ಕಾಶ್ಮೀರ ಸದ್ಯಕ್ಕೆ ಆಕ್ರೋಶ, ಭಯ ತುಂಬಿದ ‘ಜೀವಂತ ನರಕ’: ‘ನ್ಯೂಯಾರ್ಕ್ ಟೈಮ್ಸ್’ ವರದಿ
ಹೊಸದಿಲ್ಲಿ, ಆ.13: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕೇಂದ್ರ ಸರಕಾರದ ಕ್ರಮ ಹಾಗೂ ಕಾಶ್ಮೀರದ ಸದ್ಯದ ಸ್ಥಿತಿಗತಿಗಳ ಬಗ್ಗೆ ವಿದೇಶಿ ಮಾಧ್ಯಮಗಳು ಸಾಕಷ್ಟು ವರದಿಗಳನ್ನು ಪ್ರಕಟಿಸಿದ್ದು, ಕಾಶ್ಮೀರದಲ್ಲಿನ ಪರಿಸ್ಥಿತಿ ‘ಜೀವಂತ ನರಕ' ಎಂದು ‘ದಿ ನ್ಯೂಯಾರ್ಕ್ ಟೈಮ್ಸ್’ ಬಣ್ಣಿಸಿದೆ.
“ಇನ್ಸೈಡ್ ಕಾಶ್ಮೀರ್-ಕಟ್ ಆಫ್ ಫ್ರಮ್ ದಿ ವರ್ಲ್ಡ್'' ಎಂಬ ತನ್ನ ವರದಿಯಲ್ಲಿ ನ್ಯೂಯಾರ್ಕ್ ಟೈಮ್ಸ್, “ಆಕ್ರೋಶ ಮತ್ತು ಭಯ ತುಂಬಿದ ಜೀವಂತ ನರಕ, ಕಾಶ್ಮೀರಿಗಳು ಹಾಗೂ ಭಾರತೀಯ ಭದ್ರತಾ ಪಡೆಗಳ ನಡುವಿನ ಸಂಘರ್ಷಕ್ಕೆ ಕಾರಣವಾದ ಬೃಹತ್ ಪ್ರತಿಭಟನೆಯ ಮರು ದಿನ ಅಲ್ಲಿ ಆಕ್ರೋಶ ಮಡುಗಟ್ಟಿದೆ'' ಎಂದು ಶನಿವಾರದ ವರದಿಯಲ್ಲಿ ಬರೆದಿದೆ.
``ಹಲವು ಕಾಶ್ಮೀರಿಗಳು ಯಾವತ್ತೂ ಮೋದಿಯ ಮೇಲೆ ವಿಶ್ವಾಸವಿರಿಸಿರಲಿಲ್ಲ. ಅವರ ಸರಕಾರ ಹಿಂದು ರಾಷ್ಟ್ರೀಯತಾವಾದಿ ವಿಚಾರಧಾರೆಗಳನ್ನು ಹೊಂದಿದೆ. ಮೋದಿ ಮೇ ತಿಂಗಳಲ್ಲಿ ಅಭೂತಪೂರ್ವ ವಿಜಯ ಸಾಧಿಸಿದರೂ ಭಾರತದಾದ್ಯಂತ ಅಲ್ಪಸಂಖ್ಯಾತ ಮುಸ್ಲಿಮರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಕಾಶ್ಮೀರದ ಸ್ವಾಯತ್ತತೆಯನ್ನು ಅಂತ್ಯಗೊಳಿಸುವುದು ಕಾಶ್ಮೀರಿಗಳಿಗೆ ಇಷ್ಟವಾಗದು ಎಂದು ಮೋದಿಗೆ ತಿಳಿದಿದೆ'' ಎಂದೂ ವರದಿಯಲ್ಲಿ ವಿವರಿಸಲಾಗಿದೆ.
‘ದಿ ವಾಲ್ ಸ್ಟ್ರೀಟ್ ಜರ್ನಲ್’ ತನ್ನ ವರದಿ ‘ಪಾಕಿಸ್ತಾನ್ಸ್ ನ್ಯೂ ಪ್ಲೈಟ್ ಇನ್ ಕಾಶ್ಮೀರ್ : ವಾಟ್ ಟು ಡೂ ಅಬೌಟ್ ದಿ ಜಿಹಾದಿಸ್ಟ್ಸ್’ನಲ್ಲಿ , “ಉಗ್ರವಾದಿಗಳನ್ನು ಮಟ್ಟ ಹಾಕಲು ಅಥವಾ ಆರ್ಥಿಕ ನಿರ್ಬಂಧ ಎದುರಿಸುವಂತೆ ಇಸ್ಲಾಮಾಬಾದ್ ಅಂತಾರಾಷ್ಟ್ರೀಯ ಒತ್ತಡ ಎದುರಿಸುತ್ತಿದೆ. ಈ ಉಗ್ರ ಸಂಘಟನೆಗಳಿಂದ ನಡೆಯಬಹುದಾದ ದಾಳಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷಕ್ಕೆ ದಾರಿ ಮಾಡಿಕೊಡಬಹುದು” ಎಂದು ವರದಿ ಹೇಳಿದೆ.