×
Ad

ಕೊಂಕಣಿಯಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆಯವ ಅವಕಾಶ: ಮೆಲ್ವಿನ್ ರಾಡ್ರಿಗ್

Update: 2019-08-26 20:22 IST

ಮಂಗಳೂರು, ಆ.26: ಕೊಂಕಣಿಗೆ ಮಾನ್ಯತೆ ದೊರೆತುದರಿಂದ ಮಹತ್ವದ ಕೆಲ ಬೆಳವಣಿಗೆಗಳು ಆಗಿವೆ. ಕೊಂಕಣಿಯನ್ನು ಸಮೃದ್ಧ ಭಾಷೆಯನ್ನಾಗಿಸುವ ಅವಕಾಶವನ್ನು ಸಂವಿಧಾನದ ಎಂಟನೇ ಪರಿಚ್ಛೇದ ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಕೊಂಕಣಿಗರಿಗೆ ನೀಡಿದೆ. ಕೊಂಕಣಿಯಲ್ಲಿ ಯುಪಿಎಸ್‌ಸಿ (ಐಎಎಸ್/ಐಪಿಎಸ್ ಇತ್ಯಾದಿ) ಪರೀಕ್ಷೆಗಳನ್ನು ಬರೆಯವ ಅವಕಾಶವೂ ಲಭಿಸಿದೆ ಎಂದು ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದ ಕವಿ ಮೆಲ್ವಿನ್ ರೊಡ್ರಿಗಸ್ ಹೇಳಿದರು.

ವಾಮಂಜೂರಿನ ಶ್ರಮಿಕ ಸಂತ ಜೊಸೆಫ್ ಚರ್ಚ್ ವತಿಯಿಂದ ಸಾಂಗಾತಿ ವಾಮಂಜೂರ್ ಸಹಕಾರದಲ್ಲಿ ಚರ್ಚ್ ಸಭಾಂಗಣದಲ್ಲಿ ರವಿವಾರ ನಡೆದ ಕೊಂಕಣಿ ಮಾನ್ಯತಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

22 ರಾಷ್ಟ್ರೀಯ ಭಾಷೆಗಳಲ್ಲಿ ಒಂದಾದ ಕೊಂಕಣಿಯು ಸರಕಾರಿ ವ್ಯವಸ್ಥೆಯ ವಿವಿಧ ಸ್ತರಗಳಲ್ಲಿ ಬಳಸಲ್ಪಡುತ್ತದೆ. ಜನಪ್ರತಿನಿಧಿಗಳಿಗೆ ವಿಧಾನಮಂಡಲ, ಸಂಸತ್ತುಗಳಲ್ಲಿ, ನಾಗರಿಕರಿಗೆ ಸರಕಾರಿ ಕಚೇರಿಗಳಲ್ಲಿ ಅಧಿಕೃತವಾಗಿ ಕೊಂಕಣಿಯನ್ನು ಉಪಯೋಗಿಸುವ ಅವಕಾಶವಿದೆ. ಸಾಹಿತ್ಯ ರಚನೆ, ಅನುವಾದದ ಬೆಳವಣಿಗೆಗೆ ವಿಫುಲ ಅವಕಾಶಗಳು ತೆರೆದಿವೆ. ಕೊಂಕಣಿಯಲ್ಲಿ ಶಿಕ್ಷಣ, ಶಿಕ್ಷಕರಿಗೆ ನೌಕರಿ ಇತ್ಯಾದಿ ಕೆಲಸಗಳು ವೇಗ ಪಡೆಯಬೇಕಾಗಿವೆ ಎಂದ ಮೆಲ್ವಿನ ರೊಡ್ರಿಗಸ್ ಎಲ್ಲಕ್ಕಿಂತ ಮೊದಲು ಕೊಂಕಣಿತನವನ್ನು ಹೃದಯದಲ್ಲಿ ಪೋಸಿ ಬೆಳೆಸಬೇಕು. ಮನೆಗಳಲ್ಲಿ ಹಾಗೂ ಹೊರಗಡೆ ಸಾಧ್ಯವಿರುವೆಡೆ ಕೊಂಕಣಿ ಬಳಸಬೇಕು. ಮಕ್ಕಳಲ್ಲಿ ಕೊಂಕಣಿ ಪ್ರೇಮವನ್ನು ಬೆಳೆಸಬೇಕು. ಕೊಂಕಣಿ ಕಾರ್ಯಕ್ರಮಗಳು, ಕಲಾವಿದರು, ಸಾಹಿತ್ಯ, ಪತ್ರಿಕೆಗಳನ್ನು ಪ್ರೋತ್ಸಾಹಿಸಿದಾಗ ಕೊಂಕಣಿ ವಿಕಸಿಸುತ್ತದೆ, ಮಾನ್ಯತೆಗೆ ಸಾರ್ಥಕತೆ ಬರುತ್ತದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಚರ್ಚ್ ಉಪಾಧ್ಯಕ್ಷ ಸುನೀಲ್ ಪಿಂಟೊ ಕೃಷಿ ಸಂಸ್ಕೃತಿಯನ್ನು ಬಿಂಬಿಸುವ ಅಕ್ಕಿಯಲ್ಲಿ ಕೊಂಕಣಿ ಬಾವುಟವನ್ನು ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು. ಸೃಜನಾ ಪ್ರಕಾಶನ ಪ್ರಕಟಿಸಿದ ಡೇವಿಡ್ ಡಿಸೋಜ ವಾಮಂಜೂರ್ ರಚಿಸಿದ ‘ತಪ್ಕಟೆ ಫುಲಾಂ’ ಕಾದಂಬರಿಯನ್ನು ಬಿಡುಗಡೆಗೊಳಿಸಲಾಯಿತು. ಪ್ರಕಾಶಕ ತೊರಿ ಕಾರ್ಕಳ ಪುಸ್ತಕ ಪರಿಚಯಿಸಿದರು. ಅರುಣ್ ರಾಜ್ ರಾಡ್ರಿಗಸ್ ಬರೆದು ನಿರ್ದೇಶಿಸಿದ, ಕಲಾ ಕುಲೋತ್ಸವ್‌ನ ಎರಡನೇ ನಾಟಕ ‘ಪೇಯೊಂಗ್ ಗೆಸ್ಟ್’ ಕಲಾಕುಲ್ ಕಲಾವಿದರಿಂದ ಪ್ರದರ್ಶನಗೊಂಡಿತು.

ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ, ಸಂತ ಆಗ್ನೆಸ್ ಕಾಲೇಜಿನ ರಿಜಿಸ್ಟ್ರಾರ್ ಚಾರ್ಲ್ಸ್ ಪಾಯ್ಸ್ ಉಪಸ್ಥಿತರಿದ್ದರು. ಲಾರೆನ್ಸ್ ಡಿಸೋಜ ಸ್ವಾಗತಿಸಿದರು. ರೋಶನ್ ಮಿನೇಜಸ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News