ಮಳೆ ನಡುವೆ ಸರಳ, ಸಾಂಪ್ರದಾಯಿಕ ಕೃಷ್ಣ ಜನ್ಮಾಷ್ಟಮಿಗೆ ಉಡುಪಿ ಸಜ್ಜು

Update: 2019-08-22 16:19 GMT

ಉಡುಪಿ, ಆ.22: ಸುರಿಯುತ್ತಿರುವ ಮಳೆ ಹಾಗೂ ಕಳೆದ ಒಂದು ತಿಂಗಳಿನಿಂದ ಭಾರೀ ಮಳೆಯಿಂದ ರಾಜ್ಯಾದ್ಯಂತ ಕಂಡುಬಂದ ಅತಿವೃಷ್ಠಿ ಹಾಗೂ ಅಪಾರ ಹಾನಿಯಿಂದ ಜನತೆ ಇನ್ನೂ ಚೇತರಿಸಿಕೊಳ್ಳಲು ಹೆಣಗುತ್ತಿ ರುವಾಗ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಅ.23 ಮತ್ತು 24ರಂದು ಸರಳ ಹಾಗೂ ಸಾಂಪ್ರದಾಯಿಕ ಶ್ರೀಕೃಷ್ಣಜನ್ಮಾಷ್ಟಮಿ ಆಚರಣೆ ಮತ್ತು ಶ್ರೀಕೃಷ್ಣ ಲೀಲೋತ್ಸವಕ್ಕೆ(ವಿಟ್ಲ ಪಿಂಡಿ) ಭರದ ಸಿದ್ಧತೆಗಳು ನಡೆಯುತ್ತಿವೆ.

ವಿಟ್ಲ ಪಿಂಡಿಯಂದು ರಥಬೀದಿಯಲ್ಲಿ ಗೊಲ್ಲರು ಒಡೆಯುವ ಮೊಸರು ಕುಡಿಕೆಗಳನ್ನು ನೇತು ಹಾಕಲು ಗುರ್ಜಿಗಳನ್ನು ಈಗಾಗಲೇ ನೆಡಲಾಗಿದೆ. ಮಠ, ಗರ್ಭಗುಡಿ ಹಾಗೂ ರಥಬೀದಿಯಲ್ಲಿ ವಿವಿಧ ಬಗೆಯ ಆಲಂಕಾರ ಮಾಡಲಾಗಿದೆ. ಶ್ರೀಕೃಷ್ಣಾಜನ್ಮಾಷ್ಠಮಿ ಪ್ರಯುಕ್ತ ಮಠದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಎರಡು ದಿನಗಳ ಕಾಲ ನಗರದ ಬೀದಿ ಬೀದಿಗಳಲ್ಲಿ ಜನರ ಸಮ್ಮೋಹನಗೊಳಿಸಲು ಹುಲಿ ವೇಷಗಳು ಬಣ್ಣ ಹಚ್ಚಿಕೊಂಡು ಸಿದ್ಧವಾಗುತ್ತಿವೆ.

ಮಠದ ಭೋಜನ ಶಾಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ವಿವಿಧ ಬಗೆಯ ಲಾಡುಗಳನ್ನು ಹಾಗೂ ವಿವಿಧ ಗಾತ್ರದ ಚಕ್ಕುಲಿಗಳನ್ನು ಸಾವಿರಾರು ಸಂಖ್ಯೆಯಲ್ಲಿ ತಯಾರಿಸುವ ಕೆಲಸ ನಡೆಯುತ್ತಿದೆ. ಇದನ್ನು ಭಕ್ತರಿಗೆ ಚಿಣ್ಣರ ಸಂತರ್ಪಣೆಯ ಶಾಲೆಯ ಮಕ್ಕಳಿಗೆ ವಿತರಿಸಲು ಸಣ್ಣ ಬಟ್ಟೆಯ ಚೀಲಗಳಲ್ಲಿ ಪ್ಯಾಕ್ ಮಾಡಲಾಗುತ್ತಿದೆ.

ಆ. 23ರಂದು ಬೆಳಗ್ಗೆ 8:45ಕ್ಕೆ ಕೃಷ್ಣ ಮಠದಲ್ಲಿ ಲಕ್ಷಾರ್ಚನೆ, 9ಗಂಟೆಗೆ ಮಹಾ ಪೂಜೆ ನಡೆಯಲಿದೆ. ಬಳಿಕ 10ಗಂಟೆಗೆ ಪರ್ಯಾಯ ಪಲಿಮಾರು ಶ್ರೀಗಳು ರಾತ್ರಿ ದೇವರ ಸಮರ್ಪಣೆಗಾಗಿ ಉಂಡೆ ಕಟ್ಟಲು ಮುಹೂರ್ತ ನಡೆಸಲಿದ್ದಾರೆ. ರಾತ್ರಿ 7:00ರಿಂದ ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ದಿನವಿಡೀ ಮಠದ ವಿವಿಧ ಕಡೆಗಳಲ್ಲಿ ವಿವಿಧ ಸ್ಪರ್ಧೆಗಳು, ಭಜನಾ ತಂಡಗಳಿಂದ ನಿರಂತರ ಭಜನೆ, ನಾಗಸ್ವರ ವಾದನಗಳು ನಡೆಯಲಿವೆ. ಹಗಲಿಡೀ ಉಪವಾಸ ವ್ರತದಲ್ಲಿರುವ ಪಲಿಮಾರುಶ್ರೀಗಳು ರಾತ್ರಿ 10 ಗಂಟೆಗೆ ವಿಶೇಷ ಮಹಾಪೂಜೆ ನಡೆಸಲಿದ್ದು, ಆ ಬಳಿಕ ಮಧ್ಯರಾತ್ರಿ 12:12ಕ್ಕೆ ಶ್ರೀಕೃಷ್ಣ ಮಠದ ತುಳಸೀಕಟ್ಟೆಯಲ್ಲಿ ಶ್ರೀಕೃಷ್ಣ ಜನಿಸಿದ, ಚಂದ್ರೋದಯವಾದ ಕ್ಷಣದಲ್ಲಿ ಅರ್ಘ್ಯ ಪ್ರದಾನ ಮಾಡುವರು.

