ಕಾಶ್ಮೀರದಲ್ಲಿ ಮಾಧ್ಯಮ ನಿರ್ಬಂಧ ಬೆಂಬಲಿಸಿದ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ
Update: 2019-08-24 15:56 GMT
ಹೊಸದಿಲ್ಲಿ, ಆ. 26: ವಿಧಿ 370 ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಜಮ್ಮು ಹಾಗೂ ಕಾಶ್ಮೀರದಲ್ಲಿ ಸಂವಹನ ನಿರ್ಬಂಧ ಹೇರಿದ ಕೇಂದ್ರ ಸರಕಾರ, ಜಮ್ಮು ಹಾಗೂ ಕಾಶ್ಮೀರ ಸರಕಾರದ ನಿರ್ಧಾರ ಬೆಂಬಲಿಸಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಪತ್ರಕರ್ತರಿಗೆ ತಮ್ಮ ಕರ್ತವ್ಯ ನಿರ್ವಹಿಸಲು ಅಡ್ಡಿ ಉಂಟಾಗುತ್ತಿದೆ. ಆದುದರಿಂದ ಜಮ್ಮು ಹಾಗೂ ಕಾಶ್ಮೀರದಲ್ಲಿ ವಿಧಿಸಿದ ಸಂವಹನ ನಿರ್ಬಂಧ ಹಿಂಪಡೆಯುವಂತೆ ಕೋರಿ ‘ಕಾಶ್ಮೀರಿ ಟೈಮ್ಸ್’ನ ಕಾರ್ಯ ನಿರ್ವಹಣಾ ಸಂಪಾದಕಿ ಅನುರಾಧಾ ಭಾಸಿನ್ ಸಲ್ಲಿಸಿದ ಮನವಿಯ ಮಧ್ಯೆ ಪ್ರವೇಶಿಸುವಂತೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ತನ್ನ ಮನವಿಯಲ್ಲಿ ಕೋರಿದೆ.
ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಪರವಾಗಿ ನ್ಯಾಯವಾದಿ ಅಂಶುಮಾನ್ ಅಶೋಕ್ ಈ ಮನವಿ ಸಲ್ಲಿಸಿದ್ದಾರೆ.
ಭದ್ರತಾ ಆತಂಕ ಇರುವುದರಿಂದ ಮಾಧ್ಯಮ ನಿರ್ಬಂಧ ಅನಿವಾರ್ಯವಾಗಿದೆ ಎಂದು ಹೇಳುವ ಮೂಲಕ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ತನ್ನ ಮನವಿಯಲ್ಲಿ ಸಂವಹನ ನಿರ್ಬಂಧವನ್ನು ಸಮರ್ಥಿಸಿಕೊಂಡಿದೆ.