ಉಡುಪಿ ಪತ್ರಕರ್ತರ ಸಂಘದಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ

Update: 2019-08-19 14:51 GMT

ಉಡುಪಿ, ಆ.19: ತಂತ್ರಜ್ಞಾನದ ಬೆಳವಣಿಗೆಯಿಂದ ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಒಂದೇ ನಿಮಿಷದಲ್ಲಿ ಚಿತ್ರಗಳು ನಮಗೆ ಲಭಿಸುವಂತಾಗಿದೆ ಎಂದು ಉಡುಪಿಯ ಹಿರಿಯ ಛಾಯಾಗ್ರಾಹಕ ಜಯಕರ ಸುವರ್ಣ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪ್ರೆಸ್ ಕ್ಲಬ್ ಆಶ್ರಯದಲ್ಲಿ ಸೋಮವಾರ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಂದಿನ ದಿನಗಳ ಕಪ್ಪುಬಿಳುಪಿನ ಛಾಯಾಗ್ರಹಣ ಬಹಳ ಕಷ್ಟದ ಕೆಲಸ ವಾಗಿದ್ದರೆ ಇಂದಿನ ದಿನಗಳಲ್ಲಿ ತಂತ್ರಜ್ಞಾನದ ಬದಲಾವಣೆಯಲ್ಲಿ ಛಾಯಾ ಗ್ರಹಣ ಕ್ಷೇತ್ರ ಸಾಕಷ್ಟು ಸುಧಾರಣೆ ಕಂಡಿದೆ. ಛಾಯಾಗ್ರಹಣ ಮತ್ತು ಪತ್ರಿಕೋದ್ಯಮಕ್ಕೆ ಅನನ್ಯ ಸಂಬಂಧವಿದ್ದು ಪತ್ರಿಕಾ ಛಾಯಾಗ್ರಾಹಕರು ಸಮಾಜದ ಅವಿಭಾಜ್ಯ ಅಂಗ ಎಂದರು.

ಇದೇ ವೇಳೆ ಪತ್ರಿಕಾ ಛಾಯಾಗ್ರಾಹಕ ಹಾಗೂ ವರದಿಗಾರರುಗಳಾದ ದಿವಾಕರ ಹಿರಿಯಡ್ಕ, ಪ್ರಸನ್ನ ಕೊಡವೂರು, ಸುಭಾಶ್ಚಂದ್ರ ವಾಗ್ಳೆ, ನಝೀರ್ ಪೊಲ್ಯ, ಚೇತನ್ ಮಟಪಾಡಿ, ಸೂರಜ್ ಸಾಲಿಯಾನ್, ಪಲ್ಲವಿ ಸಂತೋಷ್ ಅವರು ತಾವು ಸೆರೆ ಹಿಡಿದ ಚಿತ್ರಗಳ ಪ್ರದರ್ಶನ ನಡೆಸಿ, ತಮ್ಮ ವೃತ್ತಿಜೀವನದ ಅನುಭವಗಳನ್ನು ಹಂಚಿಕೊಂಡರು.

ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ ಪ್ರಸಾದ ಪಾಂಡೇಲು ವಹಿಸಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು, ಕಾರ್ಯಕಾರಿ ಸಮಿತಿ ಸದಸ್ಯ ಪುಂಡಲೀಕ ಮರಾಠೆ, ಪ್ರೆಸ್ ಕ್ಲಬ್ ಸಹಸಂಚಾಲಕ ಸುಭಾಶ್ಚಂದ್ರ ವಾಗ್ಳೆ, ಕೋಶಾಧಿಕಾರಿ ದಿವಾಕರ ಹಿರಿಯಡ್ಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News