ಉಡುಪಿ: ಅಂತರ್ ಶಾಲಾ ಸಿಬಿಎಸ್ಇ ಶಾಲೆಗಳ ಫುಟ್ಬಾಲ್ ಪಂದ್ಯಾಟ
ಉಡುಪಿ, ಆ.31: ಕ್ರೀಡಾಳುಗಳು ಕ್ರೀಡೆಯಲ್ಲಿ ಭಾಗವಹಿಸುವಾಗ ಕ್ರೀಡಾ ಮನೋಭಾವನೆ ಬೆಳಸಬೇಕು. ಸೋಲು-ಗೆಲುವಿನ ಕಡೆಗೆ ಗಮನ ಕೊಡದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮನೋಭಾವ ಬೆಳೆಸಬೇಕು. ಇದರಿಂದ ಭವಿಷ್ಯದಲ್ಲಿ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಮಣಿಪಾಲ ಡಾ.ಟಿ. ಎಂ.ಎ. ಪೈ ಶಿಕ್ಷಣ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಡೈಝಿ ವಾಝ್ ಹೇಳಿದ್ದಾರೆ.
ಶಿರ್ವ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಶನಿವಾರ ಆಯೋಜಿಸಲಾದ ಉಡುಪಿ ಜಿಲ್ಲಾ ಅಂತರ್ ಶಾಲಾ ಸಿಬಿಎಸ್ಇ ಶಾಲೆಗಳ ಫುಟ್ಬಾಲ್ ಪಂದ್ಯಾಟ ‘ಕಿಕ್ಆನ್-2019’ಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಸಂಚಾಲಕ ವಂ.ಡೆನಿಸ್ ಡೆಸಾ ಮಾತ ನಾಡಿ, ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನವನ್ನು ವಿಪರೀತ ಆಹಾರ ಸೇವನೆ, ಜಂಕ್ಫುಡ್ ಉಪಯೋಗ, ಎಸಿ ಕೊಠಡಿಯಲ್ಲಿ ಹಾಗೂ ಕಂಪ್ಯೂಟರ್ಗಳಲ್ಲಿ ತಮ್ಮ ಸಮಯವನ್ನ ವ್ಯರ್ಥ ಮಾಡುತ್ತಿದ್ದಾರೆ. ಇದರಿಂದ ದೇಹಕ್ಕೆ ವ್ಯಾಯಾಮ ನೀಡುವ ವಿಚಾರವನ್ನು ಸಂಪೂರ್ಣ ಮರೆತು ಬಿಟ್ಟಿದ್ದಾರೆ. ಕ್ರೀಡೆ ಆರೋಗ್ಯವನ್ನು ಬೆಳೆಸುವುದರಿಂದ ಜೀವನದಲ್ಲಿ ಸುಖಮಯವಾಗಿ ಬದುಕಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಶೈಕ್ಷಣಿಕ ವಿಚಾರದೊಂದಿಗೆ ಮಾನಸಿಕ ಆರೋಗ್ಯ ಕ್ಕಾಗಿ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದರು.
ಶಾಲಾ ಪ್ರಾಂಶುಪಾಲ ವಂ.ಮಹೇಶ್ ಡಿಸೋಜ, ಶಿರ್ವ ಚರ್ಚಿನ ಸಹಾ ಯಕ ಧರ್ಮಗುರು ವಂ.ಅಶ್ವಿನ್ ಆರಾನ್ಹಾ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಿಲ್ಸನ್ ಡಿಸೋಜ, ಕಾರ್ಯದರ್ಶಿ ಲೀನಾ ಮಚಾದೊ, 18 ಆಯೋಗಗಳ ಸಂಚಾಲಕ ಮೆಲ್ವಿನ್ ಆರಾನ್ಹಾ, ಶಾಲಾ ಆಡಳಿತ ಸಮಿತಿಯ ಜ್ಯೂಲಿಯನ್ ರೊಡ್ರಿಗಸ್, ಡಯಾನಾ, ಮೆಲ್ವಿನ್ ಡಿಸೋಜ, ನೊರ್ಬಟ್ ಮಚಾದೊ, ತ್ರಾಸಿ ಡಾನ್ ಬೊಸ್ಕೊ ಶಾಲೆಯ ವಂ.ಮ್ಯಾಕ್ಷಿಮ್ ಡಿಸೋಜ ಉಪಸ್ಥಿತರಿದ್ದರು.
ಪ್ರಿಯಾ ಡಿಂಪಲ್ ಸ್ವಾಗತಿಸಿದರು. ಸವಿತಾ ವಂದಿಸಿದರು. ಜಿಲ್ಲೆಯ 11 ಸಿಬಿಎಸ್ಇ ಶಾಲೆಗಳ ವಿದ್ಯಾರ್ಥಿಗಳು ಅಂತರ್ ಶಾಲಾ ಸಿಬಿಎಸ್ಇ ಶಾಲೆಗಳ ಫುಟ್ಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ್ದರು.