ದಲಿತರ ದೂರಿಗೆ ಎಫ್ಐಆರ್ ದಾಖಲಿಸಲು ವಿಳಂಬ: ದೂರು ದಾಖಲು
ಉಡುಪಿ, ಆ.30: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಲಿತರ ಮೇಲಾಗುವ ಪ್ರಕರಣಕ್ಕೆ ಸಂಬಂಧಿಸಿ ಲಿಖಿತ ದೂರು ಕೊಟ್ಟರೂ ಎಫ್ಐಆರ್ ದಾಖಲಾತಿಗೆ ವಿನಾ ಕಾರಣ ವಿಳಂಬ ಮಾಡಲಾಗುತ್ತದೆ. ಈ ಬಗ್ಗೆ ಎಸ್ಪಿ ಗಮನಕ್ಕೆ ತಂದರೂ ಯಾವುದೇ ಪ್ರಕರಣ ದಾಖಲಿಸಿಕೊಳ್ಳದ ಪರಿಣಾಮ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗಿದೆ ಎಂದು ದಲಿತ ಮುಖಂಡ ಶೇಖರ್ ಹಾವಂಜೆ ಹೇಳಿದ್ದಾರೆ.
ಶುಕ್ರವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೇಖರ್ ಹಾವಂಜೆ, ದಲಿತರು ತಮ್ಮ ನೋವಿನ ಬಗ್ಗೆ ಸಂಬಂಧಿಸಿದ ಪೊಲೀಸ್ ಠಾಣೆ, ಡಿವೈಎಸ್ಪಿ, ಎಸ್ಪಿ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಲಿಖಿತ ದೂರು ಕೊಟ್ಟರೂ ಎ್ಐಆರ್ ದಾಖಲಾತಿಗೆ ವಿಳಂಬ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಕೀಲರನ್ನು ಸಂಪರ್ಕಿಸಿ ಖಾಸಗಿ ದೂರು ಕೊಟ್ಟಿದ್ದೇವೆ. ನ್ಯಾಯಾಲಯವು ನಮ್ಮ ಮನವಿಗೆ ಪುರಸ್ಕರಿಸಿ ಪಶ್ಚಿಮ ವಲಯ ಐಜಿಪಿ ಅವರಿಗೆ ಕೇಸು ಹಸ್ತಾಂತರಿಸಿದೆ ಎಂದು ಅವರು ಮಾಹಿತಿ ನೀಡಿದರು.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲೇ ನಾನೇ ಲಿಖಿತ ದೂರು ಕೊಟ್ಟಿದ್ದು, ಎ್ಐಆರ್ ದಾಖಲಿಸಿಕೊಳ್ಳದೇ ಕರ್ತವ್ಯ ಲೋಪ ಎಸಗಿದ್ದರು. ಈ ಬಗ್ಗೆ ಡಿವೈಎಸ್ಪಿ ಟಿ.ಆರ್.ಜೈಶಂಕರ್, ಎಸ್ಪಿ ನಿಶಾ ಜೇಮ್ಸ್ ಗಮನಕ್ಕೂ ತರಲಾಗಿತ್ತು. ಆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದೇ ರೀತಿ ಪಡುಬಿದ್ರೆ ಠಾಣಾ ಹಾಗೂ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಇಂತಹ ಪ್ರಕರಣ ನಡೆದಿವೆ. ಈ ಮೂರು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ಕೊಟ್ಟಿದ್ದೇವೆ ಎಂದರು.
ವಕೀಲ ಸತೀಶ್ಚಂದ್ರ ಕಾಳಾವರ್ಕರ್ ಮಾತನಾಡಿ, ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಸಾಕಷ್ಟು ಕಾನೂನುಗಳಿವೆ. ಆದರೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಕಾನೂನು ಅರಿವಿನ ಕೊರತೆವಿದ್ದು, ಅನ್ಯಾಯವಾಗುತ್ತಿದೆ. ದೌರ್ಜನ್ಯ ಕಾಯ್ದೆ ದುರ್ಬಳಕೆ ಆಗುತ್ತಿದೆ. ಈ ನಿಟ್ಟಿನಲ್ಲಿ ಸಂವಿಧಾನವನ್ನು ದೂರುವ ಬದಲು ಅಧಿಕಾರಿಗಳಿಗೆ ಎಸ್ಸಿ,ಎಸ್ಟಿ ಕಾನೂನು ಬಗ್ಗೆ ಅರಿವು ಕಾರ್ಯಾಗಾರ ಆಯೋಜಿಸುವುದು ಸೂಕ್ತ ಎಂದು ಸಲಹೆ ನೀಡಿರು.