ತಾಳಮದ್ದಳೆ ಅಭಿಯಾನದಿಂದ ಸಾಂಸ್ಕೃತಿಕ ಜಾಗೃತಿ: ಶೇಖರ ಆರ್.ಶೆಟ್ಟಿ

Update: 2019-08-27 17:45 GMT

ಮಂಗಳೂರು: ಮುಂಬೈ ಮಹಾನಗರದಲ್ಲಿ ಯಕ್ಷಗಾನಕ್ಕೆ ವಿಶೇಷವಾದ ಪ್ರೋತ್ಸಾಹವಿದೆ. ಅದರ ಇನ್ನೊಂದು ಪ್ರಕಾರವಾದ ತಾಳಮದ್ದಳೆಯನ್ನು ಒಂದು ಅಭಿಯಾನದ ರೂಪದಲ್ಲಿ ಅಜೆಕಾರು ಕಲಾಭಿಮಾನಿ ಬಳಗವು ಅಜೆಕಾರು ಬಾಲಕೃಷ್ಣ ಶೆಟ್ಟಿಯವರ ನೇತೃತ್ವದಲ್ಲಿ ಹೆಚ್ಚಿನ ಕಾಳಜಿ ವಹಿಸಿ ನಡೆಸುತ್ತಿದೆ. ಇದು ಮಹಾನಗರದ ವಿವಿಧ ಭಾಗಗಳಲ್ಲಿ ಸಾಂಸ್ಕೃತಿಕ ಜಾಗೃತಿಗೆ ಕಾರಣವಾಗಿದೆ.ಇದಕ್ಕಾಗಿ ಅಭಿನಂದನೆಗಳು' ಎಂದು  ಯಕ್ಷಮಾನಸ ಮುಂಬೈ ಅಧ್ಯಕ್ಷ ಶೇಖರ ಆರ್. ಶೆಟ್ಟಿ ಹೇಳಿದ್ದಾರೆ.

ಕಲ್ವ ಎನೆಕ್ಸ್ ಗಾರ್ಡನ್ ನ ಹೋಟೆಲ್ ಸಾಯಿ ಸಾಗರ್ ನಲ್ಲಿ ರವಿವಾರ ಜರಗಿದ ಅಜೆಕಾರು ಕಲಾಭಿಮಾನಿ ಬಳಗದ 18 ನೇ ವರ್ಷದ ತಾಳಮದ್ದಳೆ ಸರಣಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉದ್ಯಮಿ ಉದಯಕುಮಾರ್ ಶೆಟ್ಟಿ ದೊಡ್ಡೆರಂಗಡಿ ಜ್ಯೋತಿ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು. ಅವರು ಮಾತನಾಡಿ 'ಯಕ್ಷಗಾನವು ನಮ್ಮ ಮಣ್ಣಿನ ಕಲೆ. ಅದನ್ನು ಪ್ರೋತ್ಸಾಹಿಸಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ ' ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಗಾಣಿಗರ ಸಂಘದ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಗಾಣಿಗ ಅವರು 'ನಾಟಕ - ಯಕ್ಷಗಾನಗಳು ಕರಾವಳಿ ಕರ್ನಾಟಕದ ಜನಜೀವನದಲ್ಲಿ ಹಾಸುಹೊಕ್ಕಾಗಿ ಬಂದಿವೆ. ಆ ಭಾಗದ ಜನರು ಮುಂಬಯಿ ನಗರದಲ್ಲಿ ದೊಡ್ಡ ಸಂಖ್ಯೆಯಲ್ಲಿರುವುದರಿಂದ ಇಲ್ಲಿಯೂ ಈ ಕಲಾ ಪ್ರಕಾರಗಳು ಜನಪ್ರಿಯತೆ ಗಳಿಸಿವೆ. ಮುಂದಿನ ತಲೆಮಾರಿಗೂ ಅವುಗಳನ್ನು ತಲುಪಿಸುವ ಪ್ರಯತ್ನ ಆಗಬೇಕಿದೆ'  ಎಂದರು.

ತಾಳಮದ್ದಳೆಯಲ್ಲಿ ದಾಖಲೆ:  ಕುಕ್ಕುವಳ್ಳಿ

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಹಾಗೂ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಯಕ್ಷಗಾನ ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಮಾತನಾಡಿ 'ಅಜೆಕಾರು ಕಲಾಭಿಮಾನಿ ಬಳಗ ಕಳೆದ ಎರಡು ದಶಕಗಳಿಂದ ಮುಂಬಯಿಯಲ್ಲಿ ಯಕ್ಷಗಾನೀಯವಾದ  ಚಟುವಟಿಕೆಗಳಿಂದ ಎಲ್ಲಾ ಸ್ತರದ ಜನರ ಮನಗೆದ್ದಿದೆ. ಸರಣಿ ತಾಳಮದ್ದಳೆಯ ಮೂಲಕ ಆ ಕಲಾಪ್ರಕಾರಕ್ಕೆ ವಿಶೇಷ ಜನಾದರಣೆ ಲಭಿಸುವಂತೆ ಮಾಡಿದೆ. ತಾಳಮದ್ದಳೆ ಕ್ಷೇತ್ರದ ಘಟಾನುಘಟಿ ಕಲಾವಿದರನ್ನು ಮುಂಬಯಿಗರಿಗೆ ಪರಿಚಯಿಸಿದ ಕೀರ್ತಿ ಅಜೆಕಾರು ಬಾಲಕೃಷ್ಣ ಶೆಟ್ಟಿಯವರಿಗೆ ಸಲ್ಲುತ್ತದೆ. ಅದರಲ್ಲೂ ಈ ಬಾರಿಯ ಸರಣಿಯಲ್ಲಿ ಎಡೆಬಿಡದೆ 16 ತಾಳಮದ್ದಳೆಗಳನ್ನು ಏರ್ಪಡಿಸಿ ಅವರು ದಾಖಲೆ ನಿರ್ಮಿಸಿದ್ದಾರೆ'  ಎಂದರು.

