×
Ad

​ಮಂಗಳೂರು: ಕುಡಿದ ಮತ್ತಿನಲ್ಲಿ ಸ್ನೇಹಿತನ ಕೊಲೆ; ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ

Update: 2019-08-26 20:04 IST

ಮಂಗಳೂರು, ಆ.26: ಕುಡಿತದ ಮತ್ತಿನಲ್ಲಿ ಸ್ನೇಹಿತನ ಮೇಲೆಯೇ ಸಂಶಯಗೊಂಡು ಆತನನ್ನು ಕಡಿದು ಕೊಲೆ ಮಾಡಿದ್ದ ಆರೋಪಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ.

ಮೂಡುಬಿದಿರೆಯ ಶಿರ್ತಾಡಿ ದೇವಸಮನೆ ನಿವಾಸಿ ಜಯ ಮಡಿವಾಳ (42) ಅಪರಾಧಿ.

ಈತ ಕಳೆದ ವರ್ಷ ಅ. 2ರಂದು ರಾತ್ರಿ ತನ್ನ ಮನೆಯಲ್ಲಿಯೇ ತನ್ನ ಸ್ನೇಹಿತ, ಪಚ್ಚಾಡಿ ಕಜೆ ಶಿರ್ತಾಡಿ ನಿವಾಸಿ ಶೇಖರ ಪೂಜಾರಿ(52) ಎಂಬವರನ್ನು ಕಡಿದು ಕೊಲೆ ಮಾಡಿದ್ದ.

ನೇರ ಸಾಕ್ಷಿಗಳಿಲ್ಲದಿದ್ದರೂ ಸಾಂದರ್ಭಿಕ ಸಾಕ್ಷಿಗಳ ಆಧಾರದಲ್ಲಿ ಆತ ಮಾಡಿದ ಅಪರಾಧ ಸಾಬೀತಾಗಿದ್ದು, ಜಿಲ್ಲಾ ಪ್ರಧಾನ ಮತ್ತು ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣ ಆಚಾರ್ಯ ತೀರ್ಪು ಪ್ರಕಟಿಸಿದರು. ಕಠಿಣ ಜೀವಾವಧಿ ಶಿಕ್ಷೆ, 10 ಸಾವಿರ ರೂ. ದಂಡ ಮತ್ತು ದಂಡ ತೆರಲು ತಪ್ಪಿದರೆ ಆರು ತಿಂಗಳು ಸಜೆ ವಿಧಿಸಲಾಗಿದೆ.

ಪ್ರಕರಣ ವಿವರ: ಜಯ ಮಡಿವಾಳ ಹಾಗೂ ಶೇಖರ ಪೂಜಾರಿ ಸ್ನೇಹಿತರು. ಜಯ ಮಡಿವಾಳ ಏಕಾಂಗಿಯಾಗಿ ದೇವಸಮನೆಯಲ್ಲಿ ವಾಸಿಸುತ್ತಿದ್ದ. ಕೊಲೆಯಾಗುವ ದಿನದಂದು ಮಧ್ಯಾಹ್ನ ಇಬ್ಬರೂ ಶಿರ್ತಾಡಿ ಪೇಟೆಯಲ್ಲಿ ಭೇಟಿಯಾಗಿದ್ದರು. ಮಾತನಾಡುವಾಗ ಶೇಖರ ಪೂಜಾರಿ ಜಯ ಮಡಿವಾಳನಲ್ಲಿ ತನ್ನೊಂದಿಗೆ ಆಂಧ್ರಕ್ಕೆ ಬರುವಂತೆ ಕೇಳಿದ್ದರು.

ಬಳಿಕ ಇಬ್ಬರೂ ಹಂದಿ ಮಾಂಸ ಖರೀದಿಸಿ, ಜಯ ಮಡಿವಾಳನ ಮನೆಗೆ ತೆರಳಿದ್ದರು. ರಾತ್ರಿ ಇಬ್ಬರೂ ಮದ್ಯ ಸೇವಿಸಿ, ಬಳಿಕ ಅಡುಗೆ ಮಾಡಿ ಊಟ ಮಾಡಿದ್ದು, ಆಗಲೂ ಶೇಖರ ಆಂಧ್ರಕ್ಕೆ ಬರುವಂತೆ ಕೇಳಿದ್ದರು. ಅಲ್ಲದೆ, ಜಯ ಒಬ್ಬನೇ ಇರುವುದರಿಂದ ಜಮೀನು ತನಗೆ ಕೊಡುವಂತೆ ಕೇಳಿದ್ದರು. ಇದರಿಂದ ಜಯ ಸಿಟ್ಟಿಗೆದ್ದಿದ್ದ. ಇಬ್ಬರಿಗೂ ಜಗಳ ನಡೆದಿದ್ದು, ಸಿಟ್ಟಿನಿಂದ ಶೇಖರ ಪೂಜಾರಿಯ ತಲೆ, ಕೊರಳು, ಕೈಗಳಿಗೆ ಕಡಿದು ಕೊಲೆ ಮಾಡಿದ್ದ.

ಮರುದಿನ ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿತ್ತು. ತನ್ನನ್ನು ಆಂಧ್ರಕ್ಕೆ ಕರೆದು ಕೊಲೆ ಮಾಡಲು ಶೇಖರ ಪೂಜಾರಿ ಹವಣಿಸುತ್ತಿದ್ದುದರಿಂದ ತಾನು ಕೊಲೆ ಮಾಡಿದ್ದಾಗಿ ಆರೋಪಿ ತನಿಖೆ ವೇಳೆ ಹೇಳಿಕೆ ನೀಡಿದ್ದ.
ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ್ ಅವರು ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರಾರಂಭದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಪುಷ್ಪರಾಜ್ ಕೆ. ವಾದಿಸಿದ್ದು, ಬಳಿಕ ರಾಜು ಪೂಜಾರಿ ಬನ್ನಾಡಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News