ಪುತ್ತೂರು : ಮುಳುಗಡೆಯಾದ ಚೆಲ್ಯಡ್ಕ ಸೇತುವೆ
ಪುತ್ತೂರು : ಪುತ್ತೂರು ಕುಂಜೂರುಪಂಜ ಪಾಣಾಜೆ ರಸ್ತೆಯಲ್ಲಿರುವ ಚೆಲ್ಯಡ್ಕ ಮುಳುಗು ಸೇತುವೆ ಮೂರನೇ ಬಾರಿಗೆ ಜಲಾವೃತಗೊಂಡಿದೆ. ಗುರುವಾರ ರಾತ್ರಿಯಿಂದಲೇ ಜಲಾವೃತಗೊಂಡಿರುವ ಸೇತುವೆ ಭಾಗದ ನೀರು ಶುಕ್ರವಾರ ಸಂಜೆ ತನಕವೂ ಇಳಿಮುಖವಾಗದ ಕಾರಣ ಈ ಭಾಗದ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಚೆಲ್ಯಡ್ಕ ಮುಳುಗು ಸೇತುವೆ ಮುಳುಗಡೆಯಾದ ಕಾರಣ ಪುತ್ತೂರು ದೇವಸ್ಯ-ಪಾಣಾಜೆ ರಸ್ತೆಯಲ್ಲಿ ನಿತ್ಯ ಸಂಚರಿಸುತ್ತಿದ್ದ ಖಾಸಗಿ ಬಸ್ಗಳ ಸಂಚಾರ ಸ್ಥಗಿತಗೊಂಡಿದ್ದು, ಮಾಣಿ-ಮೈಸೂರು-ಸಂಟ್ಯಾರು ಮಾರ್ಗವಾಗಿ ಖಾಸಗಿ ಬಸ್ಗಳನ್ನು ಓಡಿಸಲಾಗುತ್ತಿದೆ. ಖಾಸಗಿ ಬಸ್ಸುಗಳನ್ನೇ ಅವಲಂಚಿಸಿಕೊಂಡಿದ್ದ ಗುಮ್ಮಟೆಗದ್ದೆ,ಅಜ್ಜಿಕಲ್ಲು, ಕಾಪಿಕಾಡು, ಒಳತ್ತಡ್ಕ ವ್ಯಾಪ್ತಿಯ ಜನತೆ ಸಾರಿಗೆ ವ್ಯವಸ್ಥೆಯಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಗುರುವಾರ ರಾತ್ರಿ ಬೀಸಿದ ಬಾರೀ ಗಾಳಿಗೆ ಕೆದಿಲ ಗ್ರಾಮದ ಕೆದಿಲ ರಾಘವೇಂದ್ರ ಭಟ್ ಅವರ ಅಡಕೆ ತೋಟದಲ್ಲಿ ಸುಮಾರು 200ಕ್ಕೂ ಅಧಿಕ ಅಡಕೆ ಮರಗಳು ಉರುಳಿ ಬಿದ್ದು ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.
ಪುತ್ತೂರು ಪುರಸಭಾ ವ್ಯಾಪ್ತಿಯ ದರ್ಬೆ ಕಾವೇರಿಕಟ್ಟೆ ಎಂಬಲ್ಲಿ ಕೃತಕ ನೆರೆಯಿಂದಾಗಿ ಸ್ಥಳೀಯ ನಿವಾಸಿ ಮಾಧವ ಪ್ರಭು ಎಂಬವರ ಮನೆಯ ಅಂಗಳಕ್ಕೆ ನೀರು ನುಗ್ಗಿತ್ತು. ಖಾಸಗಿ ಸ್ಥಳದವರು ನೀರು ಹರಿದು ಹೋಗುವ ಚರಂಡಿಗೆ ಮಣ್ಣು ತುಂಬಿಸಿದ್ದ ಕಾರಣ ಮಾಧವ ಪ್ರಭು ಅವರ ಮನೆಯ ಅಂಗಳಕ್ಕೆ ಮಳೆ ನೀರು ಹರಿದು ಬಂದಿತ್ತು. ಸ್ಥಳಕ್ಕೆ ಆಗಮಿಸಿದ ನಗರಸಭಾ ಅಧಿಕಾರಿಗಳು ಮಣ್ಣನ್ನು ತೆರವುಗೊಳಿಸಿದರು.