ಉಡುಪಿ ಜಿಲ್ಲೆಯಲ್ಲೂ ಜಾನುವಾರು ಸಾಗಾಟಕ್ಕೆ ಹೊಸ ಆ್ಯಪ್: ಜಿಲ್ಲಾಧಿಕಾರಿ
ಉಡುಪಿ, ಆ.7: ಜಾನುವಾರುಗಳನ್ನು ಕಾನೂನು ಬದ್ಧವಾಗಿ, ಸುರಕ್ಷಿತವಾಗಿ ಸಾಗಾಣಿಕೆ ಮಾಡುವ ಬಗ್ಗೆ ದ.ಕ. ಜಿಲ್ಲೆಯಲ್ಲಿ ಎಲ್ಎಲ್ಸಿ (ಲೈವ್ಸ್ಟಾಕ್ ಲಾಜಿಸ್ಟಿಕ್ ಕಂಟ್ರೋಲ್) ಆ್ಯಪ್ ಸಿದ್ದಪಡಿಸಿದ್ದು, ಅದೇ ಮಾದರಿಯನ್ನು ಉಡುಪಿ ಜಿಲ್ಲೆಯಲ್ಲಿಯೂ ಅಳವಡಿಸುವ ಕುರಿತಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದ್ದಾರೆ.
ಬುಧವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಪ್ರಾಣಿ ದಯಾ ಸಂಘದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಎಲ್ಎಲ್ಸಿ ಆ್ಯಪ್ನಲ್ಲಿ ನೊಂದಣಿ ಮಾಡಿಕೊಂಡು, ಜಾನುವಾರುಗಳನ್ನು ಸಾಗಿಸುವುದರಿಂದ, ವಾಹನಗಳ ನೊಂದಣಿ ಸಂಖ್ಯೆ, ಸಾಗಾಟಗಾರನ ವಿವರ ಲಭ್ಯವಾಗಲಿದ್ದು, ಕಾನೂನು ಬದ್ಧವಾಗಿ ಜಾನುವಾರು ಸಾಗಾಟ ಮಾಡುವವರು ಮತ್ತು ಅಕ್ರಮ ಸಾಗಾಟಗಾರರನ್ನು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗಲಿದೆ ಎಂದು ಡಿಸಿ ಹೇಳಿದರು.
ಜಿಲ್ಲೆಯಲ್ಲಿ ಜಾನುವಾರುಗಳ ಅಕ್ರಮ ಸಾಗಾಟ ಪ್ರಕರಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀದಿಯಲ್ಲಿರುವ ಜಾನುವಾರುಗಳ ಸಾಗಾಟ ನಡೆಯುತ್ತಿದೆ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದರು. ಜಾನುವಾರುಗಳನ್ನು ಬೀದಿಗೆ ಬಿಡುವ ಮಾಲಕರ ವಿರುದ್ಧ ಕ್ರಮ ಕೈಗೊಳ್ಳುವ ಚಿಂತನೆ ಇದೆ ಮತ್ತು ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ಸಂರಕ್ಷಣೆ ಕುರಿತಂತೆ ಗ್ರಾಪಂಗಳ ಹಂತದಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಕುರಿತಂತೆ ಜಿಪಂ ಸಿಇಒ ಮೂಲಕ ಎಲ್ಲಾ ಗ್ರಾಪಂಗಳಿಗೆ ಸುತ್ತೋಲೆ ಕಳುಹಿಸಲಾಗುವುದು ಎಂದು ಡಿಸಿ ಹೇಳಿದರು.
ಜಾನುವಾರುಗಳನ್ನು ರಕ್ಷಿಸುತ್ತಿರುವ ಖಾಸಗಿ ಸಂಸ್ಥೆಗಳು ಜಾನುವಾರುಗಳ ನಿರ್ವಹಣೆಗೆ ಸರಕಾರದ ಸಹಾಯಧನದ ಅಗತ್ಯತೆಯ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು, ಜಾನುವಾರುಗಳ ರಕ್ಷಣೆಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸು ತ್ತಿರುವ ಗೋಶಾಲೆ ಹಾಗೂ ಇತರ ಸಂಸ್ಥೆಗಳು ಕಡ್ಡಾಯವಾಗಿ ನೊಂದಾಯಿಸಿ ಕೊಳ್ಳುವಂತೆ ಸೂಚನೆ ನೀಡಿದರು.
