ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ; ಇನ್ನಷ್ಟು ಮಳೆಯ ಎಚ್ಚರಿಕೆ

Update: 2019-08-06 16:52 GMT

ಉಡುಪಿ, ಆ.6: ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 15 ಸೆ.ಮೀ. ಮಳೆ ಸುರಿದಿದ್ದು, ಕುಂದಾಪುರದಲ್ಲಿ ಅತ್ಯಧಿಕ 18.2 ಸೆ.ಮೀ. ಮಳೆಯಾದರೆ, ಕಾರ್ಕಳದಲ್ಲಿ 13.4ಸೆ.ಮೀ. ಹಾಗೂ ಉಡುಪಿಯಲ್ಲಿ 11.5ಸೆ.ಮೀ. ಮಳೆಯಾದ ವರದಿ ಬಂದಿದೆ. ಮುಂದಿನ ಮೂರು ದಿನಗಳ ಕಾಲ ಇನ್ನೂ ಹೆಚ್ಚಿನ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಇದೇ ವೇಳೆ ಬ್ರಹ್ಮಾವರ ತಾಲೂಕಿನ ಶಿರಿಯಾರದಲ್ಲಿ ವಾರಾಹಿ ನದಿ ನೀರನ್ನು ಬಿಟ್ಟ ಹಿನ್ನೆಲೆಯಲ್ಲಿ ಮೂರು ಮನೆಗಳು ನೀರಿನಿಂದ ಜಲಾವೃತವಾಗಿದ್ದು, ಈ ಮೂರು ಮನೆಗಳಲ್ಲಿರುವವರನ್ನು ಸುರಕ್ಷಿತೆಯ ದೃಷ್ಟಿಯಿಂದ ದೋಣಿಯ ವ್ಯವಸ್ಥೆ ಮಾಡಿ ಅವರ ಕೋರಿಕೆಯಂತೆ ಸಂಬಂಧಿಕರ ಮನೆಗೆ ತಲುಪಿಸಲಾಗಿದೆ ಎಂದು ಬ್ರಹ್ಮಾವರ ತಹಶೀಲ್ದಾರ್ ಕಿಣ್ ಗೌರಯ್ಯ ತಿಳಿಸಿದ್ದಾರೆ. ಇದನ್ನು ಹೊರತು ಪಡಿಸಿದರೆ ಬ್ರಹ್ಮಾವರ ವ್ಯಾಪ್ತಿಯಲ್ಲಿ ಎಲ್ಲೂ ನೀರು ಅಪಾಯ ಮಟ್ಟದಲ್ಲಿ ಹರಿಯುತ್ತಿಲ್ಲ ಎಂದವರು ತಿಳಿಸಿದರು.

ಸ್ವರ್ಣ ನದಿ ಹಾಗೂ ಸೀತಾನದಿಗಳು ತುಂಬಿ ಹರಿಯುತಿದ್ದರೂ, ಇನ್ನೂ ಅಪಾಯಮಟ್ಟಕ್ಕೇರಿಲ್ಲ. ಹೀಗಾಗಿ ತೀರಾ ತಗ್ಗು ಪ್ರದೇಶಗಳಾದ ಉಪ್ಪೂರು, ಹಂದಾಡಿ, ಹನೆಹಳ್ಳಿ ಪ್ರದೇಶಗಳಲ್ಲಿ ನೀರಿದ್ದರೂ, ಜನರ ಸಂಚಾರಕ್ಕೆ ತೊಂದರೆ ಎದುರಾಗಿಲ್ಲ. ಅದೇ ರೀತಿ ಎಲ್ಲೂ ಕಡಲಕೊರೆತ ಕಂಡುಬಂದಿಲ್ಲ ಎಂದು ಹೇಳಿದರು.

ನಿನ್ನೆ ರಾತ್ರಿಯಿಂದ ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ 16 ಮನೆಗಳಿಗೆ ಮಳೆ-ಗಾಳಿಯಿಂದ ಹಾನಿಯಾಗಿರುವ ಬಗ್ಗೆ ವರದಿಗಳು ಬಂದಿವೆ. ನೀಲಾವರ ಗ್ರಾಮದ ಗುಲಾಬಿ ಶೆಡ್ತಿ ಮನೆಗೆ 20,000, ಹೆಗ್ಗುಂಜೆಯ ಗ್ರಾಮ ಕರಣಿಕರ ಕಚೇರಿಯ ಛಾವಣೆ ಹೆಂಚು ಹಾರಿ 10,000ರೂ. ಅದೇ ಗ್ರಾಮದ ಬಸನ ಕೊರಗ ಮನೆಗೆ 25,000ರೂ. ಮಟಪಾಡಿಯ ನರಸಿಂಹ ನಾಯ್ಕರ ಮನೆಗೆ ಸಿಡಿಲು ಬಡಿದು 10,000ರೂ., ಮಣೂರು ಗ್ರಾಮದ ಸಂಜೀವ ಕಾಂಚನ್, ನಾರಾಯಣ ಆಚಾರ್ಯರ ಮನೆಗಳಿಗೆ 15,000ರೂ., ಕೋಡಿಯ ಕುಸುಮ ಜಿ. ನಾಯಕ್ ಮನೆಗೆ 75,000ರೂ., ಪೆಜಮಂಗೂರು ಗ್ರಾಮ ನಾರಾಯಣ ಸೇರಿಗಾರ್ ಮನೆ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದ್ದು ಎರಡು ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ. ಉಪ್ಪೂರು ಗ್ರಾಮದ ಅನಂತ ಪೂಜಾರಿ ಮನೆಗೆ 50,000ರೂ. ನಷ್ಟವಾಗಿದೆ.

