9 ರಿಂದ 12 ರವರೆಗೆ ಅಮೆರಿಕದ ಲಾಸ್ ವೇಗಸ್ನಲ್ಲಿ ನಡೆದ ದೇಹದಾಢ್ಯ  ಸ್ಪರ್ಧೆ ನ್ಯಾಷನಲ್ ಒಲಿಂಪಿಯಾ ಬಾಡಿ ಬಿಲ್ಡಿಂಗ್ ಆ್ಯಂಡ್ ಫಿಟ್ನೆಸ್ ಚಾಂಪಿಯನ್ಶಿಪ್ 2017ರಲ್ಲಿ ಸ್ಪರ್ಧೆ ಅಂತಿಮ ಸುತ್ತಿಗೆ ಆಯ್ಕೆಯಾಗಿರುವುದರಿಂದ ಬೆಸ್ಟ್ ಪೋಸರ್ ಪ್ರಶಸ್ತಿ ತಮ್ಮದಾಗಿಸಿ ಕೊಂಡಿದ್ದಾರೆ.  ಇವರ ಈ ಎಲ್ಲ ಸಾಧನೆಗಳನ್ನು ಗುರುತಿಸಿ ಇವರಿಗೆ ರಾಷ್ಟ್ರ ಪ್ರಶಸ್ತಿ ಪದಕವನ್ನು ನೀಡಿ ಗೌರವಿಸಿದ್ದಾರೆ.

''ಪ್ರಶಸ್ತಿಗೆ ಭಾಜನರಾಗಿರುವದು ಸಂತಸ ತಂದಿದ್ದು, ಕಳೆದ 25 ವರ್ಷದಿಂದ ಪೊಲೀಸ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಎಲ್ಲಾ ಸಿಬ್ಬಂದಿಗಳ ಸಹಕಾರ ಪ್ರೀತಿಯಿಂದ ಉತ್ತಮ ಕೆಲಸ ಸಾಧ್ಯವಾಗಿದೆ. ಪೊಲೀಸ ಹೆಸರಿನಂತೆ ನಿಷ್ಠೆ, ಪ್ರಾಮಾಣಿಕತೆ, ಧೈರ್ಯ ಹಾಗೂ ಇನ್ನಿತರ ಅಂಶಗಳನ್ನು ಅಳವಡಿಸಿಕೊಂಡು ಕೆಲಸ ನಿರ್ವಹಿಸುತ್ತಿದ್ದು, ಅದೇ ರೀತಿ ಸಾರ್ವಜನಿಕರ ಸಹಕಾರವನ್ನು ಈ ಸಂದರ್ಭದಲ್ಲಿ ನೆನೆದರು. ಇನ್ನು ಮುಂದಿನ ದಿನದಲ್ಲಿ ಇಲಾಖೆಗೆ ಕೆಲಸವನ್ನು ಇನ್ನಷ್ಟು ನಿಷ್ಠೆ ಪ್ರಾಮಾಣಿಕತೆಯಿಂದ ಮುಂದುವರೆಸಲಿದ್ದೇನೆ.''

- ವೆಲೆಂಟೈನ್ ಡಿ'ಸೋಜಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News