ಅಭಿವೃದ್ಧಿಗಾಗಿ ಆದರ್ಶ ರಾಜಕಾರಣ: ನಳಿನ್ ಕುಮಾರ್ ಕಟೀಲು

Update: 2019-09-03 11:06 GMT

ಮಂಗಳೂರು, ಸೆ.3: ದ.ಕ. ಜಿಲ್ಲೆಯ ಅಭಿವೃದ್ಧಿಗಾಗಿ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದೊಂದಿಗೆ ಬೆರೆತು ಆದರ್ಶ ರಾಜಕಾರಣಕ್ಕಾಗಿ ಪ್ರಯತ್ನ ಮಾಡುತ್ತೇನೆ ಎಂದು ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ವಿವಿಧ ಸಂಘಟನೆಗಳು ಹಾಗೂ ಮುಸ್ಲಿಮ್ ಮುಖಂಡರ ವತಿಯಿಂದ ನಗರದ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಬಂದವನು. ಅಲ್ಲಿ ನನಗೆ ರಾಷ್ಟ್ರಭಕ್ತಿ ಹಾಗೂ ಮನುಷ್ಯನಲ್ಲಿ ದೇವರನ್ನು ಕಾಣು ಎಂದು ತಿಳಿಸಿಕೊಟ್ಟಿದ್ದಾರೆ. ಈ ಬಗ್ಗೆ ಯಾರಿಗೂ ಸಂಶಯ ಬೇಡ. ನಾನು ಹುಟ್ಟಿ ಬೆಳೆದ ನನ್ನ ಹಳ್ಳಿಯ ವಾರ್ಡ್ ಶೇ.80ರಷ್ಟು ಮುಸ್ಲಿಮರು ಇದ್ದ ಪ್ರದೇಶ. ಆದರೆ ಅಲ್ಲಿ ಬಿಜೆಪಿ ಸದಸ್ಯರು ಆಯ್ಕೆಯಾಗುತ್ತಿದ್ದರು.ರಾಜಕೀಯ ಕಾರಣದಿಂದ ಈ ವಾತಾವರಣ ಬದಲಾಗಿದೆ. ಈ ದಿನ ನೀವು ಪ್ರೀತಿ, ವಿಶ್ವಾಸದಿಂದ ಮಾಡಿದ ಗೌರವ ನನ್ನ ಬದುಕಿನಲ್ಲಿ ಅವಿಸ್ಮರಣೀಯ ಎಂದು ನಳಿನ್ ಕುಮಾರ್ ನುಡಿದರು.

ನಾನು ಕಂಡ ಹಿಂದು-ಮುಸ್ಲಿಮರ ನಡುವಿನ ಪ್ರೀತಿ, ವಿಶ್ವಾಸ ಈ ಜಿಲ್ಲೆಯಲ್ಲಿ ಇನ್ನೂ ಇದೆ. ನನಗೂ ನನ್ನ ಕಷ್ಟದ ದಿನಗಳಲ್ಲಿ ಮುಸ್ಲಿಮ್ ಬಂಧುಗಳು ಪ್ರೀತಿ, ವಿಶ್ವಾಸ ತೋರಿದ್ದಾರೆ. ನಾನು ತೋರಿಕೆಗಾಗಿ ನಾಟಕ ಮಾಡುತ್ತಿಲ್ಲ. ನ್ಯಾಯಯುತವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಎಲ್ಲರಿಗೂ ದೊರಕಿಸಿಕೊಡುವುದು ನನ್ನ ಹೊಣೆಗಾರಿಕೆ ಎಂದು ತಿಳಿದು ಕಾರ್ಯನಿರ್ವಹಿಸುತ್ತೇನೆ. ಈ ಸನ್ಮಾನ ನನ್ನ ಜವಾಬ್ದಾರಿ ಯನ್ನು ಹೆಚ್ಚಿಸಿದೆ ಎಂದು ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.

ಮಾಜಿ ಶಾಸಕ ರುಕ್ಮಯ ಪೂಜಾರಿ ಮಾತನಾಡಿ, ನಂಬರ್ ಒನ್ ಸಂಸದರಾಗಿ ಕಾರ್ಯನಿರ್ವಹಿಸಿದ ನಳಿನ್ ಕುಮಾರ್ ಅವರ ಸಾಮರ್ಥ್ಯವನ್ನು ಅರಿತು ಅವರಿಗೆ ಬಿಜೆಪಿ ರಾಜ್ಯದ ಅಧ್ಯಕ್ಷ ಹುದ್ದೆಯನ್ನು ನೀಡಿದೆ. ಅವರು ಜಾತ್ಯತೀತ ನೆಲೆಯಲ್ಲಿ ಎಲ್ಲರನ್ನು ಸಮಾನವಾಗಿ ಕಾಣುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಶುಭ ಹಾರೈಸಿದರು. ಹುಸೈನ್ ದಾರಿಮಿ ಮಾತನಾಡಿ, ರಾಜ್ಯದ ಎಲ್ಲ ಜನರ ನಡುವೆ ಸೌಹಾರ್ದವನ್ನು ಕಾಪಾಡುವ ಕೆಲಸವನ್ನು ಬಿಜೆಪಿಯ ಅಧ್ಯಕ್ಷ ನಳಿನ್ ಕುಮಾರ್ ಮಾಡಲಿ ಎಂದು ಅಭಿನಂದಿಸಿದರು.

