ಆ.6: ಪುತ್ತೂರಿನಲ್ಲಿ ಪತ್ರಿಕಾ ದಿನಾಚರಣೆ 'ಮೀಡಿಯಾ ಎಟ್ ವಿಲೇಜ್' ಅಭಿಯಾನ ಉದ್ಘಾಟನೆ

Update: 2019-08-04 11:37 GMT

ಪುತ್ತೂರು: ಪುತ್ತೂರು ತಾಲೂಕು ಪತ್ರಕರ್ತರ ಸಂಘ ಇದರ ಆಶ್ರಯದಲ್ಲಿ ಆರ್ಯಾಪು ಗ್ರಾಮ ಪಂಚಾಯತ್ ಮತ್ತು ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇವರ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ- 2019, "ಮೀಡಿಯಾ ಎಟ್ ವಿಲೇಜ್' ಅಭಿಯಾನ ಉದ್ಘಾಟನೆ, ಸನ್ಮಾನ ಮತ್ತು ಸಂವಾದ ಕಾರ್ಯಕ್ರಮ ಆ. 6ರಂದು ಸಂಪ್ಯದ ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾ ಭವನದಲ್ಲಿ ನಡೆಯಲಿದೆ.

'ಸಾಮಾಜಿಕ ಸ್ವಾಸ್ಥ್ಯ - ಮಾಧ್ಯಮಗಳ ಪಾತ್ರ' ಎಂಬ ಕುರಿತು ಸಂವಾದ ಮತ್ತು ಹಿರಿಯ ನಾಟಿವೈದ್ಯೆ ಪದ್ಮಾವತಿ ಪೂಜಾರಿ ಹಾಗೂ ಡಾಕ್ಟರೇಟ್ ಪದವಿ ಪಡೆದ ದೈವನರ್ತಕ ರವೀಶ್ ಪಡುಮಲೆ ಇವರಿಗೆ ಸನ್ಮಾನ ಕಾರ್ಯಕ್ರಮ ಇದೇ ಸಂದರ್ಭದಲ್ಲಿ ನಡೆಯಲಿದೆ.

ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸುಧಾಕರ ಸುವರ್ಣ ತಿಂಗಳಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ಹಿರಿಯ ಪತ್ರಕರ್ತ ಕೃಷ್ಣ ಭಟ್ ಅವರು ಮೀಡಿಯಾ ಎಟ್ ವಿಲೇಜ್ ಅಭಿಯಾನ ಉದ್ಘಾಟಿಸಿ, ಪ್ರಧಾನ ಉಪನ್ಯಾಸ ನೀಡಲಿದ್ದಾರೆ. ಡಿವೈಎಸ್‍ಪಿ ದಿನಕರ ಶೆಟ್ಟಿ ಸನ್ಮಾನ ನೆರವೇರಿಸಲಿದ್ದಾರೆ.  ಆರ್ಯಾಪು ಗ್ರಾಪಂ ಅಧ್ಯಕ್ಷೆ ಗೀತಾ ಚೆನ್ನಪ್ಪ ಮರಿಕೆ, ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 

ಸಭಾ ಕಾರ್ಯಕ್ರಮದ ಬಳಿಕ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಪುತ್ತೂರಿನ ಪತ್ರಕರ್ತರು, ಕಾರ್ಯಕ್ರಮದ ಉಪನ್ಯಾಸಕರು ಮತ್ತು ನಾಗರಿಕರು ಭಾಗವಹಿಸಲಿದ್ದಾರೆ ಎಂದು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News