ಮಳೆಹಾನಿ: 128 ಕೋಟಿ ರೂ. ಬಿಡುಗಡೆಗೆ ತೀರ್ಮಾನ: ಸಚಿವ ಸದಾನಂದಗೌಡ
ಮಂಗಳೂರು, ಆ.9: ಉತ್ತರ ಕರ್ನಾಟಕದಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ರಾಜ್ಯದಲ್ಲಿ ಮಳೆಹಾನಿಗಾಗಿ ಕೇಂದ್ರ ಸರಕಾರದಿಂದ 128 ಕೋಟಿ ರೂ. ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಹಮ್ಮಿಕೊಂಡ ಮಳೆಹಾನಿ ಮುಂಜಾಗ್ರತಾ ಸಭೆಯನ್ನುದ್ದೇಶಿ ಮಾತನಾಡುತ್ತಿದ್ದರು.
ಜೀವಹಾನಿ ತಡೆಗೆ ಎಲ್ಲ ರೀತಿಯ ಸಾಮೂಹಿಕ ಪ್ರಯತ್ನ ಮಾಡಲು ಅಧಿಕಾರಿಗಳ ಸಭೆಯಲ್ಲಿ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.
ದ.ಕ. ಜಿಲ್ಲೆಯಲ್ಲಿ ನೇತ್ರಾವತಿ, ಕುಮಾರಧಾರ ಹಾಗೂ ಕಡಲ್ ಕೊರತೆಯಿಂದ ಹಾನಿಯಾಗಿದೆ. ತಕ್ಷಣ ಜೀವಹಾನಿ ತಡೆಗೆ ಸಂಘ ಸಂಸ್ಥೆ , ಅಧಿಕಾರಿಗಳು ಜನಪ್ರತಿನಿಧಿಗಳು ಸೇರಿ ಸಾಮೂಹಿಕ ಪ್ರಯತ್ನ ಮಾಡಬೇಕಾಗಿದೆ ಎಂದರು.
ಜನರಿಗೆ ತುರ್ತು ಸಹಾಯಕ್ಕಾಗಿ ಬಿಎಸ್ಎನ್ಎಲ್ ಮೊಬೈಲ್ ಟವರ್ಗಳನ್ನು ಸುಸ್ಥಿತಿಯಲ್ಲಿಡಲು ಕರೆಂಟ್ ಇಲ್ಲದ ಕಡೆ ಜನರೇಟ್ ಬಳಕೆಗೆ ಸೂಚನೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಬೇಕಾದ ಎಲ್ಲ ರೀತಿಯ ನೆರವು ನೀಡಲು ಸಿದ್ಧ. ಕೊಡಗು ಜಿಲ್ಲೆಯಲ್ಲಿ ಭೂ ಕುಸಿತದಿಂದ 5 ಜನ ನಿಧನರಾಗಿದ್ದಾರೆ ಎಂದು ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.
ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮೊದಲಾದವರು ಉಪಸ್ಥಿತರಿದ್ದರು.