×
Ad

ವಿಜ್ಞಾನ ನಾಟಕಗಳಿಂದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಪ್ರಜ್ಞೆ: ವಾಲ್ಟರ್ ಡಿಮೆಲ್ಲೋ

Update: 2019-08-28 23:55 IST

ಬಂಟ್ವಾಳ, ಆ. 28: ವಿಜ್ಞಾನ ಸಂಬಂಧಿಸಿದ ನಾಟಕಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಶಂಭೂರು ಶಾಲೆಯು ನಾಟಕಗಳ ಮೂಲಕ ರಾಷ್ಟ್ರಮಟ್ಟದ ಗಮನ ಸೆಳೆದಿರುವುದು ಹೆಮ್ಮೆಯ ವಿಷಯ ಎಂದು ಮಂಗಳೂರಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ವಾಲ್ಟರ್ ಡಿಮೆಲ್ಲೋ ಹೇಳಿದ್ದಾರೆ.

ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರಿನಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಟೌನ್ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಜ್ಞಾನ ನಾಟಕ ಸ್ಪರ್ಧೆಯನ್ನು ಬುಧವಾರ ಉಪ್ಪಿನ ದ್ರಾವಣದ ಮೂಲಕ ವಿದ್ಯುತ್ ಹಾಯಿಸಿ ದೀಪ ಉರಿಸಿ ಉದ್ಘಾಟಿಸಿ ಮಾತಾನಾಡುತ್ತಿದ್ದರು.

ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಇಲಾಖೆಯವರು ಶಾಲೆ ಮೇಲಿಟ್ಟ ನಂಬಿಕೆ ವಿಶ್ವಾಸಕ್ಕೆ ವಂದಿಸಿದರು. ಕಾರ್ಯಕ್ರಮದಲ್ಲಿ ಕಳೆದ ಸಾಲಿನ ವಿಜ್ಞಾನ ನಾಟಕ ಸ್ಫರ್ಧೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿದ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಚಿತ್ರಕಲಾ ಶಿಕ್ಷಕರಾದ ಸದಾಶಿವ ಶಿವಗಿರಿ ಅವರನ್ನು ತಾಲೂಕು ಪಂಚಾಯತ್ ಸದಸ್ಯರಾದ ಗಾಯತ್ರಿ ರವೀಂದ್ರ ಸಫಲ್ಯ ಗೌರವಿಸಿದರು.

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆ ಉಪ ಯೋಜನಾ ಸಮನ್ವಯಧಿಕಾರಿ ಲೋಕೇಶ್, ಡಯಟ್ ಉಪನ್ಯಾಸಕ ಶ್ರೀನಿವಾಸ ಅಡಿಗ, ಗುರುಲಿಂಗಯ್ಯ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ರಾಧಾಕೃಷ್ಣ ಭಟ್, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷೆ ಜಯಶ್ರೀ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಆರತಿ ಅಮೀನ್, ತೀರ್ಪುಗಾರರಾದ ಗೋಪಾಲಕೃಷ್ಣ ಆದ್ಯಪಾಡಿ, ವಾಸುದೇವ ಕಾರಂತ ಉಪಸ್ಥಿತರಿದ್ದರು.

ಫಲಿತಾಂಶ: ಸ್ಪರ್ಧೆಯಲ್ಲಿ ಇಂದ್ರಪ್ರಸ್ಥ ಉಪ್ಪಿನಂಗಡಿ ಪ್ರಥಮ, ಕೊಣಾಜೆಪದವು ಸರಕಾರಿ ಪ್ರೌಢಶಾಲೆ ದ್ವಿತೀಯ, ಶಂಭೂರು ತೃತೀಯ ಸ್ಥಾನ ಪಡೆಯಿತು. ಮುಖ್ಯ ಶಿಕ್ಷಕರಾದ ಕಮಲಾಕ್ಷ ಕಲ್ಲಡ್ಕ ಸ್ವಾಗತಿಸಿ, ಶಿಕ್ಷಕಿ ಸುಜಾತ ವಂದಿಸಿದರು. ಶಿಕ್ಷಕ ಹರಿಪ್ರಸಾದ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಸದಾಶಿವ ನಾಯಕ್, ಭಾರತಿ, ಪ್ರಕಾಶ್, ವರಮಹಾಲಕ್ಷ್ಮೀ, ವಸಂತಿ, ಚಿನ್ನಪ್ಪ ಜಾಲ್ಸೂರು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News