ಈ ಸಂದರ್ಭದಲ್ಲಿ ಪರ್ಯಾಯ ಶ್ರೀಗಳಿಗೆ ಉಡುಪಿಯಲ್ಲಿ ಚಾರ್ತುಮಾಸ್ಯ ಕುಳಿತಿರುವ ಉಳಿದ ಮಠಾಧೀಶರು ಜೊತೆಯಾಗುವರು. ಅನಂತರ ಈ ಕ್ಷಣಕ್ಕಾಗಿ ಕಾದಿದ್ದ ನೂರಾರು ಮಂದಿ ಭಕ್ತರು ಸರದಿ ಸಾಲಿನಲ್ಲಿ ನಿಂತು ಅರ್ಘ್ಯ ಪ್ರದಾನ ಮಾಡುವರು.

ಆ.24ರಂದು ವಿಟ್ಲಪಿಂಡಿ ನಡೆಯಲಿದೆ. ಉಡುಪಿ ನಗರವಿಡೀ ಜನರಿಂದ ತುಂಬಿ ತುಳುಕಲಿದೆ. ವಿವಿಧ ವೇಷಗಳು ನಗರವಿಡೀ ಸಂಚರಿಸಲಿವೆ. ಇದರಲ್ಲಿ ಹುಲಿವೇಷಕ್ಕೆ ವಿಶೇಷ ಪ್ರಾಧಾನ್ಯತೆ. ರವಿವಾರ ಬೆಳಗ್ಗೆ 11 ಗಂಟೆ ಯಿಂದಲೇ ರಾಜಾಂಗಣದಲ್ಲಿ ಸಾವಿರಾರು ಮಂದಿ ಭಕ್ತರಿಗೆ ಕೃಷ್ಣ ಪ್ರಸಾದದ ಭೋಜನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಉಡುಪಿಯ ಶ್ರೀಕನಕ ಸಾಂಸ್ಕೃತಿಕ ವೇದಿಕೆ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪೂರ್ವ ಮುಂಬಯಿ ಸಾಂತಕ್ರೂಸ್‌ನ ಬಾಲಮಿತ್ರ ಮಂಡಳಿಯಿಂದ ಆಲಾರೆ ಗೋವಿಂದ ದಹಿಹಿಂಡಿ ನಗರದ ಅನೇಕ ಭಾಗಗಳಲ್ಲಿ ನಡೆಯಲಿದೆ. ಬೆಳಗ್ಗೆ 9:00ಕ್ಕೆ ಕೃಷ್ಣ ಮಠದ ವಸಂತ ಮಂಟಪದಲ್ಲಿ ಇದರ ಉದ್ಘಾಟನೆಯೂ ನಡೆಯಲಿದೆ. ಅಪರಾಹ್ನ 3:00ಕ್ಕೆ ಮೊಸರು ಕುಡಿಕೆಯ ಸಂಭ್ರಮ ರಥಬೀದಿ ಯಲ್ಲಿ ನಡೆಯಲಿದೆ. 5 ಗಂಟೆಯ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಲಿವೆ.

ಸರಳ ಕೃಷ್ಣ ಜನ್ಮಾಷ್ಟಮಿ

ಈ ಬಾರಿ ರಾಜ್ಯದಾದ್ಯಂತ ವಿವಿದೆಡೆಗಳಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ದಿಂದ ಸಾಕಷ್ಟು ಜೀವಹಾನಿ ಹಾಗೂ ಆಸ್ತಿ-ಪಾಸ್ತಿ ಹಾನಿ-ನಷ್ಟ ಉಂಟಾಗಿ ರುವುದರಿಂದ ಕೃಷ್ಣ ಜನ್ಮಾಷ್ಟಮಿಯನ್ನು ಸರಳವಾಗಿ ನಡೆಸಲು ನಿರ್ಧರಿಸಲಾಗಿದೆ. ಸಾಂಪ್ರದಾಯಿಕ ಧಾರ್ಮಿಕ ವಿಧಿವಿದಾನಗಳು ಎಂದಿನಂತೆ ನಡೆದರೂ, ವಿಶೇಷ ಅಬ್ಬರವಿರುವುದಿಲ್ಲ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಈಗಾಗಲೇ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News