ಬಿಜೆಪಿ ಮುಖಂಡ ಶ್ರೀನಿವಾಸ ಮೇಸ್ತ್ರಿ ನಿಧನ
Update: 2019-08-24 17:20 GMT
ಬಂಟ್ವಾಳ, ಆ. 24: ಬಿಜೆಪಿ ಮುಖಂಡ, ಧಾರ್ಮಿಕ ಮುಂದಾಳು ಸರಪಾಡಿ ಗ್ರಾಮದ ಅಂಕರಗುಂಡಿ ನಿವಾಸಿ ಶ್ರೀನಿವಾಸ ಮೇಸ್ತ್ರಿ (56) ಹೃದಯಾಘಾತದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಅವರು ವೃತ್ತಿಯಲ್ಲಿ ಕಟ್ಟಡ ಗುತ್ತಿಗೆದಾರರಾಗಿದ್ದು, ಪ್ರಗತಿಪರ ಕೃಷಿಕರಾಗಿದ್ದರು. ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದರು. ಅಲ್ಲಿಪಾದೆ ಶ್ರೀ ರಾಮ ಭಜನ ಮಂದಿರ, ಪೆರಿಯಪಾದೆ ಶ್ರೀ ದುಗಲಾಯ, ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಸಮಿತಿ, ಅಲ್ಲಿಪಾದೆ ಹಾಲು ಉತ್ಪಾದಕರ ಸಹಕಾರ ಸಂಘ, ಬಿಜೆಪಿ ಸರಪಾಡಿ ವಲಯ ಸಮಿತಿಯ ಅಧ್ಯಕ್ಷರಾಗಿದ್ದರು.
ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪಾಡಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ, ಜಿಪಂ ಸದಸ್ಯ ಎಂ.ತುಂಗಪ್ಪ ಬಂಗೇರ ಸಹಿತ ಬಿಜೆಪಿ ಮುಖಂಡರು ಮೃತರ ಅಂತಿಮ ದರ್ಶನ ಪಡೆದು ಮನೆ ಮಂದಿಗೆ ಸಾಂತ್ವನ ವ್ಯಕ್ತಪಡಿಸಿದರು.