ಉಡುಪಿ ತಾಲೂಕಿನಲ್ಲಿ ಅಂಜಾರು, ಕುದಿ, ಬೈರಂಪಳ್ಳಿ, ಪೆರ್ಡೂರು ಆಸುಪಾಸಿನ 25ಕ್ಕೂ ಅಧಿಕ ಮನೆಗಳಿಗೆ ಸಂಪೂರ್ಣ ಅಥವಾ ಭಾಗಶ: ಹಾನಿಯಾಗಿದ್ದು ಇದರಿಂದ 14ರಿಂದ 15 ಲಕ್ಷ ರೂ.ನಷ್ಟ ಸಂಭವಿಸಿದೆ. ಈ ಮನೆಗಳಲ್ಲಿ 4-5 ಮನೆಗಳು ಸಂಪೂರ್ಣ ಹಾನಿಗೊಂಡಿವೆ ಎಂದು ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ತಿಳಿಸಿದ್ದಾರೆ.

ಅಡಿಕೆ ತೋಟಕ್ಕೆ ಭಾರೀ ಹಾನಿ:  ಜಿಲ್ಲೆಯ ಪ್ರಗತಿ ಪರ ರೈತರಲ್ಲಿ ಒಬ್ಬರಾದ ಉಡುಪಿ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಅವರ ಮನೆಯ ಅಡಿಕೆ ತೋಟದ 500ಕ್ಕೂ ಅಧಿಕ ಫಲಭರಿತ ಅಡಿಕೆ ಮರಗಳು ಇಂದು ಬೆಳಗ್ಗೆ ಬೀಸಿದ ಬಿರುಗಾಳಿಗೆ ಧರಾಶಾಹಿಯಾಗಿವೆ ಎಂದು ಗ್ರಾಮ ಕರಣಿಕ ಗಜೇಂದ್ರ ತಿಳಿಸಿದ್ದಾರೆ. ಇದರ ನಷ್ಟದ ಅಂದಾಜು ಇನ್ನೂ ಮಾಡಿಲ್ಲ ಎಂದರು.

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 65ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ಕಂಟ್ರೋಲ್ ರೂಮಿಗೆ ಬಂದಿವೆ. ಇವುಗಳಿಂದ ಐದು ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ನಷ್ಟದ ಅಂದಾಜು ಮಾಡಲಾಗಿದೆ.

ಮೆಸ್ಕಾಂನ 142 ಕಂಬಗಳಿಗೆ ಹಾನಿ

ಕಳೆದೆರಡು ದಿನಗಳಿಂದ ಬೀಸುತ್ತಿರುವ ಭಾರೀ ಗಾಳಿಗೆ ಮೆಸ್ಕಾಂ ಅತಿ ಹೆಚ್ಚು ನಷ್ಟವನ್ನು ಅನುಭವಿಸಿದ್ದು, ಎರಡನೇ ದಿನಗಳಲ್ಲಿ ಮೆಸ್ಕಾಂನ 142 ವಿದ್ಯುತ್ ಕಂಬಗಳು ಬಿರುಗಾಳಿ-ಮಳೆಗೆ ನೆಲಕಚ್ಚಿವೆ ಎಂದು ಮೆಸ್ಕಾಂನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಇವುಗಳಲ್ಲಿ ಉಡುಪಿ, ಮಣಿಪಾಲ ಹಾಗೂ ಕಾರ್ಕಳಗಳಲ್ಲಿ ಅತ್ಯಧಿಕ ಕಂಬಗಳು ಬಿದ್ದಿದ್ದು, ಜಿಲ್ಲೆಯ ಹಲವು ಕಡೆಗಳಲ್ಲಿ ಕಡಿತಗೊಂಡಿರುವ ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಲು ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ ಎಂದು ಇವರು ತಿಳಿಸಿದರು.

ಕಳೆದ ಆ.1ರಿಂದ ಇದುವರೆಗೆ ಮೆಸ್ಕಾಂಗೆ ಇಲಾಖೆಯೊಂದಕ್ಕೆ 22 ಲಕ್ಷ ರೂ.ಗಳಷ್ಟು ನಷ್ಟದ ಅಂದಾಜು ಮಾಡಲಾಗಿದೆ ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News