ನೀರು ಪಾಲಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

Update: 2019-08-11 12:36 GMT

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಅಂದ್ರಟ್ಟ ಎಂಬಲ್ಲಿ ಶನಿವಾರ ಕಾಲು ಸಂಕ ದಾಟುತ್ತಿದ್ದ ವೇಳೆಯಲ್ಲಿ ಆಕಸ್ಮಿಕವಾಗಿ ಆಯತಪ್ಪಿ ನೀರು ಪಾಲಾಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಇಂದು ಪತ್ತೆಯಾಗಿದೆ. 

ಚಿಕ್ಕಮುಡ್ನೂರು ಗ್ರಾಮದ ಅಂದ್ರಟ ಎಂಬಲ್ಲಿ ಕಳೆದ ಹಲವು ವರ್ಷಗಳಿಂದ ವಾಸ್ತವ್ಯವಿದ್ದ, ಮೂಲತಃ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ರೆಂಜ ನಿವಾಸಿ ಜನಾರ್ಧನ ಯಾನೆ ಜನ್ನ (30) ನೀರು ಪಾಲಾಗಿದ್ದರು. ಕೂಲಿ ಕಾರ್ಮಿಕರಾಗಿದ್ದ ಅವರು ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿತ್ತು. ಇವರ ಮೃತದೇಹ ಬೆದ್ರಾಳ ಹೊಳೆಯಲ್ಲಿನ ಬೀರಿಗ ಎಂಬಲ್ಲಿ ಹೊಳೆ ಬದಿಯಲ್ಲಿ ಪತ್ತೆಯಾಗಿದೆ. 

ನಾಪತ್ತೆಯಾದ ಅವರ ಪತ್ತೆಗಾಗಿ ಪುತ್ತೂರು ನಗರ ಪೊಲೀಸರು ಹಾಗೂ ಅಗ್ನಿ ಶಾಮಕ ದಳದವರು ಹೊಳೆಯಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸಿದ್ದರು. ಘಟನಾ ಸ್ಥಳಕ್ಕೆ ಪುತ್ತೂರು ಉಪವಿಭಾಗಾಧಿಕಾರಿ ಹೆಚ್.ಕೆ. ಕೃಷ್ಣಮೂರ್ತಿ, ನಗರ ಠಾಣೆಯ ಎಸ್‍ಐ ತಿಮ್ಮಪ್ಪ ನಾಯ್ಕ್  ಭೇಟಿ ನೀಡಿದ್ದರು. ಶನಿವಾರ ತಡ ರಾತ್ರಿಯ ತನಕ ಶೋಧ ಕಾರ್ಯ ನಡೆಸಲಾಗಿತ್ತು. ಬಳಿಕ ಭಾನುವಾರ ಬೆಳಗ್ಗೆ ಬೆದ್ರಾಳ ಹೊಳೆಯು ಇನ್ನೊಂದು ಹೊಳೆಗೆ ಸೇರ್ಪಡೆಯಾಗುವ ಸ್ಥಳದಲ್ಲಿ ಹುಡುಕಾಟ ನಡೆಸಿದಾಗ ಬೀರಿಗ ಸಮೀಪದಲ್ಲಿ ಜನಾರ್ಧನ ಅವರ ಮೃತದೇಹ ಪತ್ತೆಯಾಗಿದೆ. 

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಬಿಟ್ಟು ಕೊಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News