ಬರ ಪೀಡಿತ ತಾಲ್ಲೂಕುಗಳಲ್ಲಿ ಗೋಶಾಲೆ ಆರಂಭ
ಮಂಗಳೂರು,ಆ.19:ದ.ಕ. ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು, ಪುತ್ತೂರು, ಸುಳ್ಯ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದ್ದು, ಇಲ್ಲಿ ಗೋಶಾಲೆ ತೆರೆಯಲು ಹೈಕೋರ್ಟ್ ಆದೇಶಿಸಿದೆ. ಅದರಂತೆ ಪ್ರತಿ ತಾಲೂಕಿಗೆ ಒಂದರಂತೆ ಗೋಶಾಲೆಯನ್ನು ತೆರೆಯಲಾಗಿರುತ್ತದೆ. ಈ ಗೋಶಾಲೆಗಳಿಗೆ ಬರುವ ಜಾನುವಾರುಗಳಿಗೆ ಪ್ರತಿ ದಿನ 5 ಕೆಜಿ ಒಣ ಮೇವು ಅಥವಾ 18 ಕೆಜಿ ಹಸಿರು ಮೇವು ಮತ್ತು 1 ಕೆ.ಜಿ. ಪಶು ಆಹಾರವನ್ನು ನೀಡಲಾಗುವುದು.
ಬಂಟ್ವಾಳ ತಾಲೂಕಿಮನ ಪಜೀರ್ನ ಗೋವನಿತಾಶ್ರಯ ಟ್ರಸ್ಟ್ (ರಿ) ಗೋಶಾಲೆ, ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಸೌತಡ್ಕ ಶ್ರೀಮಹಾಗಣಪತಿ ಕ್ಷೇತ್ರ ಗೋಶಾಲೆ, ಮಂಗಳೂರು ತಾಲೂಕಿನ ಕೋಟೆಕಾರ್ ಮಡ್ಯಾರ್ನ ಪರಾಶಕ್ತಿ ಟ್ರಸ್ಟ್ನ ಶ್ರೀ ಪರಾಶಕ್ತಿ ದೇಗುಲ ಸಮುಚ್ಚಯ, ಪುತ್ತೂರು ತಾಲೂಕಿನ ಸವಣೂರು, ಸುಳ್ಯ ತಾಲೂಕಿನ ಪಂಜ ಪಾಣೆಮಜಲು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಂತ್ರಸ್ತ ರೈತರು ಗೋಶಾಲೆಗಳ ಸೌಲಭ್ಯವನ್ನು ಪಡೆಯಬಹುದು ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರ (ಆಡಳಿತ) ಪ್ರಕಟನೆ ತಿಳಿಸಿದೆ.