ಬೈಂದೂರು ಬಳಿ ಕಾರುಗಳ ಮಧ್ಯೆ ಅಪಘಾತ: ಭಟ್ಕಳದ ಉದ್ಯಮಿ ಮೃತ್ಯು: ನಾಲ್ವರಿಗೆ ತೀವ್ರ ಗಾಯ

Update: 2019-08-31 16:59 GMT

ಬೈಂದೂರು, ಆ.31: ಎರಡು ಕಾರುಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಭಟ್ಕಳದ ಹೋಟೆಲ್ ಉದ್ಯಮಿಯೊಬ್ಬರು ಮೃತಪಟ್ಟು, ನಾಲ್ವರು ತೀವ್ರವಾಗಿ ಗಾಯಗೊಂಡ ಘಟನೆ ಬೈಂದೂರು ಸಮೀಪದ ನಾಯ್ಕನಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ  ನಡೆದಿದೆ.

ಮೃತರನ್ನು ಭಟ್ಕಳದ ಸಿಟಿಲೈಟ್ ಹೊಟೇಲಿನ ಮಾಲಕ ನೂರುಲ್ ಅಮೀನ್(48) ಎಂದು ಗುರುತಿಸಲಾಗಿದೆ. ಇನ್ನೊಂದು ಕಾರಿನಲ್ಲಿದ್ದ ಮುರ್ಡೇ ಶ್ವರದ ಲಲಿತಾ, ರಮೇಶ್ ಆಚಾರ್ಯ, ಗಣಪತಿ ಆಚಾರ್ಯ, ಚಾಲಕ ಗೋವಿಂದ ನಾಯ್ಕ ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನೂರುಲ್ ಅಮೀನ್ ಮಂಗಳೂರು ವಿಮಾನ ನಿಲ್ದಾಣಕ್ಕೆ ತನ್ನ ಸ್ವಿಫ್ಟ್ ಕಾರಿನಲ್ಲಿ ತೆರಳಿ ವಾಪಸ್ ಭಟ್ಕಳಕ್ಕೆ ಹೋಗುತ್ತಿದ್ದಾಗ ಎದುರಿನಲ್ಲಿ ಬಂದ ಇಯಾನೋ ಕಾರಿಗೆ ಮುಖಾಮುಖಿ ಢಿಕ್ಕಿ ಹೊಡೆತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ನೂರುಲ್ ಅಮೀನ್ ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟರೆನ್ನಲಾಗಿದೆ.

ಸ್ವಿಫ್ಟ್ ಕಾರಿನಲ್ಲಿ ಇವರೊಬ್ಬರೇ ಪ್ರಯಾಣಿಸುತ್ತಿದ್ದರೆಂದು ತಿಳಿದುಬಂದಿದೆ. ಅಪಘಾತದಿಂದ ಎರಡು ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News