ಉದ್ಯಮಿ ಹಾಗೂ ಕಲಾ ಪೋಷಕ ಪೊಲ್ಯ ಉಮೇಶ್ ಶೆಟ್ಟಿ ಅವರು ಬಳಗದ ಸಾಧನೆಯನ್ನು ಪ್ರಶಂಸಿಸಿ ' ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಯಕ್ಷಗಾನ ಕಲಾವಿದರು ದೊಡ್ಡ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಮುಂಬೈಯಲ್ಲಿ ವೇದಿಕೆ ಕಲ್ಪಿಸಿಕೊಟ್ಟ ಸಂಘಟಕರು ಅಭಿನಂದನಾರ್ಹರು. ಯಕ್ಷಗಾನಕ್ಕಿದು ಸುಗ್ಗಿಯ ಕಾಲ'  ಎಂದು ನುಡಿದರು. ಮುಲುಂಡ್  ಬಂಟ್ಸ್ ನ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದ ಚೌಟ ಅವರು ಮಾತನಾಡಿ 'ಮುಂಬೈಯಲ್ಲಿ ಯಕ್ಷಗಾನವನ್ನು ಪ್ರೀತಿಸುವವರು ಬಹು ಸಂಖ್ಯೆಯಲ್ಲಿದ್ದಾರೆ. ಆದರೆ ಭಾಷಾ ಸಮಸ್ಯೆಯಿಂದಾಗಿ ಎಳೆಯರಿಗೆ ತಾಳಮದ್ದಳೆಯ ಮಹತ್ವ ತಿಳಿದಿಲ್ಲ. ಅಮೂಲ್ಯವಾದ ಜೀವನ ಸಂದೇಶ ನೀಡುವ ಈ ಕಲಾಪ್ರಕಾರ ತುಳುಭಾಷೆಯಲ್ಲಿ ಪ್ರಸ್ತುತ ಗೊಂಡರೆ ಉತ್ತಮ' ಎಂದರು.

ಉದ್ಯಮಿಗಳಾದ ಶೇಖರ ಶೆಟ್ಟಿ ನಲ್ಲೂರು, ಯೋಗೇಶ್ ಶೆಟ್ಟಿ ಬೆಳುವಾಯಿ, ಪದ್ಮನಾಭ ಶೆಟ್ಟಿ ಇರುವೈಲು, ಜಗದೀಶ ಇರಾ ಆಚೆಬೈಲು ಅತಿಥಿಗಳಾಗಿ ಉಪಸ್ಥಿತರಿದ್ದರು. ತಾಳಮದ್ದಳೆಯಲ್ಲಿ ಭಾಗವಹಿಸಿದ ಊರಿನ ಪ್ರಬುದ್ಧ ಕಲಾವಿದರನ್ನು ಸಭೆಯಲ್ಲಿ ಗೌರವಿಸಲಾಯಿತು.

ಅಜೆಕಾರು ಕಲಾಭಿಮಾನಿ ಬಳಗದ ಮುಂಬಯಿ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಕಲಾಸಂಘಟಕ ಕರ್ನೂರು ಮೋಹನ ರೈ ಕಾರ್ಯಕ್ರಮ ನಿರೂಪಿಸಿದರು. ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ವಂದಿಸಿದರು.

16ನೇ ತಾಳಮದ್ದಳೆ 'ಭೃಗು ಶಾಪ'

ಸರಣಿಯ ಹದಿನಾರನೇ ಕಾರ್ಯಕ್ರಮವಾಗಿ ಹೋಟೆಲ್ ಸಾಯಿ ಸಾಗರ್ ಸಭಾಂಗಣದಲ್ಲಿ 'ಭೃಗು ಶಾಪ' ಯಕ್ಷಗಾನ ತಾಳಮದ್ದಳೆ ಜರಗಿತು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಹರೀಶ್ ಭಟ್ ಬಳಂತಿಮೊಗರು, ಸದಾಶಿವ ಆಳ್ವ ತಲಪಾಡಿ, ಭಾಸ್ಕರ ಶೆಟ್ಟಿ ಸಾಲ್ಮರ, ಪ್ರಸಾದ ಸವಣೂರು ಅರ್ಥಧಾರಿಗಳಾಗಿದ್ದರು. ಭಾಗವತರಾಗಿ ದೇವಿ ಪ್ರಸಾದ್ ಆಳ್ವ ತಲಪಾಡಿ ಹಾಗೂ ಚಂಡೆ - ಮದ್ದಳೆ ಗಳಲ್ಲಿ ಪ್ರಶಾಂತ ಶೆಟ್ಟಿ  ಮತ್ತು ರೋಹಿತ್ ಉಚ್ಚಿಲ್ ಭಾಗವಹಿಸಿದರು. ದಿನೇಶ್ ಶೆಟ್ಟಿ ವಿಕ್ರೋಲಿ ಸಹಕಾರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News