ಬಂಟ್ವಾಳ: 200ರಷ್ಟು ಮನೆಗಳು ಜಲಾವೃತ, 1000ಕ್ಕೂ ಅಧಿಕ ಮಂದಿ ಅತಂತ್ರ

Update: 2019-08-10 05:57 GMT

# ಜನಾರ್ದನ ಪೂಜಾರಿ ಮನೆ, ಬಂಟರ ಭವನಕ್ಕೆ ನುಗ್ಗಿದ ನೆರೆ

ಬಂಟ್ವಾಳ, ಆ.10: ತಾಲೂಕಿನಾದ್ಯಂತ ಶನಿವಾರವೂ ಬೆಳಗ್ಗೆಯೂ ಭಾರೀ ಗಾಳಿ- ಮಳೆ ಮುಂದುವರಿದಿದ್ದು, ನೇತ್ರಾವತಿ ನೀರಿನ ಮಟ್ಟ ತೀವ್ರ ಹೆಚ್ಚಾಗಿದ್ದು, ಅಪಾಯಕಾರಿಯಾಗಿ ಹರಿಯುತ್ತಿದೆ.

ಕಳೆದ ರಾತ್ರಿಯಿಂದ ಸುರಿದ ಮಳೆಗೆ ಬಂಟ್ವಾಳದಲ್ಲಿ ಹಲವಾರು ಮನೆಗಳು ಜಲಾವೃತಗೊಂಡಿದೆ. ನಿನ್ನೆ 54 ಅಂಗಡಿ, ಮುಂಗಟ್ಟುಗಳು ಜಲಾವೃತಗೊಂಡಿದ್ದರೆ, ಇಂದು ಬೆಳಗ್ಗೆ ಈ ಸಂಖ್ಯೆ 200 ದಾಟಿದೆ. 1000ಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ. ಈ ನಡುವೆ ತಾಲೂಕಿನಲ್ಲಿ ಐ.ಬಿ. ಮತ್ತು ಪಾಣೆಮಂಗಳೂರಿನ ಶಾರದಾ ಪ್ರೌಢಶಾಲೆಯಲ್ಲಿ ತೆರೆದಿರುವ ಗಂಜಿ ಕೇಂದ್ರದಲ್ಲಿ ಸಂತ್ರಸ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಜನಾರ್ದನ ಪೂಜಾರಿ ಮನೆ ಜಲಾವೃತ
ನೇತ್ರಾವತಿ ಪ್ರವಾಹದಿಂದ ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರ ಮನೆಗೂ ನೆರೆ ನುಗ್ಗಿದೆ. ಇದರಿಂದ ಭಂಡಾರಿಬೆಟ್ಟುವಿನಲ್ಲಿರುವ ಪೂಜಾರಿಯ ಮನೆ ಜಲಾವೃತವಾಗಿದ್ದು, ಮನೆಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ಬಂಟ್ವಾಳ ಬಂಟರ ಭವನಕ್ಕೂ ನೆರೆ ನೀರು ಪ್ರವೇಶಿಸಿದೆ. ಭವನದ ತಳ ಅಂತಸ್ತಿಗೆ ನೀರು ನುಗ್ಗಿದ್ದು, ಪಾರ್ಕಿಂಗ್ ಏರಿಯಾ ಸಂಪೂರ್ಣ ಜಲಾವೃತಗೊಂಡಿದೆ. ಇಲ್ಲಿನ ಡೈಮೆಂಡ್ ಸ್ಕೂಲ್, ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರಕ್ಕೂ ನೀರು ನುಗ್ಗಿದೆ.

ತಲಪಾಡಿಯಲ್ಲಿ 17 ಮನೆಗಳು ಜಲಾವೃತಗೊಂಡಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತಲಪಾಡಿಯಲ್ಲಿರುವ ಸರ್ವೀಸ್ ರಸ್ತೆ ಜಲಾವೃತಗೊಂಡಿದ್ದು, ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ನದಿಯ ಅಪಾಯದ ಮಟ್ಟ 8.5 ಆಗಿದ್ದು, ಶುಕ್ರವಾರ ತಡರಾತ್ರಿ ವೇಳೆಗೆ ನೇತ್ರಾವತಿ ನದಿ ನೀರಿನ ಮಟ್ಟ 11.7 ಮೀಟರ್ ಇತ್ತು. ಮುಂಜಾನೆ 11.6 ಮೀ.ನಲ್ಲಿ ಹರಿಯುತ್ತಿದೆ. ಬೆಳಗ್ಗೆಯಿಂದ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ನೀರು ಮತ್ತೆ ಏರಿಕೆಯಾಗುವ ಸಾಧ್ಯತೆಯಿದ್ದು, ತೀರವಾಸಿಗಳು ತೀವ್ರ ಆತಂಕಿತರಾಗಿದ್ದಾರೆ.

ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಬಂಟ್ವಾಳದ ರಸ್ತೆ ಸಂಚಾರ ರದ್ದುಗೊಳಿಸಲಾಗಿದೆ. ಬಂಟ್ವಾಳ, ಬೆಳ್ತಂಗಡಿ ಸಂಚಾರ ಸ್ಥಗಿತಗೊಂಡಿದೆ. ಮಾರ್ನಬೈಲು, ಪಣೋಲಿಬೈಲು ಮದ್ಯೆ ಇರುವ ರಸ್ತೆಯಲ್ಲಿ ನೀರಿ‌ನಂತಿದೆ. ವಾಹನಗಳು ದಾಟುವಂತಿಲ್ಲ.

ಮಾಣಿ, ಉಪ್ಪಿನಂಗಡಿ ಮಾಣಿ ರಸ್ತೆ ಬಂದ್. ಉಪ್ಪಿನಂಗಡಿಗೆ‌ ಮಾಣಿ,‌ ಪುತ್ತೂರು ಬೆಳ್ತಂಗಡಿ ‌ಕಡೆಯಿಂದ ವಾಹನ ಸಂಚಾರ‌ ನಿಷೇಧಿಸಲಾಗಿದೆ.

ಶುಕ್ರವಾರ ರಾತ್ರಿಯಿಂದೀಚೆಗೆ ಬಂಟ್ವಾಳ ಪೇಟೆಯಿಡೀ ಜಲಾವೃತಗೊಂಡಿದೆ. ತಾಲೂಕಿನ ಹಲವು ಭಾಗಗಳು ಸಂಪರ್ಕ ಕಡಿತಗೊಂಡಿವೆ. ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್, ತಹಶೀಲ್ದಾರ್ ರಶ್ಮಿ ಎಸ್.ಆರ್., ಸಹಾಯಕ ಕಮಿಷನರ್ ರವಿಚಂದ್ರ ನಾಯಕ್, ಬಂಟ್ವಾಳ ತಾಲೂಕು ಕಚೇರಿ ಸಿಬ್ಬಂದಿ, ಪುರಸಭೆ ಸಿಬ್ಬಂದಿ, ಎನ್.ಡಿ.ಆರ್.ಎಫ್., ಕೋಸ್ಟ್ ಗಾರ್ಡ್, ಹೋಂ ಗಾರ್ಡ್ ಸಿಬ್ಬಂದಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಅಪಾಯದ ಸ್ಥಿತಿಯಲ್ಲಿರುವವರನ್ನು ರಕ್ಷಿಸಿದ್ದಾರೆ.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರಾತ್ರಿಯಿಡೀ ಪರಿಸರವಿಡೀ ಸಂಚರಿಸಿದ್ದಾರೆ. ಪಾಣೆಮಂಗಳೂರು ಶಾರದಾ ಪ್ರೌಢಶಾಲೆ, ಬಂಟ್ವಾಳ ಐಬಿಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದ್ದು, ಅಲ್ಲಿ ಸಂತ್ರಸ್ತರಿದ್ದಾರೆ. ಉಳಿದ ಬಾಧಿತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗಿದೆ.

ಫರಂಗಿಪೇಟೆ, ಬ್ರಹ್ಮರಕೂಟ್ಲು, ತಲಪಾಡಿ, ಅಜಿಲಮೊಗರು, ಬಂಟ್ವಾಳದ ಬಹುತೇಕ ಎಲ್ಲ ತೀರಪ್ರದೇಶಗಳು ಜಲಬಾಧಿತವಾಗಿವೆ. ಯಾರಾದರೂ ಸಿಕ್ಕಿಹಾಕಿಕೊಂಡಿದ್ದು, ಸಹಾಯ ಬಯಸಿದರೆ, 08255-232120 (ಕಂಟ್ರೋಲ್ ರೂಂ)ಗೆ ಕರೆ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಣೆಕಟ್ಟಿನಿಂದ ಗಂಟೆಗೊಮ್ಮೆ ಸೈರನ್ ಭಾರಿಸಿ ನೀರು ಬಿಡಲಾಗುತ್ತಿದೆ. ಶಂಭೂರು ಎಎಂಆರ್‌ನ 26 ಗೇಟುಗಳಲ್ಲಿ ನೇತ್ರಾವತಿ ನದಿ ನೀರು ಹೊರಬಿಡಲಾಗಿದ್ದು, ತುಂಬೆಯಲ್ಲಿ 8.5 ಮೀ.ಎತ್ತರದಲ್ಲಿ ನೀರು ಸಂಗ್ರಹಗೊಂಡು ಹರಿಯುತಿದೆ. ಕಳೆದ ವರ್ಷ ಈ ಸಮಯದಲ್ಲಿ ನೇತ್ರಾವತಿ ನೀರಿನ ಮಟ್ಟ 10.7 ಇತ್ತು. ಇದೇ ಮೊದಲ ಬಾರಿಗೆ ಈ ರೀತಿ ಅಪಾಯ ಮಟ್ಟದಲ್ಲಿ ನೇತ್ರಾವತಿ ಭೋರ್ಗರೆಯುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News