ಉಳ್ಳಾಲ ಸೇತುವೆಯಿಂದ ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಪತ್ತೆ
Update: 2019-08-10 04:27 GMT
ಉಳ್ಳಾಲ, ಆ.10: ಉಳ್ಳಾಲ ಸೇತುವೆಯಲ್ಲಿ ನಿನ್ನೆ ಮುಸ್ಸಂಜೆ ವೇಳೆ ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಇಂದು ಬೆಳಗ್ಗೆ ಸೋಮೇಶ್ವರ ಬಳಿ ಪತ್ತೆಯಾಗಿದೆ.
ಮೃತರನ್ನು ಪುತ್ತೂರು ಬಡಗನ್ನೂರು ಕೋಡಿಯಡ್ಕ ನಿವಾಸಿ ಗಜನೀಶ್ವರಿ (24) ಕೆ. ಎಂದು ಹೇಳಲಾಗಿದ್ದು, ಈ ಸಂಬಂಧ ಗುರುತು ಪತ್ತೆಗಾಗಿ ಆಕೆಯ ಮನೆಯವರಿಗೆ ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಗಜನೀಶ್ವರಿ ಉಳ್ಳಾಲ ಸೇತುವೆಯಲ್ಲಿ ನಿನ್ನೆ ರಾತ್ರಿ ನೇತ್ರಾವತಿ ನದಿಗೆ ಹಾರಿ ನಾಪತ್ತೆಯಾಗಿದ್ದರು.
ಈಕೆ ಸೇತುವೆ ಬಳಿ ತನ್ನ ಬ್ಯಾಗ್, ಮೊಬೈಲ್ ಫೋನ್, ಐಡಿ ಕಾರ್ಡ್ ಇಟ್ಟು ಹಾರಿದ್ದರು. ದಾರಿಹೋಕರು ಈಕೆ ನದಿಗೆ ಹಾರಿದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಂಕನಾಡಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಇಂದು ಬೆಳಗ್ಗೆ ಗಜನೀಶ್ವರಿಯವರ ಮೃತದೇಹ ಸೋಮೇಶ್ವರ ಬಳಿ ಪತ್ತೆಯಾಗಿದೆ.