ಬಂಟ್ವಾಳದ 498 ನೆರೆ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಣೆ

Update: 2019-08-19 17:34 GMT

ಬಂಟ್ವಾಳ, ಆ. 19: ಬಂಟ್ವಾಳ ತಾಲೂಕಿನ ಬಿ.ಮೂಡ, ಪಾಣೆಮಂಗಳೂರು, ಬಿ.ಕಸಬ, ಸಜಿಪಮೂಡ ಮತ್ತು ಸಜಿಪಮುನ್ನೂರು ಗ್ರಾಮಗಳ ನೆರೆ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಣಾ ಕಾರ್ಯಕ್ರಮ ಸೋಮವಾರ ಬಿ.ಸಿ.ರೋಡಿನ ರೋಟರಿಕ್ಲಬ್‍ನಲ್ಲಿ ನಡೆಯಿತು.

ಶಾಸಕ ರಾಜೇಶ್ ನಾಯ್ಕ್ ನೆರೆ ಸಂತ್ರಸ್ತರಿಗೆ ಚೆಕ್ ವಿತರಿಸಿ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೆರೆ ಪೀಡಿತ ಜಿಲ್ಲೆಗಳಿಗೆ ಸಂಚರಿಸಿ ಸಮೀಕ್ಷೆ ನಡೆಸಿ ಪರಿಹಾರದ ಮೊತ್ತವನ್ನು ವಿತರಿಸುವ ಕಾರ್ಯ ಮಾಡಿದ್ದಾರೆ. ಇಷ್ಟು ತ್ವರಿತವಾಗಿ ಸಂತ್ರಸ್ತರಿಗೆ ಪರಿಹಾರ ನೀಡಿರುವುದು ಇದೇ ಮೊದಲು. ಇದಕ್ಕಾಗಿ ಮುಖ್ಯಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಮುಖ್ಯಮಂತ್ರಿ ಅವರು ತಮ್ಮ ಮನವಿಗೆ ಸ್ಪಂದಿಸಿ ಈ ಮೊದಲಿದ್ದ ಪರಿಹಾರದ ಮೊತ್ತವನ್ನು 5 ಸಾವಿರದಿಂದ 10ಸಾವಿರ ರೂ.ಗೆ ಹಾಗೂ ತೀವ್ರ ಹಾನಿಯ 95 ಸಾವಿರ ರೂ.ದಿಂದ 5ಲಕ್ಷ ರೂ.ವರೆಗೂ ಹೆಚ್ಚಿಸಿ ಪರಿಹಾರ ಕಾರ್ಯಕ್ಕೆ ಮುಂದಾಗಿದೆ. ಇಲ್ಲಿಯೂ ಕೂಡಾ 10 ಸಾವಿರ ರೂ. ಪರಿಹಾರದ ಚೆಕ್ ಅನ್ನು ನೀಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಮಣಿನಾಲ್ಕೂರು, ನಾವೂರು ಗ್ರಾಮದ 57 ಮಂದಿ, ಅಮ್ಟಾಡಿ ಗ್ರಾಮದ 20 ಮಂದಿ ಹಾಗೂ ಬಂಟ್ವಾಳ ತಾಲೂಕಿನ ಬಿ.ಮೂಡ, ಪಾಣೆಮಂಗಳೂರು, ಬಿ.ಕಸಬ, ಸಜಿಪಮೂಡ ಮತ್ತು ಸಜಿಪಮುನ್ನೂರು ಗ್ರಾಮಗಳ 443 ಸಂತ್ರಸ್ತರಿಗೆ ಸಹಿತ ಸುಮಾರು 500ಕ್ಕೂ ಹೆಚ್ಚಿನ ನೆರೆ ಸಂತ್ರಸ್ತರಿಗೆ ಒಟ್ಟು 50 ಲಕ್ಷ ರೂ. ಪರಿಹಾರದ ಚೆಕ್ ಅನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ರಶ್ಮಿ ಎಸ್.ಆರ್., ಪುರಸಭಾ ಸದಸ್ಯರಾದ ಗೋವಿಂದ ಪ್ರಭು, ಮುನೀಶ್ ಅಲಿ, ಸಿದ್ದೀಕ್ ಗುಡ್ಡೆಯಂಗಡಿ, ಮುಹಮ್ಮದ್ ನಂದರಬೆಟ್ಟು, ಸಿಬ್ಬಂದಿಗಳಾದ ಸದಾಶಿವ ಕೈಕಂಬ, ನವೀನ, ಶಿವಾನಂದ ಹಾಜರಿದ್ದರು. ಉಪತಹಶೀಲ್ದಾ ರಾಮ ಕಾಟಿಪಳ್ಳ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News