ನೋಂದಾಯಿತ ಗೋಶಾಲೆಗಳ ಸಂಖ್ಯೆ ಕಡಿಮೆ ಇರುವುದರಿಂದ ಗೋವುಗಳ ನಿರ್ವಹಣೆಗೆ ಜಾಗದ ಕೊರತೆ ಇರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಈ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಹಾಗೂ ಅಪಘಾತದಲ್ಲಿ ಗಾಯಗೊಂಡ ಶ್ವಾನ ಅಥವಾ ಇತರೆ ಜಾನುವಾರು ಗಳ ಶುಶ್ರೂಷೆ ಮಾಡಿ ಅವುಗಳ ರಕ್ಷಣೆಗೆ ಪ್ರತಿ ತಾಲೂಕಿಗೆ ಒಂದು ತಾತ್ಕಾಲಿಕ ನೈಟ್ಶೆಲ್ಟರ್ನ ವ್ಯವಸ್ಥೆ ಕಲ್ಪಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಜಿಲ್ಲಾ ಪ್ರಾಣಿ ದಯಾ ಸಂಘದಲ್ಲಿ ಕ್ರಿಯಾತ್ಮಕ ಚಟುವಟಿಕೆಗಳನ್ನು ನಡೆಸಲು 4 ತಿಂಗಳಿಗೊಮ್ಮೆ ಸಭೆಯನ್ನು ನಡೆಸುವಂತೆ ತಿಳಿಸಿ ನೊಂದಾಯಿತ ಗೋ ಶಾಲೆ ಹಾಗೂ ಇತರ ಸಂಸ್ಥೆ ಹಾಗೂ ಸಿಬ್ಬಂದಿಗಳಿಗೆ ಗುರುತಿನ ಚೀಟಿ ನೀಡುವಂತೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.
ಡಿಸೆಂಬರ್ ಒಳಗೆ ನಿಗದಿತ ಶಾಲೆಗಳನ್ನು ಗುರಿಯಾಗಿಸಿ ಶಾಲೆಗಳಲ್ಲಿ ಪ್ರಾಣಿ ಗಳ ರಕ್ಷಣೆಯ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದ ಡಿಸಿ, ಬೇಸಿಗೆಯಲ್ಲಿ ಶಾಲಾ ಕಟ್ಟಡ ಅಥವಾ ಆವರಣಗಳಲ್ಲಿ ಪಕ್ಷಿಗಳಿಗೆ ಅಗತ್ಯ ವಾದ ನೀರು, ಆಹಾರವನ್ನು ನೀಡುವ ವ್ಯವಸ್ಥೆ ಕಲ್ಪಿಸುತ್ತಿರುವ ಶಾಲೆಗಳನ್ನು ಗುರುತಿಸಿ ಜಿಲ್ಲಾ ಪ್ರಾಣಿ ದಯಾ ಸಂಘದ ವತಿಯಿಂದ ಗೌರವಿಸುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.
ರಸ್ತೆ ಅಪಘಾತದಲ್ಲಿ ಮೃತಪಟ್ಟ ಪ್ರಾಣಿಗಳ ಶವಗಳನ್ನು ವಿಲೇವಾರಿ ಮಾಡಲು ಜಾಗದ ಕೊರತೆ ಇದ್ದು, ಶಾಶ್ವತ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಯವರಲ್ಲಿ ಶ್ರೀ ದ್ವಾರಕಾಮಯಿ ಸಾಯಿ ಸಾಂತ್ವನ ಮಂದಿರ ಟ್ರಸ್ಟ್ ಸಂಸ್ಥೆಯವರು ಮನವಿ ಮಾಡಿದರು. ಕುದಿ ಗ್ರಾಮದಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ನಾಶ, ಗಂಗೊಳ್ಳಿ ಬಂದರಿನಲ್ಲಿ ಬೀದಿ ನಾಯಿಗಳ ಕಾಟ, ಬೀದಿ ನಾಯಿಗಳಿಗೆ ನೈಟ್ ಶೆಲ್ಟರ್ ಆರಂಭ, ಹೊಸ ಗೋಶಾಲೆ ಆರಂಭದ ಬಗ್ಗೆ ಸಬೆಯಲ್ಲಿ ಚರ್ಚೆ ನಡೆಯಿತು.
ಜಿಲ್ಲೆಯಲ್ಲಿ 145 ಪಶು ವೈದ್ಯರ ಅಗತ್ಯತೆ ಇದ್ದು, ಪ್ರಸ್ತುತ 36 ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಪಶುಪಾಲನಾ ಇಲಾಖೆ, ಸ್ಥಳೀಯ ಸಂಸ್ಥೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ 3325 ಶ್ವಾನ ಗಳಿಗೆ ರೇಬೀಸ್ ಲಸಿಕೆ ನೀಡಲಾಗಿದ್ದು, 124 ಶ್ವಾನಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಈವರೆಗೆ 3 ಗೋಹತ್ಯೆ ಪ್ರಕರಣ ಹಾಗೂ 11 ಅಕ್ರಮ ಜಾನುವಾರು ಸಾಗಾಣಿಕೆ ಪ್ರಕರಣ ದಾಖಲಾಗಿರುವುದಾಗಿ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಸರ್ವೋತ್ತಮ ಉಡುಪ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರಾಣಿ ದಯಾ ಸಂಘದ ಸದಸ್ಯರು ಉಪಸ್ಥಿತರಿದ್ದರು.