ದ.ಕ. ಜಿಲ್ಲಾ ಹಜ್ ಕಮಿಟಿಯ ಅಧ್ಯಕ್ಷ ವೈ.ಮುಹಮ್ಮದ್ ಕುಂಞಿ ಮಾತನಾಡಿ ಶುಭ ಹಾರೈಸಿದರು.

ಯೆನೆಪೊಯ ವಿ.ವಿ. ಕುಲಾಧಿಪತಿ ಅಬ್ದುಲ್ಲಾ ಕುಂಞಿ ಮಾತನಾಡಿ, ನಳಿನ್ ಕುಮಾರ್ ಅವರ ಸರಳತೆ, ಸಾಮರ್ಥ್ಯವನ್ನು ಗುರುತಿಸಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನೀಡಿದೆ ಎಂದು ಶುಭ ಹಾರೈಸಿದರು.

ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪಿ.ಬಿ.ಅಬ್ದುಲ್ ಹಮೀದ್ ಮಾತನಾಡಿ, ದಿ.ಶ್ರೀನಿವಾಸ ಮಲ್ಯರ ರೀತಿಯಲ್ಲಿ ಈ ಜಿಲ್ಲೆಯ ಅಭಿವೃದ್ಧಿಗೆ ಸಂಸದ ನಳಿನ್ ಕುಮಾರ್ ಕಟೀಲು ಕೊಡುಗೆ ನೀಡುವಂತಾಗಲಿ ಎಂದು ಹಾರೈಸಿದರು.

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಉಳ್ಳಾಲದ ಸೈಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಜಿ.ಎ.ಬಾವ ಮಾತನಾಡಿ, ಜನರ ಸಮಸ್ಯೆಗಳ ಬಗ್ಗೆ ಸ್ಪಂದಿಸುವ ಸಂಸದ ನಳಿನ್ ಕುಮಾರ್, ಇತ್ತೀಚೆಗೆ 9 ಲಕ್ಷ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ವಿಳಂಬವಾದ ಸಮಸ್ಯೆಯ ಪರಿಹಾರಕ್ಕೆ ಸಚಿವ ಡಿ.ವಿ.ಸದಾನಂದ ಜೊತೆ ಸೇರಿ ಸೂಕ್ತವಾಗಿ ಸ್ಪಂದಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್‌ನ ಸಂಸ್ಥಾಪಕ ಅಬ್ದುರ್ರವೂಫ್ ಪುತ್ತಿಗೆ, ಅಬ್ದುಲ್ ಮಜೀದ್ ಸೂರಲ್ಪಾಡಿ, ಯೂಸುಫ್ ಬಾಖವಿ ಮತ್ತಿತರರು ಮಾತನಾಡಿ ಶುಭ ಹಾರೈಸಿದರು.

ಉದ್ಯಮಿಗಳಾದ ಸಿರಾಜ್ ಅಹ್ಮದ್, ಪಿ.ಸಿ.ಹಾಶಿರ್, ಸಿ.ಮಹ್ಮೂದ್ ಹಾಜಿ, ಮಾಜಿ ಡಿವೈಎಸ್ಪಿ ಶರೀಫ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಬಿ.ಅಬ್ದುಲ್ ರಹಿಮಾನ್, ಹನೀಫ್ ಹಾಜಿ ಬಂದರ್, ನೌಶಾದ್ ಹಾಜಿ ಸೂರಲ್ಪಾಡಿ ಸಂಘಟಕರಾದ ರಝಾಕ್ ಬಿ.ಸಿ.ರೋಡ್, ಹಮೀದ್ ಹಾಜಿ ಬಂದರ್, ಫಕೀರಬ್ಬ ಮಾಸ್ಟರ್ ಫ್ಲವರ್ಸ್‌, ಮುಸ್ತಫಾ ಫರಂಗಿಪೇಟೆ ಅವರು ನಳಿನ್‌ರನ್ನು ಅಭಿನಂದಿಸಿದರು.

ರಫೀಕ್ ಮಾಸ್ಟರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಲೀಂ ಅಲ್ತಾಫ್ ವಂದಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News