ಉಡುಪಿ: ಕಾಂಗ್ರೆಸ್ ನಗರಸಭಾ ಸದಸ್ಯರಿಂದ ಡಿಸಿಗೆ ಮನವಿ
ಉಡುಪಿ, ಆ.26: ಉಡುಪಿ ನಗರಸಭೆ ಚುನಾಯಿತ ಕಾಂಗ್ರೆಸ್ ಸದಸ್ಯರು ಸೋಮವಾರ ನೂತನ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರನ್ನು ಭೇಟಿಯಾಗಿ, ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಯ ಕುರಿತು ಮನವಿ ಸಲ್ಲಿಸಿದರು.
ನಗರದಲ್ಲಿ ನೂತನ ಕಟ್ಟಡಗಳಿಗೆ ನಿರ್ಮಾಣ -2 ಆನ್ಲೈನ್ ತಂತ್ರಾಂಶದ ಸಮಸ್ಯೆಯಿಂದಾಗಿ ಯಾವುದೇ ಹೊಸ ಕಟ್ಟಡಗಳಿಗೆ ಪರವಾನಿಗೆ ಇಲ್ಲದೆ ವಿದ್ಯುತ್ ಸಂಪರ್ಕಕ್ಕೆ ನಿರಾಪೇಕ್ಷಣ ಪತ್ರ ದೊರೆಯುತ್ತಿಲ್ಲ. ನಗರಸಭೆ 35 ವಾರ್ಡ್ಗಳಲ್ಲಿ ದಾರಿದೀಪಗಳ ತೊಂದರೆ, ಮುಖ್ಯ ರಸ್ತೆಯ ಜಂಕ್ಷನ್ಗಳ ಡಿವೈಡರ್ಗಳಲ್ಲಿನ ಹೆಮಾಸ್ಟ್ ದ್ವೀಪ ಉರಿಯದೆ ಇರುವುದರಿಂದ ಸಮಸ್ಯೆ ಯಾಗುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ರಸ್ತೆ ಇಕ್ಕೆಲಗಳಲ್ಲಿ ಗಿಡಗಂಟೆ ಬೆಳೆದಿದ್ದು ಅದನ್ನು ಸ್ವಚ್ಛಗೊಳಿಸದಿದ್ದರೆ ಮುಂಬ ರುವ ಚೌತಿ ಹಬದ ಸಿದ್ಧತೆಗೆ ಸಮಸ್ಯೆಯಾಗಲಿದೆ. ಮುಖ್ಯ ರಸ್ತೆಯ ಒಳಚರಂಡಿ ವ್ಯವಸ್ಥೆ ಹದಗೆಟ್ಟು ಪಾದಚಾರಿಗಳಿಗೆ, ದ್ವಿಚಕ್ರ ವಾಹನ ಸವಾರರಿಗೆ ತೊಂದರೆ ಯಾಗುತ್ತಿದೆ. ಇದರಿಂದ ನಗರ ವ್ಯಾಪ್ತಿಯಲ್ಲಿ ಅನೇಕ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿದೆ. ಆದ್ದರಿಂದ ತಕ್ಷಣ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳ ಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭ ನಗರಸಭೆ ಸದಸ್ಯರಾದ ರಮೇಶ್ ಕಾಂಚನ್, ಅಮೃತಾ ಕೃಷ್ಣಮೂರ್ತಿ, ವಿಜಯ ಪೂಜಾರಿ, ಸೆಲಿನಾ ಕರ್ಕಡ, ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಮಾಜಿ ಉಪಾಧ್ಯಕ್ಷೆ ಸಂಧ್ಯಾ ತಿಲಕ್ರಾಜ್, ಮಾಜಿ ಸದಸ್ಯರಾದ ಶಶಿರಾಜ್ ಕುಂದರ್, ಆರ್.ಕೆ.ರಮೇಶ್, ಶಾಂತಾರಾಮ್ ಸಾಲ್ವಂಕರ್ ಉಪಸ್ಥಿತರಿದ್ದರು.