ಮಂಗಳೂರಿನ ಮಹಿಳೆಗೆ ವಂಚನೆಗೆ ಯತ್ನ: ಜಮ್ಮು ಕಾಶ್ಮೀರ-ಪಂಜಾಬ್‌ನ ಕುಖ್ಯಾತ ವಂಚಕರು ಸೆರೆ

Update: 2019-08-24 13:53 GMT

ಮಂಗಳೂರು, ಆ. 24: ನಗರದಲ್ಲಿ ವಂಚನೆಗೆ ಸಂಚು ರೂಪಿಸುತ್ತಿದ್ದ ಜಮ್ಮು ಕಾಶ್ಮೀರ ಮತ್ತು ಪಂಜಾಬ್‌ನ ಇಬ್ಬರು ಕುಖ್ಯಾತರನ್ನು ಬಂಧಿಸಲಾಗಿದೆ.

ಜಮ್ಮು ಕಾಶ್ಮೀರದ ವಕುರಾ ಜಿಲ್ಲೆಯ ಬಟಿವಿನ ತಾಲೂಕಿನ ಗಂಜೀಪುರ ಗ್ರಾಮದ ಶೌಕತ್ ಅಹ್ಮದ್ ಲೋನೆ (28) ಮತ್ತು ಪಂಜಾಬ್‌ನ ಮೊಹಾಲಿಯ ಎಸ್‌ಎಎಸ್ ನಗರದ ಜರತ್‌ಪುರ ಬಾಬತ್ ರೋಡ್‌ನ ಬಲ್ಜೀಂದರ್ ಸಿಂಗ್ (48) ಬಂಧಿತ ಆರೋಪಿಗಳು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಹರ್ಷ ಪಿ.ಎಸ್. ತಿಳಿಸಿದ್ದಾರೆ.

ಶನಿವಾರ ತನ್ನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಂಚಕರನ್ನು ತನಿಖೆಗೊಳಪಡಿಸಲಾಗಿದ್ದು, ದೇಶಾದ್ಯಂತ ಇನ್ನೆಷ್ಟು ಮಂದಿಗೆ ವಂಚಿಸಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತದೆ. ಅಲ್ಲದೆ ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.

ಘಟನೆಯ ವಿವರ

ಆ.17ರಂದು ನವಭಾರತ್ ಸರ್ಕಲ್, ಪಿವಿಎಸ್ ಸರ್ಕಲ್, ಬಂಟ್ಸ್ ಹಾಸ್ಟೆಲ್ ರಸ್ತೆಯಲ್ಲಿ ‘ವೋರ್ಲ್ಡ್ ಹೆಲ್ತ್ ಆರ್ಗನೈಸೇಶನ್ ಡೈರಕ್ಷರ್’ ಎಂಬ ನಾಮಫಲಕವನ್ನು ಅಳವಡಿಸಿದ ಪಂಜಾಬ್‌ನ ಪಿಬಿ 65 ಎಎಸ್ 6786 ನೋಂದಣಿ ಸಂಖ್ಯೆ ಹೊಂದಿದ ಚಾಕ್‌ಲೆಟ್ ಬಣ್ಣದ ಕಾರಿಗೆ ‘ಗವರ್ಮೆಂಟ್ ಆಫ್ ಇಂಡಿಯಾ’ ಎಂದು ಸ್ಟಿಕ್ಕರ್ ಅಂಟಿಸಿಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದೆ ಎಂಬ ಮಾಹಿತಿಯ ಮೇರೆಗೆ ವಾಹನ ತಪಾಸಣೆ ನಡೆಸಲು ಪೊಲೀಸರಿಗೆ ಸೂಚನೆ ನೀಡಲಾಯಿತು.

ಅದರಂತೆ ಸಂಚಾರ ಪಶ್ಚಿಮ ಠಾಣೆಯ ಎಚ್‌ಸಿ ಯೋಗರಾಜ್ ಆ.17ರಂದು ಸಂಜೆ 5 ಗಂಟೆಗೆ ಪಿವಿಎಸ್ ಜಂಕ್ಷನ್ ಕಡೆಯಿಂದ ಬಳ್ಳಾಲ್ಬಾಗ್ ಕಡೆಗೆ ಬರುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ ಕಾರು ಚಾಲಕ ತನ್ನನ್ನು ಪಂಜಾಬ್‌ನ ಬಲ್ಜೀಂದರ್ ಸಿಂಗ್ ಎಂದು ಗುರುತಿಸಿಕೊಂಡರೆ, ಕಾರಲ್ಲಿದ್ದ ಇನ್ನೊಬ್ಬನು ಮುಂಬೈನ ಡಾ. ಬಸೀತ್ ಷಾ ಎಂದು ಹೇಳಿಕೊಂಡ. ಹಾಗೇ ಇಬ್ಬರ ಸಹಿತ ಕಾರನ್ನು ಬರ್ಕೆ ಠಾಣೆಗೆ ಕೊಂಡೊಯ್ಯಲಾಯಿತು. ಠಾಣಾಧಿಕಾರಿ ತನಿಖೆ ನಡೆಸಿದಾಗ ಡಾ. ಬಸೀತ್ ಷಾ ಎಂದು ಹೇಳಲಾದ ವ್ಯಕ್ತಿಗೆ ಸಂಬಂಧಿಸಿದ ವೋರ್ಲ್ಡ್ ಹೆಲ್ತ್ ಆರ್ಗನೈಸೇಶನ್ ಡೈರಕ್ಷರ್ ಎಂದು ಬರೆಯಲಾದ ವಿಸಿಟಿಂಗ್ ಕಾರ್ಡ್ ಪತ್ತೆ ಹಚ್ಚಿ, ಇನ್ನಿತರ ದಾಖಲೆಪತ್ರವನ್ನೂ ವಶಪಡಿಸಿ ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ಇವರಿಬ್ಬರೂ ಕುಖ್ಯಾತ ವಂಚಕರು ಎಂಬ ಅಂಶ ಬೆಳಕಿಗೆ ಬಂದಿದೆ.

