ಆ.23: ಕುಂಪಲದಲ್ಲಿ ಶ್ರಿಕೃಷ್ಣ ಜನ್ಮಾಷ್ಟಮಿ
ಮಂಗಳೂರು, ಆ.16: : ಸೋಮೇಶ್ವರ ಗ್ರಾಮದ ಕುಂಪಲದ ಶ್ರೀ ಬಾಲಕೃಷ್ಣ ಮಂದಿರದಲ್ಲಿ 22ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆ.23ರಂದು ನಡೆಯಲಿದೆ ಎಂದು ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು ಬೆಳಗ್ಗೆ ಸ್ಥಳಶುದ್ಧಿ, ಗಣಹೋಮ, ಮಂಗಳ ಕಲಶದ ಮೆರವಣಿಗೆ, ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಮಧ್ಯಾಹ್ನ ಮಹಾಪೂಜೆ ನಡೆಯಲಿದೆ. ಸಂಜೆ 5 ಗಂಟೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉಳ್ಳಾಲ ಚಿರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ ಉದ್ಘಾಟಿಸಲಿದ್ದಾರೆ. ರಾತ್ರಿ 7 ಗಂಟೆಗೆ ಶ್ರೀ ಕೃಷ್ಣ ದೇವರ ರಜತ ಮಂಟಪದ ಪೀಠದಲ್ಲಿ ಶ್ರೀಕೃಷ್ಣನ ಶೋಭಾಯಾತ್ರೆ ಕುಂಪಲ ಮೂರು ಕಟ್ಟೆಯಿಂದ ಚೇತನ ನಗರದವರೆಗೆ ನಡೆಯಲಿದೆ ಎಂದರು.
ಉತ್ಸವದ ಪ್ರಯುಕ್ತ ಶಾಲಾ ಮಕ್ಕಳಿಗೆ ಶ್ರೀ ಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆ, ರಂಗವಲ್ಲಿ ಸ್ಪರ್ಧೆ, ಸಂಗೀತ ಸ್ಪರ್ಧೆ, ಪುಟಾಣಿಗಳಿಗೆ ಮುದ್ದುಕೃಷ್ಣ ವೇಷ ಸ್ಪರ್ಧೆ ನಡೆಯಲಿದೆ. ಕೃಷ್ಣನ ಶೋಭಾಯಾತ್ರೆಯ ಮರದ ಮಂಟಪ ಶಿಥಿಲಾವಸ್ಥೆಗೆ ತಲುಪಿರುವುದರಿಂದ 15 ಲಕ್ಷ ರೂ. ವೆಚ್ಚದಲ್ಲಿ ಬೆಳ್ಳಿಯ ಮಂಟಪ, ಪೀಠ ಮತ್ತು ಪ್ರತಿಮೆಯನ್ನು ನಿರ್ಮಿಸಲಾಗಿದೆ. ಅದರ ಸಮರ್ಪಣಾ ಶೋಭಾಯಾತ್ರೆ ಆ.19ರಂದು ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಸತೀಶ್ ಕುಂಪಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಂದಿರದ ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಂಪಲ, ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಕುಂಪಲ, ಪ್ರಧಾನ ಸಂಚಾಲಕ ಗಣೇಶ್ ಶಿಲ್ಪಿ, ಉಪಾಧ್ಯಕ್ಷ ಚಂದ್ರಶೇಖರ್ ಬಿ.ಜೆ. ಉಪಸ್ಥಿತರಿದ್ದರು.