ಸಾರ್ವಜನಿಕ ಅಭಿಪ್ರಾಯದಂತೆ ಬಸ್ ನಿಲ್ದಾಣ ನಿರ್ಮಾಣ: ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್
ಮಂಗಳೂರು, ಆ.17: ಬಸ್ ನಿಲ್ದಾಣವನ್ನು ಜನತೆಯ ಅನೂಕೂಲಕ್ಕೆ ತಕ್ಕಂತೆ, ಸಾರ್ವಜನಿಕರ ಅಭಿಪ್ರಾಯ ಪಡೆದು ಸುಸಜ್ಜಿತವಾಗಿ ನಿರ್ಮಾಣ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ನಲ್ಲಿ ಶನಿವಾರ ನಡೆದ ಸ್ಮಾರ್ಟ್ ಸಿಟಿ ಯೋಜನೆಯ 7ನೇ ನಗರ ಮಟ್ಟದ ಸಲಹಾ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ 17 ಬಸ್ ನಿಲ್ದಾಣಗಳ ಕಾಮಗಾರಿ ಪೂರ್ಣಗೊಂಡಿದ್ದು, ಸಾರ್ವಜನಿಕರಿಗೆ ಬಸ್ ನಿಲ್ದಾಣಗಳು ಹೆಚ್ಚಾಗಿ ಮಳೆಗಾಲದ ಸಮಯದಲ್ಲಿ ಉಪಯೋಗವಾಗುವುದರಿಂದ ಇನ್ನು ಮುಂದಿನ ಬಸ್ ನಿಲ್ದಾಣದ ಕಾಮಗಾರಿಯಲ್ಲಿ ಜನತೆಗೆ ಸಹಕಾರವಾಗುವಂತೆ ವಿನ್ಯಾಸ ರೂಪಿಸಿ, ನಿರ್ಮಾಣ ಮಾಡಬೇಕು. ಅತಿಹೆಚ್ಚು ಜನರು ತಂಗುವ ಬಸ್ ನಿಲ್ದಾಣಗಳಲ್ಲಿ ಜನರ ಅಭಿಪ್ರಾಯ ಪಡೆದು ನಿಲ್ದಾಣಕ್ಕೆ ಜೋಡಣೆಯಾಗಿ ಶೌಚಾಲಯ ನಿರ್ಮಿಸಬೇಕು ಎಂದು ಹೇಳಿದರು.
ಕೇಂದ್ರ ಮಾರುಕಟ್ಟೆಯಲ್ಲಿ ಸುಮಾರು 590 ಅಂಗಡಿ ಮುಂಗಟ್ಟುಗಳಿದ್ದು, ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಾತಾವರಣ ನಿರ್ಮಿಸಬೇಕು ಮತ್ತು ಸ್ವಚ್ಛತೆಯನ್ನು ಕಾಪಾಡಬೇಕು. ನೂತನ ಮಾರುಕಟ್ಟೆ ನಿರ್ಮಾಣದೊಂದಿಗೆ ಜನತೆಗೆ ಹೊಸ ಅನುಭವ ಕಲ್ಪಿಸಿಕೊಡಬೇಕು ಎಂದು ಹೇಳಿದರು.
ಅಭಿವೃದ್ಧಿ ಕಾಮಗಾರಿ ಪರಿಶೀಲನೆಗೆ ಕೈಗೊಂಡ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಮಹಾನಗರಪಾಲಿಕೆ, ಲೋಕೋಪಯೋಗಿ ಇಲಾಖೆಗಳನ್ನೊಳಗೊಂಡಂತೆ ಹಲವು ಇಲಾಖೆಗಳು ವಿವಿಧ ಏಜೆನ್ಸಿ ಮುಖಾಂತರ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರುತ್ತಿವೆ. ಸ್ಥಳೀಯ ಜನರ ಅಗತ್ಯಗಳನ್ನು ಗುರುತಿಸಿ ಕಾಮಗಾರಿಗಳಿಗೆ ಮಾನದಂಡ ನಿಗದಿಪಡಿಸಬೇಕು. ಯಾರ ಮೂಲಕ ಕಾಮಗಾರಿ ನಡೆಸುತ್ತಿರೋ ಅವರನ್ನು ನಿಯಂತ್ರಣದಲ್ಲಿಟ್ಟುಕೊಂಡು ಯೋಜನಾಬದ್ಧವಾಗಿ ಯೋಜನೆಗಳು ಅನುಷ್ಠಾನಕ್ಕೆ ಬರಬೇಕು ಎಂದು ಸಲಹೆ ನೀಡಿದರು.
ಪಡೀಲ್ ಮತ್ತು ಜೆಪ್ಪು ಪ್ರದೇಶದ ರೈಲ್ವೆ ಅಂಡರ್ ಪಾಸಿಂಗ್ನಲ್ಲಿ ನೀರು ನಿಂತು ಸಮಸ್ಯೆ ಎದುರಾಗಿತ್ತು. ಇನ್ನು ಮುಂದಕ್ಕೆ ರೈಲ್ವೆ ಅಂಡರ್ ಪಾಸಿಂಗ್ ಕಾಮಗಾರಿ ನಡೆಸುವಾಗ ಇಂತಹ ತೊಂದರೆ ಮರುಕಳಿಸದಂತೆ ಹೆಚ್ಚಿನ ನಿಗವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ಕೇಂದ್ರ ಮಾರುಕಟ್ಟೆಯ ಅಂಗಡಿ-ಮುಂಗಟ್ಟಿನ ಪಟ್ಟಿ ಮಂಗಳೂರು ಮಹಾನಗರ ಪಾಲಿಕೆ ಸಹಾಯಕ ಆಯುಕ್ತರಿಂದ ಪಡೆದು, ಅದರ ಪ್ರಕಾರ ಮಾರುಕಟ್ಟೆಯ ಕಾಮಗಾರಿಯನ್ನು ಪ್ರಾರಂಭಿಸಬೇಕು. ಎರಡಕ್ಕಿಂತ ಹೆಚ್ಚು ಅಂಗಡಿ ಹೊಂದಿರುವವರನ್ನು ಅಲ್ಲಿಂದ ತೆರವುಗೊಳಿಸಬೇಕು’ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್, ರಾಹುಲ್ ಸಿಂಧ್ಯಾ ಮತ್ತು ಸಂಬಂಧಪಟ್ಟ ಇಲಾಖಾಧಿ ಕಾರಿಗಳು ಉಪಸ್ಥಿತರಿದ್ದರು.