ಡಾ. ಬಸೀತ್ ಷಾ ಎಂದು ಹೇಳಲಾದ ವ್ಯಕ್ತಿ ಪಿಯುಸಿ ತನಕ ವಿದ್ಯಾಭ್ಯಾಸ ಮಾಡಿದ್ದು, ನಕಲಿ ದಾಖಲೆಯನ್ನಿಟ್ಟುಕೊಂಡು ತಾನು ಡಾಕ್ಟರ್ ಹಾಗೂ ವೋರ್ಲ್ಡ್ ಹೆಲ್ತ್ ಆರ್ಗನೈಸೇಶನ್‌ನ ಡೈರಕ್ಷರ್ ಎಂದು ಗುರುತಿಸಿಕೊಳ್ಳುತ್ತಿದ್ದ. ಮತ್ತಷ್ಟು ವಿಚಾರಿಸಿದಾಗ ತನ್ನ ಹೆಸರು ಶೌಖತ್ ಅಹ್ಮದ್ ಲೋನೆ, ಜಮ್ಮು ಕಾಶ್ಮೀರ ನಿವಾಸಿ ಎಂದು ಬಾಯ್ಬಿಟ್ಟ ಎಂದು ಪೊಲೀಸ್ ಆಯುಕ್ತ ಡಾ. ಹರ್ಷ ನುಡಿದರು.

ತಾನು ಶೌಖತ್ ಜೊತೆ 2 ವರ್ಷಗಳಿಂದ ಇದ್ದು ತನ್ನ ಹೆಸರಿನಲ್ಲಿದ್ದ ಕಾರನ್ನು ಶೌಖತ್‌ಗೆ ದೇಶಾದ್ಯಂತ ಸುತ್ತಾಡಲು ನೀಡಿದ್ದೆ. ತನಗೆ ಮಾಸಿಕ 20,000 ರೂ. ಸಂಬಳ ನೀಡುತ್ತಿದ್ದು, ಕಾರಿನ ಖರ್ಚು ವೆಚ್ಚಗಳನ್ನು ಶೌಖತ್ ನೋಡಿಕೊಳ್ಳುತ್ತಿದ್ದ ಎಂದು ಕಾರು ಚಾಲಕ ಬಲ್ಜೀಂದರ್ ಸಿಂಗ್ ಹೇಳಿಕೊಂಡಿದ್ದಾನೆ.

ಈಗಾಗಲೆ ಶೌಖತ್ ವಿರುದ್ಧ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಕರಣ ದಾಖಲಾಗಿದ್ದು, ಅಲ್ಲಿಂದ ತಲೆಮರೆಸಿಕೊಂಡು ದೇಶಾದ್ಯಂತ ಸುತ್ತಾಡಿಕೊಂಡು ವಂಚನೆ ನಡೆಸುತ್ತಿರುವುದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ. ಶೌಖತ್ ಯಾನೆ ಡಾ.ಬಸೀತ್ ಷಾ ‘ಮ್ಯಾಟ್ರಿಮೋನಿಯಲ್’ನಲ್ಲಿ ತನ್ನ ಹೆಸರು ನೋಂದಾಯಿಸಿ ಮದುವೆ ಆಗುವುದಾಗಿ ನಂಬಿಸಿ ಹಲವು ಮಹಿಳೆಯರನ್ನು ಗೋವಾ, ಬೆಳಗಾವಿ, ಮುಂಬೈ, ಜಾರ್ಖಂಡ್, ಜೈಪುರ, ಕಲ್ಕತ್ತಾ, ಛತ್ತೀಸ್‌ಗಡ್, ಅಮೃತ್‌ಸರ್, ಹೈದರಾಬಾದ್ ಮತ್ತಿತರ ಕಡೆಗಳಲ್ಲಿ ವಂಚಿಸಿರುವ ಬಗ್ಗೆಯೂ ಮಾಹಿತಿ ಲಭಿಸಿದೆ. ಮ್ಯಾಟ್ರಿಮೋನಿಯಲ್ ಮೂಲಕ ಮಂಗಳೂರಿನಲ್ಲಿ ಹೆಸರು ನೋಂದಾಯಿಸಿದ್ದ ಮಹಿಳೆಯೊಂದಿಗೆ ಸಂಪರ್ಕಿಸಲು ಬಂದಿದ್ದ ವೇಳೆ ಸಿಕ್ಕಿ ಹಾಕಿಕೊಂಡಿದ್ದಾನೆ ಎಂದು ಪೊಲೀಸ್ ಆಯುಕ್ತ ಡಾ. ಹರ್ಷ ಪಿ.ಎಸ್. ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಅರುಣಾಂಗ್‌ಶಿ ಗಿರಿ, ಲಕ್ಷ್ಮಿಗಣೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News