ಕಾಶ್ಮೀರ: ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಖಯ್ಯೂಮ್ ಸೇರಿ 25 ಪ್ರತ್ಯೇಕತಾವಾದಿಗಳು ಉ.ಪ್ರ. ಜೈಲಿಗೆ ಸ್ಥಳಾಂತರ
Update: 2019-08-09 14:29 GMT
ಶ್ರೀನಗರ, ಆ.9: ವಿಧಿ 370ನ್ನು ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಮ್ಮ-ಕಾಶ್ಮೀರ ಉಚ್ಚ ನ್ಯಾಯಾಲಯದ ವಕೀಲರ ಸಂಘದ ಅಧ್ಯಕ್ಷ ಮಿಯಾಂ ಖಯ್ಯೂಮ್ ಸೇರಿದಂತೆ 25 ಪ್ರತ್ಯೇಕತಾವಾದಿಗಳನ್ನು ಉತ್ತರ ಪ್ರದೇಶದ ಆಗ್ರಾ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ಇಲ್ಲಿ ತಿಳಿಸಿದರು.
25 ಕೈದಿಗಳನ್ನು ಗುರುವಾರ ಶ್ರೀನಗರದಿಂದ ಆಗ್ರಾಕ್ಕೆ ವಿಶೇಷ ವಿಮಾನದಲ್ಲಿ ಕರೆದೊಯ್ಯಲಾಗಿದ್ದು,ಕಾಶ್ಮೀರ್ ಚೇಂಬರ್ ಆಫ್ ಕಾಮರ್ಸ್ನ ಪದಾಧಿಕಾರಿ ಮುಬಿನ್ ಶಾ ಇವರಲ್ಲಿ ಸೇರಿದ್ದಾರೆ.
ಈ ಪೈಕಿ ಹೆಚ್ಚಿನವರು ಈ ಹಿಂದೆ ತೊಂದರೆಗಳನ್ನು ಸೃಷ್ಟಿಸಿರುವ ಇತಿಹಾಸ ಹೊಂದಿರುವ ಸಂಭಾವ್ಯ ಕಲ್ಲುತೂರಾಟಗಾರರು ಮತ್ತು ಕಣಿವೆಯಲ್ಲಿನ ಪ್ರತ್ಯೇಕತಾವಾದಿ ಗುಂಪುಗಳ ಸಕ್ರಿಯ ಸದಸ್ಯರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಖ್ಯಾತ ನ್ಯಾಯವಾದಿಯಾಗಿರುವ ಖಯೂಮ್ ಅವರು ಪ್ರತ್ಯೇಕತಾವಾದಿಗಳ ವಿರುದ್ಧ ಪೊಲೀಸರು ದಾಖಲಿಸಿಕೊಂಡಿರುವ ಹಲವಾರು ಪ್ರಕರಣಗಳನ್ನು ಪ್ರತಿನಿಧಿಸುತ್ತಿದ್ದಾರೆ.