ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ
ಮಂಗಳೂರು, ಆ.9: ಮಹಿಳೆಯ ಜತೆ ಅನೈತಿಕ ಸಂಬಂಧ ಬೆಳೆಸಿ ಅತ್ಯಾಚಾರ ಮಾಡಿ ಕೊಲೆಗೈದ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು ಎರಡು ಲಕ್ಷ ರೂ. ದಂಡ ವಿಧಿಸಿ 6ನೇ ಹೆಚ್ಚುವರಿ ಜಿಲ್ಲಾ ಮತ್ತ ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ನಿವಾಸಿ ಲಕ್ಷ್ಮಣ ಆಚಾರ್ಯ (31) ಶಿಕ್ಷೆಗೊಳಗಾದ ಅರೋಪಿ.
ಪ್ರಕರಣ ವಿವರ: ಮರೋಡಿ ಗ್ರಾಮದ ಮಹಿಳೆಯೊಬ್ಬರು ಮದುವೆಯಾಗಿ ಪತಿಯನ್ನು ತ್ಯಜಿಸಿದ್ದರು. ಅವರಿಗೆ ಒಂಬತ್ತು ವರ್ಷದ ಮಗನಿದ್ದು, 3ನೇ ತರಗತಿಯಲ್ಲಿ ಓದುತ್ತಿದ್ದ. ಅದೇ ಗ್ರಾಮದ ಲಕ್ಷ್ಮಣ ಆಚಾರ್ಯ ಮಹಿಳೆಯ ಜತೆ ಅನೈತಿಕ ಸಂಬಂಧ ಹೊಂದಿದ್ದು, ಪದೇ ಪದೇ ಭೇಟಿಯಾಗುತ್ತಿದ್ದ.
ಮಹಿಳೆ ಆತನೊಂದಿಗೆ ಮದುವೆಯಾಗಲು ಒತ್ತಾಯಿಸುತ್ತಾರೆ. ಇದರಿಂದ ಅಸಮಾಧಾನಗೊಂಡ ಆತ ಆಕೆಯನ್ನು ಪುಸಲಾಯಿಸಿ 2012ರ ಆ.16ರಂದು ಮರೋಡಿ ಗ್ರಾಮದ ದೇರಾಜೆಗುಡ್ಡಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆಗೈದು ಪರಾರಿಯಾಗುತ್ತಾನೆ.
ಸಂಜೆ ಶಾಲೆಯಿಂದ ಬಂದ ಆಕೆಯ ಪುತ್ರ, ತನ್ನ ತಾಯಿಯು ಮನೆಯಲ್ಲಿ ಕಾಣದಿದ್ದಾಗ ಮಾವನ ಬಳಿ ವಿಷಯ ತಿಳಿಸುತ್ತಾನೆ. ಕೂಡಲೇ ಸಂಬಂಧಿಕರು, ಊರವರು ಮಹಿಳೆಗಾಗಿ ಹುಡುಕಾಟ ನಡೆಸುತ್ತಾರೆ. ಆ.18ರಂದು ವೇಣೂರು ಠಾಣೆಯಲ್ಲಿ ಮಹಿಳೆ ನಾಪತ್ತೆಯಾದ ಬಗ್ಗೆ ದೂರು ನೀಡಿ, ಅನುಮಾನದ ಮೇಲೆ ಲಕ್ಷ್ಮಣ ಆಚಾರ್ಯನ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ ಲಕ್ಷ್ಮಣ ಆಚಾರ್ಯನನ್ನು ಆ.19ರಂದು ಬಂಧಿಸುತ್ತಾರೆ. ತೀವ್ರ ವಿಚಾರಣೆ ನಡೆಸಿದಾಗ ಮಹಿಳೆಯನ್ನು ಕೊಲೆ ಮಾಡಿರುವುದಾಗಿ ಯುವಕ ಒಪ್ಪಿದ್ದಲ್ಲದೆ, ಸ್ಥಳ ಮಹಜರು ನಡೆಸಿದಾಗ ಕೊಲೆಗೈದ ಸ್ಥಳದಲ್ಲಿ ಮಹಿಳೆಯ ಕೊಳೆತ ಮೃತದೇಹ ಪತ್ತೆಯಾಗಿತ್ತು. ಕೊಲೆಗೈದ ಬಳಿಕ ಆರೋಪಿ ಮಹಿಳೆಯ ಕರಿಮಣಿ ಸರ ಹಾಗೂ ಕಿವಿಯೋಲೆ ಕದ್ದೊಯ್ದಿದ್ದು, ಒಂದನ್ನು ಮಾರಾಟ ಮಾಡಿ ಇನ್ನೊಂದನ್ನು ಫೈನಾನ್ಸ್ನಲ್ಲಿ ಅಡವಿಟ್ಟಿರುವುದಾಗಿ ವಿಚಾರಣೆಯಲ್ಲಿ ತಿಳಿಸಿರುತ್ತಾನೆ.
ಶಿಕ್ಷೆ ವಿವರ
ಕೊಲೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸೈಯಿದುನ್ನೀಸಾ ಅವರು 302 (ಕೊಲೆ) ಪ್ರಕರಣದ ಆರೋಪದಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ಎರಡು ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ವಿಧಿಸಲು ತಪ್ಪಿದಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಸಾದಾ ಶಿಕ್ಷೆ ಅನುಭವಿಸಬೇಕು. ದಂಡದ ಮೊತ್ತದಲ್ಲಿ ಆಕೆಯ ಪುತ್ರನಿಗೆ 1.5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಕರಣದಲ್ಲಿ 23 ಜನ ಸಾಕ್ಷಿದಾರರು ವಿಚಾರಿಸಲಾಗಿದ್ದು, 20 ದಾಖಲಾತಿ ಸಂಗ್ರಹಿಸಲಾಗಿದೆ. ವೇಣೂರು ಇನ್ಸ್ಪೆಕ್ಟರ್ ಆಗಿದ್ದ ಭಾಸ್ಕರ್ ಶೆಟ್ಟಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಜುಡಿತ್ ಒ.ಎಂ.ಕ್ರಾಸ್ತ ವಾದಿಸಿದ್ದರು.